ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಆರಂಭದ ಪಂದ್ಯಗಳಿಗೆ ಅಲಭ್ಯರಾಗಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಈಗ ಮತ್ತೆ ಗಾಯಗೊಂಡಿದ್ದಾರೆ. ಮುಂಗೈ ಗಾಯಕ್ಕೆ ಒಳಗಾಗಿರುವ ಸೂರ್ಯ ಕುಮಾರ್ ಯಾದವ್ ಮುಂಬೈ ಆಡುವ ಉಳಿದ4 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಬಳಿಕವೂ ಗಾಯಗೊಂಡಿದ್ದ ಸೂರ್ಯ ಕುಮಾರ್ ಯಾದವ್ ಎನ್ಸಿಎನಲ್ಲಿ ರಿಹ್ಯಾಬಿಲಿಟೇಷನ್ ಕ್ಯಾಂಪ್ ನಲ್ಲಿದ್ದರು. ಹೀಗಾಗಿ ಐಪಿಎಲ್ನ ಆರಂಭದ ಮೊದಲ ಪಂದ್ಯಗಳಿಗೆ ಲಭ್ಯರಾಗಿರಲಿಲ್ಲ. ಚೇತರಿಕೆ ಬಳಿಕ ಸೂರ್ಯ ಮುಂಬೈ ತಂಡ ಸೇರಿ ಬ್ಯಾಟಿಂಗ್ ಬಲ ತುಂಬಿದ್ದರು. ಆದರೆ ಗುಜರಾತ್ ವಿರುದ್ಧದ ಪಂದ್ಯದ ವೇಳೆ ಮತ್ತೆ ಗಾಯಗೊಂಡು ಐಪಿಎಲ್ ನ ಅಂತಿಮ ಪಂದ್ಯಗಳಿಗೆ ಲಭ್ಯವಿಲ್ಲ.
ಸೂರ್ಯ ಕುಮಾರ್ಗೆ ಆಗಿರುವ ಗಾಯ ಎಷ್ಟರ ಮಟ್ಟಿಗೆ ದೊಡ್ಡದು ಅನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸೂರ್ಯ ಲಭ್ಯರಾಗುವ ನಿರಿಕ್ಷೆ ಇದೆ. ಸೂರ್ಯ ಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಪರವಾಗಿ 8 ಇನ್ನಿಂಗ್ಸ್ಗಳಲ್ಲಿ 43.28 ಸರಸಾರಿಯಲ್ಲಿ 303 ರನ್ಗಳಿಸಿದ್ದರು.