ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು, ಸಂಪೂರ್ಣ ಫಿಟ್ ಆಗಿರುವ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ತಂಡವನ್ನ ಸೇರ್ಪಡೆಗೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಸೂರ್ಯಕುಮಾರ್, ಐಪಿಎಲ್ನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಇದೀಗ ಸಂಪೂರ್ಣ ಗುಣಮುಖರಾಗಿರುವ ಸೂರ್ಯಕುಮಾರ್, ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುವ 15ನೇ ಆವೃತ್ತಿಯ ಎರಡನೇ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಮುಂಬೈ ತಂಡವನ್ನ ಕೂಡಿಕೊಂಡಿದ್ದಾರೆ.
ಮುಂಬೈ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವ ಸೂರ್ಯಕುಮಾರ್ ವೆಸ್ಟ್ ಇಂಡೀಸ್ ಸರಣಿ ವೇಳೆ ಬೆರಳಿನ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಬಳಿಕ ನ್ಯಾಷಿನಲ್ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಉಳಿದುಕೊಂಡು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಮಾ.27ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯಕ್ಕೆ ಸೂರ್ಯಕುಮಾರ್ ಅಲಭ್ಯರಾಗಿದ್ದರು.
ಇದೀಗ ಚೇತರಿಕೆ ಕಂಡಿರುವ ಸೂರ್ಯಕುಮಾರ್, ತಮ್ಮ ಕ್ವಾರಂಟೈನ್ ಅವಧಿ ಮುಗಿಸಿ ಮುಂಬೈ ತಂಡವನ್ನ ಸೇರಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದ ಸಹ ಆಟಗಾರರಾದ ಕೈರನ್ ಪೊಲಾರ್ಡ್, ಇಶಾನ್ ಕಿಶನ್ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಜಿಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೆಲಕಾಲ ಕಸರತ್ತು ನಡೆಸಿರುವ ಸೂರ್ಯಕುಮಾರ್, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದಾರೆ. ಸೂರ್ಯಕುಮಾರ್ ಆಗಮನ ಮುಂಬೈ ತಂಡದ ಬಲವನ್ನು ಹೆಚ್ಚಿಸಿದೆ.
15ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ್ದ ಮುಂಬೈ, 4 ವಿಕೆಟ್ಗಳ ಸೋಲು ಕಂಡಿತ್ತು. ಬ್ರೆಬೌರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ 178 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ, 18.2 ಓವರ್ಗಳಲ್ಲಿ ಅಕ್ಸರ್ ಪಟೇಲ್ ಹಾಗೂ ಲಲಿತ್ ಯಾದವ್ ಅವರ ಅಜೇಯ 75 ರನ್ಗಳ ಜೊತೆಯಾಟದಿಂದ ಗೆಲುವಿನ ನಗೆ ಬೀರಿತ್ತು. ಹೀಗಾಗಿ ರಾಜಸ್ಥಾನ್ ವಿರುದ್ಧದ ಎರಡನೇ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲು ಮುಂಬೈ ಎದುರು ನೋಡುತ್ತಿದೆ.