ಐಪಿಎಲ್ 15ನೇ ಆವೃತ್ತಿಯ ಪಂದ್ಯಗಳು ಸಿಕ್ಕಾಪಟ್ಟೆ ರೋಚಕವಾಗಿ ಸಾಗುತ್ತಿದೆ. ಕೊನೆಯ ಎರಡು ಓವರುಗಳಲ್ಲೇ ಫಲಿತಾಂಶ ನಿರ್ಧಾರವಾಗುತ್ತಿದೆ. ಹೀಗಾಗಿ ಸೋತರೂ ವಿರೋಚಿತವಾಗಿ ಹೋರಾಡಿದ ಸಮಾಧಾನ ಸೋತ ತಂಡಗಳಿಗೆ ಸಿಕ್ಕಿದೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಸೋತು ಕಂಗಾಲಾಗಿದೆ. 206 ರನ್ಗಳ ಬೃಹತ್ ಮೊತ್ತವನ್ನು ಕೂಡ ಆರ್ಸಿಬಿಗೆ ಉಳಿಸಿಕೊಳ್ಳಲಾಗಲಿಲ್ಲ. ಈಗ ಕೆಕೆಆರ್ ತಂಡದ ಎದುರು ಆಟಕ್ಕಿಳಿಯಲಿದೆ. ಕೆಕೆಆರ್ ಸೂಪರ್ ಹಿಟ್ಟರ್ಗಳನ್ನು ಹೊಂದಿದೆ. ಅದ್ಭುತ ಫಿನಿಷರ್ಗಳ ಲೈನ್ ಅಪ್ ಇದೆ. ಆದರೆ ಆರ್ಸಿಬಿ ಮೊದಲ ಪಂದ್ಯದಿಂದ ಕಲಿಯಬೇಕಾಗಿದ್ದು ಸಾಕಷ್ಟಿದೆ.
ಬೌಲರ್ಗಳಿಗೆ ಪಾಠ ಏನು..?
ಪಂಜಾಬ್ ವಿರುದ್ಧ ಆರ್ಸಿಬಿ ಎಕ್ಸ್ ಟ್ರಾ ರನ್ ಕೊಟ್ಟಿದ್ದೇ ದುಬಾರಿ ಆಗಿತ್ತು. ಹೀಗಾಗಿ ಮೊದಲು ಇದನ್ನು ಕಂಟ್ರೋಲ್ ಮಾಡಬೇಕಿದೆ. ವೈಡ್ ಮತ್ತು ಲೆಗ್ ಬೈಸ್ ಗಳು ಕಡಿಮೆ ಆದಷ್ಟು ತಂಡಕ್ಕೆ ನೆರವಾಗಲಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ ಎಲ್ಲಾ ಬೌಲರ್ಗಳು ದುಬಾರಿ ಆಗಿದ್ದರು. ಇದು ನಾಯಕನ ಒತ್ತಡವನ್ನು ಹೆಚ್ಚಿಸಿತ್ತು.
ಮೊದಲ ಪಂದ್ಯದಲ್ಲಿ ಆರ್ಸಿಬಿಯ ಬೆಸ್ಟ್ ಬೌಲರ್ ಶಹಬಾಸ್ ಅಹ್ಮದ್ ಮತ್ತು ಡೇವಿಡ್ ವಿಲ್ಲಿ. ಆದರೆ ಶಹಬಾಸ್ ಮೊದಲ ಓವರ್ ನಂತರ ಬೌಲಿಂಗ್ ಅವಕಾಶವನ್ನೇ ಪಡೆಯಲಿಲ್ಲ. ವಿಲಿ ಆರಂಭದಲ್ಲಿ 3 ಓವರ್ ಮಾಡಿದ್ದು ಬಿಟ್ಟರೆ ಡೆತ್ ಓವರ್ ನಲ್ಲಿ ಬೌಲಿಂಗ್ ಸಿಗಲಿಲ್ಲ. ಹೀಗಾಗಿ ಇವರಿಬ್ಬರ ಬೌಲಿಂಗ್ ಪ್ರತಿಭೆಯನ್ನು ಬಳಸಿಕೊಳ್ಳಬೇಕಿದೆ.
