ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಪ್ಲೇಯರ್ ಸೂರ್ಯಕುಮಾರ್ ಯಾದವ್, ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯುತ್ತಾರಾ? ಎಂಬ ಆತಂಕ ಶುರುವಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸೂರ್ಯಕುಮಾರ್ ಮಾರ್ಚ್ 27ರಂದು ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಇತ್ತೀಚಿಗೆ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಸೂರ್ಯಕುಮಾರ್ ಯಾದವ್ ಈವರೆಗೂ ಚೇತರಿಸಿಕೊಂಡಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್, ಪ್ರಸ್ತುತ ನ್ಯಾಷಿನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಅವರನ್ನ ಕಣಕ್ಕಿಳಿಸದಿರಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಅಲ್ಲದೇ ಮುಂಬೈ ಇಂಡಿಯನ್ಸ್ ಏಪ್ರಿಲ್ 2ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಲಿದ್ದು, ಈ ವೇಳೆಗೆ ಸೂರ್ಯಕುಮಾರ್ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಮಾ.26 ರಿಂದ ಆರಂಭವಾಗುವ ಪಂದ್ಯಾವಳಿಗೆ ಎಲ್ಲಾ ತಂಡಗಳು ಸಜ್ಜಾಗಿವೆ. ಮುಂಬೈ ಇಂಡಿಯನ್ಸ್ ಸಹ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಒಂದೊಮ್ಮೆ ಗಾಯದ ಸಮಸ್ಸ್ಯೆಯಿಂದಾಗಿ ಸೂರ್ಯಕುಮಾರ್, ಐಪಿಎಲ್ಗೆ ಅಲಭ್ಯರಾದಲ್ಲಿ ಮುಂಬೈ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.