ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಿಯೂ ಸೋತು ಕಂಗಾಲಾಗಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಜಯದ ನಗೆ ಬೀರಿತ್ತು. ಈಗ ಎರಡೂ ತಂಡಗಳು ಕಾದಾಟಕ್ಕೆ ಸಜ್ಜಾಗಿವೆ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಆರ್ಸಿಬಿ ಮೊದಲ ಗೆಲುವಿನ ಕನಸು ಕಾಣುತ್ತಿದ್ದರೆ, ಕೆಕೆಆರ್ ಗೆಲುವಿನ ಲಯ ಮುಂದುವರೆಸುವ ಯೋಜನೆ ರೂಪಿಸಿದೆ.
ತಂಡಗಳ ಬಲಾಬಲ ಏನು..?
ಆರ್ಸಿಬಿಯ ಬ್ಯಾಟಿಂಗ್ ಬಗ್ಗೆ ಎರಡು ಮಾತಿಲ್ಲ. ಫಾಫ್ ಡು ಪ್ಲೆಸಿಸ್, ಅನೂಜ್ ರಾವತ್, ವಿರಾಟ್ ಕೊಹ್ಲಿ ಆಟ ಅಗ್ರ ಕ್ರಮಾಂಕಕ್ಕೆ ಸ್ಥಿರತೆ ತಂದುಕೊಟ್ಟಿದೆ. ದಿನೇಶ್ ಕಾರ್ತಿಕ್, ಹಸರಂಗ ಡಿ ಸಿಲ್ವಾ ಮತ್ತು ಶಹಬಾಜ್ ಅಹ್ಮದ್ ಮಧ್ಯಮ ಹಾಗೂ ಕೆಳ ಕ್ರಮಾಂಕಕ್ಕೆ ಬಲ ತಂದು ಕೊಡಬಹುದು. ಶರ್ಫೇನ್ ರುದರ್ ಫೋರ್ಡ್ ಮತ್ತು ಡೇವಿಡ್ ವಿಲ್ಲಿಯ ಬ್ಯಾಟಿಂಗ್ ಶಕ್ತಿಯನ್ನು ಕೂಡ ಆರ್ಸಿಬಿ ಬಳಸಿಕೊಳ್ಳಬೇಕಿದೆ. ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಬೌಲಿಂಗ್ ನೇತೃತ್ವವಹಿಸಿಕೊಳ್ಳುವುದು ಖಚಿತ. ಆದರೆ ಆಕಾಶ್ ದೀಪ್ ಬದಲಿಗೆ ಸಿದ್ಧಾರ್ಥ್ ಕೌಲ್ ಅಥವಾ ಚಾಮಾ ಮಿಲಿಂದ್ ಅವರನ್ನು ಆಡಿಸಿಕೊಂಡರೆ ಒಳ್ಳೆಯದು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೇಲ್ನೋಟಕ್ಕೆ ಸಮಸ್ಯೆ ಇಲ್ಲದ ರೀತಿಯಲ್ಲಿ ಕಾಣುತ್ತಿದೆ. ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ನಿತಿಶ್ ರಾಣಾ, ಶ್ರೇಯಸ್ ಅಯ್ಯರ್, ಶೆಲ್ಡನ್ ಜಾಕ್ಸನ್ ಮತ್ತುಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟಿಂಗ್ ವಿಭಾಗದ ಬಲಗಳು. ಸುನೀಲ್ ನರೈನ್ ಅವರ ಬ್ಯಾಟಿಂಗ್ ಶಕ್ತಿಯನ್ನು ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಆ್ಯಂಡ್ರೆ ರಸೆಲ್ ಆಟಕ್ಕಿಳಿದರೆ ಫೋರ್ಗಳಿಗಿಂತ ಸಿಕ್ಸರ್ಗಳು ಹೆಚ್ಚು ಸಿಡಿಯಲಿವೆ. ಶಿವಂ ಮಾವಿ ಮತ್ತು ಉಮೇಶ್ ಯಾದವ್ ಬೌಲಿಂಗ್ ಆರಂಭಿಸಲಿದ್ದಾರೆ. ವರುಣ್ ಚಕ್ರವರ್ತಿ ಸ್ಪಿನ್ ಬಲೆಯ ಹೆಣೆಯುವ ಸ್ಪೆಷಲಿಸ್ಟ್
ವ್ಯತ್ಯಾಸ ಏನು..?
ಎರಡೂ ತಂಡಗಳ ನಡುವಿನ ವ್ಯತ್ಯಾಸ ಬೌಲಿಂಗ್ ಮಾತ್ರ. ಕೆಕೆಆರ್ ಬೌಲಿಂಗ್ನಲ್ಲಿ ಸಖತ್ ಸ್ಟ್ರಾಂಗ್ ಇದೆ. ನರೈನ್ ಮತ್ತು ವರುಣ್ ಚಕ್ರವರ್ತಿ ಮಿಸ್ಟರಿ ಸ್ಪಿನ್ ಬಲೆ ಹೆಣೆದರೆ ರನ್ಗಳಿಸುವುದು ಕಷ್ಟ. ಉಮೇಶ್ ಯಾದವ್, ಶಿವಂ ಮಾವಿ ಮತ್ತು ಆ್ಯಂಡ್ರೆ ರಸೆಲ್ ಬೌಲಿಂಗ್ ತುಂಬಾ ಚೆನ್ನಾಗಿದೆ. ಪಾರ್ಟ್ ಟೈಮ್ ಬೌಲರ್ ಬೇಕು ಅಂದರೆ ವೆಂಕಟೇಶ್ ಅಯ್ಯರ್ ಮತ್ತು ನಿತಿಶ್ ರಾಣಾ ಕೂಡ ಕೈ ಜೋಡಿಸಲಿದ್ದಾರೆ.
ಆರ್ಸಿಬಿಯ ಬೌಲಿಂಗ್ ಲಯದಲ್ಲಿಲ್ಲ. ಡೇವಿಡ್ ವಿಲ್ಲಿ ಆರಂಭದಲ್ಲಿ ಎಫೆಕ್ಟಿವ್. ಆದರೆ ಡೆತ್ ಓವರ್ಗಳಲ್ಲಿ ಕಷ್ಟ. ಮೊಹಮ್ಮದ್ ಸಿರಾಜ್ ಮೊದಲ ಪಂದ್ಯದಲ್ಲಿ ದುಬಾರಿ ಆಗಿದ್ದಾರೆ. ಮೂರನೇ ವೇಗಿಯ ಕೊರತೆ ಇದೆ. ಹಸರಂಗ ಎಡವಿದರೆ ಸ್ಪಿನ್ನರ್ ಕೋಟಾ ಮುಗಿಸುವುದು ಕಷ್ಟ. ಎಲ್ಲಕ್ಕಿಂತ ಮುಖ್ಯವಾಗಿ ಫಿನಿಷಿಂಗ್ ಟಚ್ ಕೊಡಬಲ್ಲ ಆಲ್ರೌಂಡರ್ ಆರ್ಸಿಬಿಯಲ್ಲಿಲ್ಲ.
ಪಿಚ್ ಹೇಗಿದೆ..?
ಡಿ.ವೈ. ಪಾಟೀಲ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ. ಹೀಗಾಗಿ ರನ್ ಮಳೆ ಖಚಿತ. ಮಿಸ್ಟ್ರಿ ಸ್ಪಿನ್ನರ್ಗಳ ಆಟದ ಬಗ್ಗೆ ಆರ್ಸಿಬಿ ಗಮನ ಕೊಡಬೇಕಿದೆ.