ಮೂರನೇ ವೇಗಿಯಾಗಿ ಆರ್ಸಿಬಿ ಆಕಾಶ್ ದೀಪ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ಆಕಾಶ್ ದುಬಾರಿ ಆಗಿದ್ದರು. ಈ ಜಾಗದಲ್ಲಿ ಸಿದ್ಧಾರ್ಥ್ ಕೌಲ್ ಅಥವಾ ಆಫ್ ಸ್ಪಿನ್ನಿಂಗ್ ಆಲ್ರೌಂಡರ್ ಆಡಿದರೆ ತಂಡದಲ್ಲಿ ವೇರಿಯೇಷನ್ ಸಿಗಲಿದೆ.
ಮೊಹ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಬೌಲಿಂಗ್ ಬಗ್ಗೆ ಹೆಚ್ಚು ಡಿಪೆಂಡ್ ಆಗಿರುವುದು ಆರ್ಸಿಬಿಯ ವೀಕ್ನೆಸ್. ಹರ್ಷಲ್ ಉತ್ತಮ ಡೆತ್ ಓವರ್ ಸ್ಪೆಷಲಿಸ್ಟ್ ಹೌದು. ಆದರೆ ಹರ್ಷಲ್ ವೇರಿಯೇಷನ್ಗಳನ್ನು ಬ್ಯಾಟರ್ಗಳು ಪಿಕ್ ಮಾಡಲು ಹೊರಟಿದ್ದಾರೆ. ಇದು ಕೊಂಚ ಗಲಿಬಿಲಿ ಉಂಟುಮಾಡುವ ವಿಷಯವಾಗಿದೆ. ಇನ್ನು ಸಿರಾಜ್ ಬಾಲ್ ಸ್ವಿಂಗ್ ಆಗದೇ ಇದ್ದರೆ ಉಪಯೋಗಕ್ಕೆ ಬರುವುದಿಲ್ಲ. ಬ್ಯಾಟಿಂಗ್ ಪಿಚ್ನಲ್ಲಿ ಸಿರಾಜ್ ಬೌಲಿಂಗ್ ನಂಬಿ ಕುಳಿತರೆ ಅಷ್ಟಕಷ್ಟೇ.
ಇನ್ನು ಆರ್ಸಿಬಿಯ ಮಿಲಿಯನ್ ಡಾಲರ್ ಬೇಬಿ ಹಸರಂಗ ಡಿ ಸಿಲ್ವಾ ಐಪಿಎಲ್ನಲ್ಲಿ ಇನ್ನೂ ಖದರ್ ತೋರಿಸಿಲ್ಲ. ಭಾರತೀಯ ಆಟಗಾರರನ್ನು ಹಸರಂಗ ತನ್ನ ಸ್ಪಿನ್ ಮೂಲಕ ಯಾಮರಿಸುವುದು ಕಷ್ಟ. ಹೀಗಾಗಿ ವಿದೇಶಿ ಆಟಗಾರರು ಬಂದಾಗಲೇ ಹಸರಂಗ ಅವರನ್ನು ಬೌಲಿಂಗ್ಗೆ ಇಳಿಸಬೇಕು.
ಪಂಜಾಬ್ ವಿರುದ್ಧದ ಸೋಲಿನಿಂದ ಆರ್ಸಿಬಿ ಪಾಠ ಕಲಿಯಲಿದೆ ಅನ್ನುವುದು ಅಭಿಮಾನಿಗಳ ನಂಬಿಕೆ. ಆದರೆ ತಂಡದ ಮ್ಯಾನೇಜ್ ಮೆಂಟ್ ಏನು ಯೋಚನೆ ಮಾಡುತ್ತದೋ ಯಾರಿಗೆ ಗೊತ್ತು..?