ಕನ್ನಡಿಗ ಮನೀಶ್ ಪಾಂಡೆ ಯಾಕೆ RCB ನಾಯಕನಾಗಬಾರದು..?
ಕನ್ನಡಿಗ, ನಮ್ಮ ಹುಡುಗ, ಕರ್ನಾಟಕ ತಂಡದ ಯಶಸ್ವಿ ನಾಯಕ, ದೇಶೀಯ ಟಿ20 ಕ್ರಿಕೆಟ್”ನ ಬೆಸ್ಟ್ ಕ್ಯಾಪ್ಟನ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಲು ಇದಕ್ಕಿಂತ ಹೆಚ್ಚಿನ ಅರ್ಹತೆ ಇನ್ನೇನು ಬೇಕು.?
ನಾವು ಹೇಳಹೊರಟಿರೋದು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಮನೀಶ್ ಪಾಂಡೆ ಬಗ್ಗೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಕಿಂಗ್ ಕೊಹ್ಲಿ RCB ನಾಯಕತ್ವ ತೊರೆದು ಹೊಸ ನಾಯಕನ ಆಗಮನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹಾಗಾದರೆ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಯಾರು.? ಈ ಪ್ರಶ್ನೆಗೆ ಉತ್ತರ ಎಂಬಂತೆ 3-4 ಹೆಸರುಗಳು ಚರ್ಚೆಯಾಗುತ್ತಿವೆ.
ಕನ್ನಡಿಗರಾದ ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಮುಂಬೈನ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಈಗಾಗಲೇ RBC ಪಾಳೆಯದಲ್ಲಿರುವ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್”ವೆಲ್… RCB ನಾಯಕತ್ವಕ್ಕೆ ಕೇಳಿ ಬರುತ್ತಿದ್ದ ಹೆಸರುಗಳಿವು. ಈ ಪೈಕಿ ಕೆ.ಎಲ್ ರಾಹುಲ್ ಲಕ್ನೋ ತಂಡದ ನಾಯಕರಾಗುವುದು ಖಚಿತವಾಗಿರುವ ಕಾರಣ RCB ನಾಯಕತ್ವಕ್ಕೆ ಅವರ ಹೆಸರು ರೂಲ್ಡ್ ಔಟ್. ಡೇವಿಡ್ ವಾರ್ನರ್’ಗೆ ಅಹ್ಮದಾಬಾದ್ ತಂಡ ಬಲೆ ಬೀಸಿದೆ. ಇನ್ನು ಗ್ಲೆನ್ ಮ್ಯಾಕ್ಸ್”ವೆಲ್ ಒಳ್ಳೆಯ ಆಟಗಾರನಾದರೂ ನಾಯಕತ್ವದಲ್ಲಿ ಮಿಂಚಿದ್ದು ಕಡಿಮೆ. ಉಳಿದಿರುವುದು ಶ್ರೇಯಸ್ ಅಯ್ಯರ್ ಮತ್ತು ಮನೀಶ್ ಪಾಂಡೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅಹ್ಮದಾಬಾದ್ ತಂಡದ ನಾಯಕನಾದರೂ ಅಚ್ಚರಿ ಪಡಬೇಕಿಲ್ಲ. ಆಗ ಉಳಿಯೋ ಆಯ್ಕೆ ಮನೀಶ್ ಪಾಂಡೆ.
ಮನೀಶ್ ಪಾಂಡೆ ಯಾಕೆ RCB ತಂಡದ ನಾಯಕನಾಗಬಾರದು..? ಈ ಪ್ರಶ್ನೆ ಸೋಷಿಯನ್ ಮೀಡಿಯಾದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಮನೀಶ್ ಪಾಂಡೆಯನ್ನು ನಾಯಕನನ್ನಾಗಿ ಮಾಡಲು RCB ಫ್ರಾಂಚೈಸಿ ಕೂಡ ಉತ್ಸುಕವಾಗಿದೆ ಎಂದು ವರದಿಯಾಗಿದೆ. ಈಗಿರುವ ಸನ್ನಿವೇಶದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ಮನೀಶ್ ಪಾಂಡೆಗಿಂತ ಒಳ್ಳೆಯ ಆಯ್ಕೆ ಬೇರೊಂದಿಲ್ಲ. ಯಾಕಂದ್ರೆ ಪಾಂಡೆ ದೇಶೀಯ ಕ್ರಿಕೆಟ್’ನ ಬೆಸ್ಟ್ ಟಿ20 ಕ್ಯಾಪ್ಟನ್. ಇದಕ್ಕೆ ದಾಖಲೆಗಳೇ ಸಾಕ್ಷಿ.
