ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಈ ಬಾರಿಯ ಐಪಿಎಲ್ನಲ್ಲಿ ಯಾವುದೂ ಕೈ ಹಿಡಿದಿಲ್ಲ. ರಿಟೈನ್ಡ್ ಆಟಗಾರರಾದ ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿ ಅಟ್ಟರ್ ಫ್ಲಾಫ್. ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿದ ಪ್ಯಾಟ್ ಕಮಿನ್ಸ್ಗೆ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅಜಿಂಕ್ಯಾ ರಹಾನೆಯಿಂದ ತಂಡಕ್ಕೆ ಉಪಯೋಗ ಆಗಲಿಲ್ಲ. ಕಳೆದ 4 ಪಂದ್ಯಗಳಲ್ಲಿ 4 ಬಾರಿ ಆರಂಭಿಕರನ್ನು ಬದಲಿಸಿದರೂ ಫಲಿತಾಂಶ ಬದಲಾಗಲಿಲ್ಲ. ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನ ಸ್ಥಾನದಿಂದ, ಮಿಡಲ್ ಆರ್ಡರ್ ಮತ್ತು ಫಿನಿಷರ್ ಸ್ಥಾನಕ್ಕೆ ಬದಲಿಸಿದರೂ ಪ್ರಯೋಜನವಾಗಿಲ್ಲ. ಆರಂಭದಲ್ಲಿ 4 ಪಂದ್ಯಗಳ ಪೈಕಿ 3 ನ್ನು ಗೆದ್ದಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಕೊನೆಯ 5 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಕೇವಲ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ವೈಫಲ್ಯಗಳ ಮಧ್ಯೆ ತಂಡಕ್ಕೆ ಆಧಾರವಾಗಿರುವುದು ಆ್ಯಂಡ್ರೆ ರಸೆಲ್, ನಾಯಕ ಶ್ರೇಯಸ್ ಅಯ್ಯರ್ ಮತ್ತು ಅನುಭವಿ ಉಮೇಶ್ ಯಾದವ್ ಮಾತ್ರ. ರಸೆಲ್ ಮಸಲ್ ಪವರ್ ತೋರಿದ್ರೆ, ಶ್ರೇಯಸ್ ಸ್ಥಿರತೆಯ ಆಟವಾಡಿದ್ದಾರೆ. ಉಮೇಶ್ ಬೌಲಿಂಗ್ ನಲ್ಲಿ ಮಿಂಚಿದ್ದಾರೆ. ಸುನೀಲ್ ನರೈನ್, ಬಾಬಾ ಇಂದ್ರಜಿತ್, ನಿತೀಶ್ ರಾಣಾ ಸೇರಿದಂತೆ ಎಲ್ಲಾ ಆಟಗಾರರು ಮಿಂಚಿದರೆ ಮಾತ್ರ ತಂಡಕ್ಕೆ ಉಳಿಗಾಲ. ಒಂದು ವೇಳೆ ಈ ಪಂದ್ಯವನ್ನು ಸೋತರೆ ಕೊಲ್ಕತ್ತಾ ತಂಡದ ಪ್ಲೆ-ಆಫ್ ಕನಸಿಗೆ ಪೆಟ್ಟು ಬೀಳುತ್ತದೆ.
ರಾಜಸ್ಥಾನ ರಾಯಲ್ಸ್ ತಂಡ ಹೆಚ್ಚು ಏನನ್ನೂ ಬಯಸುತ್ತಿಲ್ಲ. ಫಿನಿಷರ್ ಶಿಮ್ರನ್ ಹೆಟ್ಮಾಯರ್ ರಿಂದ ಸ್ಥಿರತೆ ಬಯಸುತ್ತಿದೆ. ನಾಯಕ ಸಂಜು ಸ್ಯಾಮ್ಸನ್ ಮತ್ತು ಆರಂಭಿಕ ದೇವದತ್ ಪಡಿಕಲ್ ತುಸು ಹೆಚ್ಚು ಕೊಡುಗೆ ನೀಡಬೇಕಿದೆ. ಬ್ಯಾಟಿಂಗ್ ಲೀಡರ್ ಜೋಸ್ ಬಟ್ಲರ್ ಜೊತೆಗೆ ಇತರೆ ಬ್ಯಾಟ್ಸಮನ್ಗಳಾದ ಪರಾಗ್ ಮತ್ತು ಮಿಚೆಲ್ ಮಿಂಚಿದರೆ ಕಟ್ಟಿಹಾಕುವುದು ಕಷ್ಟ. ಬೌಲಿಂಗ್ ನಲ್ಲಿ ಯಜುವೇಂದ್ರ ಚಹಲ್ ಚಮಕ್ ತೋರಿದ್ದಾರೆ. ಅಶ್ವಿನ್ ಸೈಲೆಂಟ್ ಫರ್ಫಾಮರ್. ಪ್ರಸಿಧ್ ಮತ್ತು ಕುಲ್ ದೀಪ್ ಸೇನ್ ವಿಕೆಟ್ ಬೇಟೆಯಾಡಿದ್ದಾರೆ. ಅನುಭವಿ ಟ್ರೆಂಟ್ ಬೋಲ್ಟ್ ಒಂಚೂರು ಮೊನಚು ಕಂಡುಕೊಳ್ಳಬೇಕಿದೆ. ಇಷ್ಟಾದರೆ ರಾಜಸ್ಥಾನ ತಂಡವನ್ನು ಸೋಲಿಸುವುದು ಕಷ್ಟ.
ಅಚ್ಚರಿ ಅಂದರೆ ರಾಜಸ್ಥಾನ ರಾಯಲ್ಸ್ 6 ಬಾರಿ ಮೊದಲು ಬ್ಯಾಟಿಂಗ್ ಮಾಡಿ ಪಂದ್ಯ ಗೆದ್ದಿದೆ. ಆದರೆ ಚೇಸಿಂಗ್ ನಲ್ಲಿ ಯಶಸ್ಸು ಸಾಧಿಸಿಲ್ಲ. ಹೀಗಾಗಿ ವಾಂಖೆಡೆಯಲ್ಲಿ ಸಖತ್ ಮ್ಯಾಚ್ ನಡೆಯಲಿದೆ. ರಾಜಸ್ಥಾನ ಗೆದ್ದರೆ ಪ್ಲೇ-ಆಫ್ ಗೆ ಹತ್ತಿರವಾಗಲಿದೆ. ಒಂದು ಸೋಲು ಕೆಕೆಆರ್ ತಂಡವನ್ನು ಅಂತಿಮ 4ರ ಘಟ್ಟದಿಂದ ದೂರ ಮಾಡಲಿದೆ.