ನಂಬಿಕೆ – ಆತ್ಮವಿಶ್ವಾಸವೇ ವಿರಾಟ್ ಕೊಹ್ಲಿಯ ಶಕ್ತಿ ಮತ್ತು ಯುಕ್ತಿ..!
ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೆಡಿಯಾಗುತ್ತಿದ್ದಾರೆ. ಕಹಿ ಘಟನೆಗಳನ್ನು ಮರೆತು ತನ್ನ ಬ್ಯಾಟ್ ನಿಂದಲೇ ಎಲ್ಲದಕ್ಕೂ ಉತ್ತರ ನೀಡುವ ಲೆಕ್ಕಚಾರದಲ್ಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ .
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ತಿರುಗಿ ಬಿದ್ದಿರುವ ವಿರಾಟ್ ಕೊಹ್ಲಿ ಬಿಸಿಸಿಐನ ಶಿಸ್ತು ಸಮಿತಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಕ್ರಿಕೆಟ್ ಗಿಂತ ಯಾರು ದೊಡ್ಡವರಲ್ಲ. ಆಡಳಿತ ಮಂಡಳಿಯ ವಿರುದ್ಧ ಬಹಿರಂಗವಾಗಿ ಮಾತನಾಡುವ ಹಾಗಿಲ್ಲ. ಆಟಕ್ಕೆ ಬೆಲೆಕೊಡಬೇಕು. ಸಮಸ್ಯೆಗಳನ್ನು ತಾವೇ ಬಗೆ ಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ತನ್ನ ಸಿಟ್ಟನ್ನು ಬಹಿರಂಗವಾಗಿ ತೋರಿಸಿದ್ರೆ ಶಿಸ್ತು ಕ್ರಮ ತೆಗೆದುಕೊಳ್ಳಲೇಬೇಕು. ಅದಕ್ಕೆ ನಿದರ್ಶನ ಅಂದ್ರೆ ಕ್ರಿಕೆಟ್ ಆಸ್ಟ್ರೇಲಿಯಾ. ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ವಿರುದ್ಧ ತೆಗೆದುಕೊಂಡಿರುವ ಶಿಸ್ತು ಕ್ರಮ ಮುಟ್ಟಿ ನೋಡುವಂತೆ ಇತ್ತು. ಯಾಕಂದ್ರೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ನಂಬಿರುವುದು ಕ್ರಿಕೆಟ್ ಆಟವನ್ನು.. ಬದಲಾಗಿ ಆಟಗಾರರನ್ನು ಅಲ್ಲ. ಅದೇ ರೀತಿ ಬಿಸಿಸಿಐ ಕೂಡ ಇಂಥ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕು.
ಇನ್ನು ವಿರಾಟ್ ಕೊಹ್ಲಿಯ ವಿಚಾರ ಇದೀಗ ಭಾರತೀಯ ಕ್ರಿಕೆಟ್ ನಲ್ಲಿ ತಲ್ಲಣವನ್ನುಂಟು ಮಾಡಿದೆ. ಇಲ್ಲಿ ಯಾರದ್ದು ಸರಿ ? ಯಾರದ್ದು ತಪ್ಪು ಎಂಬುದು ಮುಖ್ಯವಲ್ಲ. ಬಹಿರಂಗವಾಗಿ ಹೇಳಿಕೆ ನೀಡಿರುವುದು ಗಂಗೂಲಿದ್ದು ತಪ್ಪಿದೆ.. ವಿರಾಟ್ ಕೊಹ್ಲಿ ಅವರದ್ದು ತಪ್ಪಿದೆ. ಅದನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ.
ಒಬ್ಬ ಟೀಮ್ ಇಂಡಿಯಾವನ್ನು ಕಟ್ಟಿದ ನಾಯಕ.. ಹಾಲಿ ಬಿಸಿಸಿಐ ಅಧ್ಯಕ್ಷ.. ಮತ್ತೊಬ್ಬ ಬಲಿಷ್ಠ ಟೀಮ್ ಇಂಡಿಯಾದ ಯಶಸ್ವಿ ನಾಯಕ.. ಆಧುನಿಕ ಕ್ರಿಕೆಟ್ ನ ದಾಖಲೆಗಳ ಒಡೆಯ.