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಮನೀಶ್ ಪಾಂಡೆ ನಾಯಕತ್ವದಲ್ಲಿ 2018 ಹಾಗೂ 2019ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. 2019ರ ಫೈನಲ್”ನಲ್ಲಿ ಮಹಾರಾಷ್ಟ್ರ ವಿರುದ್ಧ ಪಾಂಡೆ ಸ್ಫೋಟಕ 60 ರನ್ ಸಿಡಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಬಾರಿಯ ಟೂರ್ನಿಯಲ್ಲಿ ಪಾಂಡೆ ನಾಯಕತ್ವದಲ್ಲಿ ಫೈನಲ್ ತಲುಪಿದ್ದ ಕರ್ನಾಟಕ, ಫೈನಲ್’ನಲ್ಲಿ ತಮಿಳುನಾಡು ವಿರುದ್ಧ ಸೋಲು ಕಂಡಿತ್ತು.
ಸೈಯದ್ ಮುಷ್ತಾಕ್ ಅಲಿ ಟಿ20: ಮನೀಶ್ ಪಾಂಡೆ ನಾಯಕತ್ವದ ದಾಖಲೆ
34 ಪಂದ್ಯ
29 ಗೆಲುವು
05 ಸೋಲು
ಮನೀಶ್ ಪಾಂಡೆ ದೇಶೀಯ ಟಿ20 ಕ್ರಿಕೆಟ್”ನ ಅತ್ಯುತ್ತಮ ನಾಯಕ ಎಂಬುದನ್ನು ದಾಖಲೆಗಳೇ ಹೇಳುತ್ತವೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ನಾಯಕ ಮನೀಶ್ ಪಾಂಡೆ.
ದೇಶೀಯ ಟಿ20 ಕ್ರಿಕೆಟ್: ನಾಯಕತ್ವದ ದಾಖಲೆ
ಆಟಗಾರ ಪಂದ್ಯ ಗೆಲುವು ಸೋಲು
ಮನೀಶ್ ಪಾಂಡೆ 34 29 05
ದಿನೇಶ್ ಕಾರ್ತಿಕ್ 32 28 04
ಮನೋಜ್ ತಿವಾರಿ 43 35 08
ಟಿ20 ಕ್ರಿಕೆಟ್ ಅಷ್ಟೇ ಅಲ್ಲದೆ, ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲೂ ಮನೀಶ್ ಪಾಂಡೆ ನಾಯಕತ್ವದಲ್ಲಿ ಮಿಂಚಿದ್ದಾರೆ. 2019-20ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಮನೀಶ್ ಪಾಂಡೆ ನಾಯಕತ್ವದಲ್ಲೇ ಚಾಂಪಿಯನ್ ಆಗಿತ್ತು. ಹೀಗೆ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ತಂಡ ಪಾಂಡೆ ಸಾರಥ್ಯದಲ್ಲಿ ಒಟ್ಟು 3 ಪ್ರಶಸ್ತಿಗಳನ್ನು ಗೆದ್ದಿದೆ.
