ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಕದನ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಕೊಲ್ಕತ್ತಾ ಟೂರ್ನಿಯಲ್ಲಿ ಉಳಿದುಕೊಳ್ಳಲು ಹೋರಾಟ ಮಾಡುತ್ತಿದ್ದರೆ, ಲಖನೌ ಪ್ಲೇ-ಆಫ್ ಸ್ಥಾನವನ್ನು ಪಕ್ಕಾ ಮಾಡಿಕೊಳ್ಳಲು ಕಣಕ್ಕಿಳಿಯುತ್ತಿದೆ. ಹೀಗಾಗಿ ಪುಣೆಯಲ್ಲಿ ನಡೆಯುವ ಈ ಪಂದ್ಯ ಕದನ ಕುತೂಹಲಕ್ಕೆ ಕಾರಣವಾಗಿದೆ.
ಲಖನೌ 10 ಪಂದ್ಯಗಳಿಂದ 14 ಅಂಕ ಪಡೆದು ಪ್ಲೇ-ಆಫ್ ಸ್ಥಾನದ ಹತ್ತಿರದಲ್ಲಿದೆ. ಇನ್ನೊಂದು ಗೆಲುವು ಪ್ಲೇ-ಆಫ್ ಸ್ಥಾನವನ್ನು ಪಕ್ಕಾ ಮಾಡಲಿದೆ. ಕೊಲ್ಕತ್ತಾ 10 ಪಂದ್ಯಗಳಿಂದ 10 ಅಂಕಗಳಿಸಿ 8ನೇ ಸ್ಥಾನದಲ್ಲಿದೆ. ಉಳಿದಿರುವ 4 ಪಂದ್ಯಗಳನ್ನು ಗೆದ್ದರೆ ಮಾತ್ರ ಕೊಲ್ಕತ್ತಾ ಪ್ಲೇ-ಆಫ್ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಇದು ಕೆಕೆಆರ್ ಪಾಲಿಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಲಖನೌ ಸೂಪರ್ ಜೈಂಟ್ಸ್ ತಂಡ ಸಮತೋಲಿತವಾಗಿ ಕಾಣುತ್ತಿದೆ. ಕ್ವಿಂಟಾನ್ ಡಿ ಕಾಕ್ ಮತ್ತು ನಾಯಕ ಕೆ.ಎಲ್. ರಾಹುಲ್ ಬ್ಯಾಟಿಂಗ್ ಸ್ಥಿರತೆ ತಂಡಕ್ಕೆ ಆಧಾರವಾಗಿದೆ. ದೀಪಕ್ ಹೂಡ ಮತ್ತು ಮಾರ್ಕಸ್ ಸ್ಟೋಯ್ನಿಸ್ ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡಬಹುದು. ಕೃನಾಲ್ ಪಾಂಡ್ಯಾ ಮತ್ತು ಆಯೂಷ್ ಬಧೋನಿ ಬ್ಯಾಟಿಂಗ್ಗೆ ಹೊಸ ಆಯಾಮ ತಂದಿದ್ದಾರೆ. ಜೇಸನ್ ಹೋಲ್ಡರ್ ಕೂಡ ಬ್ಯಾಟಿಂಗ್ ಶಕ್ತಿ ಹೊಂದಿದ್ದಾರೆ.
ಲಖನೌ ಬೌಲಿಂಗ್ ಶಕ್ತಿಯೂ ಚೆನ್ನಾಗಿದೆ. ಮೌಸಿನ್ ಖಾನ್ ಮತ್ತು ದುಷ್ಮಂತ್ ಚಾಮೀರಾ ಹೊಸ ಚೆಂಡಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜೇಸನ್ ಹೋಲ್ಡರ್ ಮತ್ತು ಆವೇಶ್ ಖಾನ್ ಡೆತ್ ಓವರ್ಗಳಲ್ಲಿ ಚಾಲೆಂಜ್ ಹಾಕ್ತಾರೆ. ರವಿ ಬಿಷ್ಣೋಯಿ, ಕೃನಾಲ್ ಪಾಂಡ್ಯಾ ಸ್ಪಿನ್ನರ್ ಗಳು. ಮಾರ್ಕಸ್ ಸ್ಟೋಯ್ನಿಸ್ ಕೂಡ ಬೌಲಿಂಗ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕ ಆಟಗಾರರದ್ದೇ ಸಮಸ್ಯೆ ಆಗಿದೆ. ಬಾಬಾ ಇಂದ್ರಜಿತ್ ಮತ್ತು ಆ್ಯರೋನ್ ಫಿಂಚ್ರಿಂದ ತಂಡಕ್ಕೆ ಹೆಚ್ಚು ಲಾಭವಾಗಿಲ್ಲ. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಬ್ಯಾಟಿಂಗ್ನಲ್ಲಿ ಮಿಂಚಲೇಬೇಕು. ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಆಟದ ಮೇಲೂ ಕಣ್ಣಿದೆ. ಬೌಲಿಂಗ್ನಲ್ಲಿ ಉಮೇಶ್ ಯಾದವ್ ಸ್ಥಿರತೆ ತಂದಿದ್ದಾರೆ. ಆದರೆ ಟಿಮ್ ಸೌಥಿ ಮತ್ತು ಶಿವಂ ಮಾವಿ ಲೈನ್ ಅಂಡ್ ಲೆಂಗ್ತ್ ಕಂಡುಕೊಳ್ಳಬೇಕಿದೆ. ಸುನೀಲ್ ನರೈನ್ ಮಿಸ್ಟ್ರಿ ಸ್ಪಿನ್ ಮತ್ತು ಅನುಕೂಲ್ ರಾಯ್ ಎಡಗೈ ಸ್ಪಿನ್ ಬಲ ತಂಡಕ್ಕಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.ಬಿಗ್ ಹಿಟ್ಟರ್ ಗಳ ಪಾಲಿಗೆ ಸ್ವರ್ಗ ಎನಿಸಿರುವ ಈ ಮೈದಾನದಲ್ಲಿ ತಂಡಗಳಿಗೆ ಗೆಲುವು ತುಂಬಾ ಮುಖ್ಯವಾಗಿದೆ.