ಇಲ್ಲಿ ಆಗಿರೋದು ಪ್ರತಿಷ್ಠೆಯ ನಡುವಿನ ಕಿತ್ತಾಟ..ಹಾಗಂತ ಸುಮ್ಮನೆ ವಿರಾಟ್ ಕೊಹ್ಲಿಯವರನ್ನು ಟೀಮ್ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಸುವ ಕಾರ್ಯ ನಡೆದಿಲ್ಲ. ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬುದನ್ನು ಬಿಟ್ಟು ವಿರಾಟ್ ಕೊಹ್ಲಿಯವರ ನಾಯಕತ್ವವನ್ನು ಪ್ರಶ್ನೆ ಮಾಡುವ ಹಾಗಿಲ್ಲ.
ಹಾಗೇ ನೋಡಿದ್ರೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇದೇನು ಹೊಸದಲ್ಲ. ಗಂಗೂಲಿಯಿಂದ ಹಿಡಿದು ಧೋನಿ ನಾಯಕನಾಗುವ ತನಕವೂ ತಂಡದೊಳಗೆ ಭಿನ್ನಾಭಿಪ್ರಾಯಗಳಿದ್ದವು. ಅಷ್ಟೇ ಅಲ್ಲ, ಭಾರತದಲ್ಲಿ ಕ್ರಿಕೆಟ್ ಶುರುವಾದಗಿನಿಂದಲೂ ಕೂಡ ತಂಡದೊಳಗೆ ಒಳಜಗಳಗಳು ನಡೆಯುತ್ತಿದ್ದವು. ಈಗಲೂ ನಡೆಯುತ್ತಿದೆ. ಆದ್ರೆ ಗೆದ್ದಾಗ ಈ ಎಲ್ಲಾ ಸಂಗತಿಗಳು ಮೆರೆ ಮಾಚುತ್ತವೆ.
ಇದೀಗ ವಿರಾಟ್ ಕೊಹ್ಲಿಯ ವಿಚಾರದಲ್ಲಿ ಈ ಸ್ವರೂಪ ಪಡೆಯಲು ಮುಖ್ಯ ಕಾರಣ ತಂಡದೊಳಗಿನ ಆಟಗಾರರೇ.. ಕೆಲವರು ಸೈಲೆಂಟಾಗಿ ಬಿಸಿಸಿಐಗೆ ವರದಿ ನೀಡಿದ್ರೆ, ಮತ್ತೆ ಕೆಲವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅದ್ರಲ್ಲೂ ಅಶ್ವಿನ್ ಅವರು ಪರೋಕ್ಷವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ರು.
ಏತನ್ಮಧ್ಯೆ, ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ನೇಮಕಗೊಂಡಿರುವ ಕೊಹ್ಲಿ ನಾಯಕತ್ವಕ್ಕೆ ಕಂಟಕವಾಗಿ ಪರಿಣಮಿಸಿತ್ತು. ಅನಿಲ್ ಕುಂಬ್ಳೆಗೆ ಆಗಿದ್ದ ಪರಿಸ್ಥಿತಿ ರಾಹುಲ್ ದ್ರಾವಿಡ್ ಗೂ ಬರಬಾರದು ಅನ್ನೋ ಕಾರಣಕ್ಕೆ ವಿರಾಟ್ ಕೊಹ್ಲಿಯವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಿಸಿಸಿಐ ಈ ಮಾಸ್ಟರ್ ಪ್ಲಾನ್ ಮಾಡಿಕೊಂಡಿರುವುದು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅದ್ಭುತ ನಾಯಕ, ಅಪ್ರತಿಮ ಆಟಗಾರ. ಆದ್ರೆ ಅಷ್ಟೇ ಒರಟ, ಮುಂಗೋಪಿ.. ಅಹಂಕಾರಿ ಎಂಬುದು ಕೂಡ ಸುಳ್ಳಲ್ಲ. ಆದ್ರೂ ಒಂದು ನೆನಪಿಡಿ.. ವಿರಾಟ್ ಮೈದಾನಕ್ಕೆ ಇಳಿದ್ರೆ ಅವರ ತಲೆಯಲ್ಲಿ ಒಂದೇ ಇರೋದು.. ರನ್ ಗಳಿಸಬೇಕು.. ಗೆಲ್ಲಬೇಕು.. ಅಷ್ಟೇ ಅಲ್ಲ ತನ್ನ ಮೇಲೆ ಅಗಾಧವಾದ ನಂಬಿಕೆ ಮತ್ತು ಆತ್ಮವಿಶ್ವಾಸವೂ ಇದೆ. ಇದೇ ವಿರಾಟ್ ನ ಶಕ್ತಿಯೂ ಹೌದು,, ಯುಕ್ತಿಯೂ ಹೌದು.