ದೇಶೀಯ ಟಿ20 ಕ್ರಿಕೆಟ್’ನಲ್ಲಿ ನಾಯಕನಾಗಿ ಅಷ್ಟೇ ಅಲ್ಲದೆ, ಬ್ಯಾಟ್ಸ್’ಮನ್ ಆಗಿಯೂ ಮನೀಶ್ ಪಾಂಡೆ ಯಶಸ್ಸು ಗಳಿಸಿದ್ದಾರೆ. 34 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ, 140ರ ಸ್ಟ್ರೈಕ್”ರೇಟ್”ನಲ್ಲಿ 2 ಶತಕ, 9 ಅರ್ಧಶಕಗಳ ಸಹಿತ ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಪಾಂಡೆ, ತಾವೊಬ್ಬ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಇತ್ತೀಚಿನ ಕೆಲ ಐಪಿಎಲ್ ಟೂರ್ನಿಗಳಲ್ಲಿ ಮನೀಶ್ ಪಾಂಡೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿಲ್ಲ ಎಂಬ ವಾದವಿದೆ. ಇದು ನಿಜ ಕೂಡ. ಪಾಂಡೆಗಿರೋ ಸಾಮರ್ಥ್ಯಕ್ಕೆ ಆತ ಈಗ ಎಲ್ಲಿಯೋ ಇರ್ಬೇಕಿತ್ತು. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಮನೀಶ್ ಪಾಂಡೆ 2009ರ ಐಸಿಸಿ U-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಆಟಗಾರ. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಕೂಡ ಆಗಿತ್ತು. ಅದೇ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಮನೀಶ್ ಪಾಂಡೆ, ಐಪಿಎಲ್’ನಲ್ಲಿ ಶತಕ ಗಳಿಸಿದ ಭಾರತದ ಮೊಟ್ಟ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದರು. ಆದಾದ ಬಳಿಕ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜನಾಗಿ ಬೆಳೆದು ನಿಂತ್ರೆ, ಮನೀಶ್ ಪಾಂಡೆ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆಟದಲ್ಲಿ ಸ್ಥಿರತೆ, ಕ್ರಿಕೆಟ್ ಕಡೆಗಿನ ಬದ್ಧತೆ, ಆಟದ ಕಡೆಗಿನ ಗಮನ, ಜೀವನದಲ್ಲಿ ಶಿಸ್ತು ಮಾಯವಾಯಿತು. ಇದೆಲ್ಲವನ್ನೂ ಮೈಗೂಡಿಸಿಕೊಂಡ ವಿರಾಟ್ ಕೊಹ್ಲಿ 33ನೇ ವಯಸ್ಸಿಗೆ ಕ್ರಿಕೆಟ್ ಜಗತ್ತಿನ ದಿಗ್ಗಜ ಅಂತ ಕರೆಸಿಕೊಂಡ್ರೆ, ವಿರಾಟ್ ಕೊಹ್ಲಿ ಜೊತೆ ಜೊತೆಗೇ ಕ್ರಿಕೆಟ್ ಆರಂಭಿಸಿದ್ದ ಮನೀಶ್ ಪಾಂಡೆ ಕ್ರಿಕೆಟ್ ದಿಗ್ಗಜನಾಗುವ ಮಾತು ಪಕ್ಕಕ್ಕಿರ್ಲಿ, ಭಾರತ ತಂಡದಲ್ಲಿ ಖಾಯಂ ಸ್ಥಾನವನ್ನೂ ಪಡೆಯಲಿಲ್ಲ.
ಇದು ಮನೀಶ್ ಪಾಂಡೆ ಕ್ರಿಕೆಟ್ ಬದುಕಿನ ಮತ್ತೊಂದು ಮಜಲು. ಮತ್ತೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಇದೇ ಹೊತ್ತಲ್ಲಿ ಐಪಿಎಲ್’ನಲ್ಲಿ ಹೊಸ ಅವಕಾಶದ ಬಾಗಿಲು ತೆರೆದುಕೊಂಡಿದೆ. ಒಂದು ವೇಳೆ RCB ತಂಡಕ್ಕೆ ಮನೀಶ್ ಪಾಂಡೆ ನಾಯಕನಾದರೆ, ಅದು ಅವರ ಕ್ರಿಕೆಟ್ ವೃತ್ತಿಬದುಕಿನ ಹೊಸ ಇನ್ನಿಂಗ್ಸ್ ಆಗುವುದರಲ್ಲಿ ಅನುಮಾನವಿಲ್ಲ.