ಕೊನೆ ಓವರ್ವರೆಗೂ ತೂಗುಯ್ಯಾಲೆಯಲ್ಲಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 3 ವಿಕೆಟ್ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಐಪಿಎಲ್ನ ಮೊದಲ ಗೆಲುವು ಕಂಡಿತು.
ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೆಕೆಆರ್, ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಪರಿಣಾಮ 18.5 ಓವರ್ಗಳಲ್ಲಿ 128 ರನ್ಗಳಿಗೆ ಆಲೌಟ್ ಆಯಿತು. ಈ ಸವಾಲು ಎದುರಿಸಿದ ಆರ್ಸಿಬಿ, 19.2 ಓವರ್ಗಳಲ್ಲಿ 132/7 ರನ್ಗಳಿಸಿ ಗೆದ್ದು ಬೀಗಿತು. ದಿನೇಶ್ ಕಾರ್ತಿಕ್(14*) ಹಾಗೂ ಹರ್ಷಲ್ ಪಟೇಲ್(10*) ತಂಡವನ್ನ ಗೆಲುವಿನ ದಡಸೇರಿಸಿದರು. ಈ ಗೆಲುವಿನೊಂದಿಗೆ ಆರ್ಸಿಬಿ 15ನೇ ಆವೃತ್ತಿಯ ಐಪಿಎಲ್ನಲ್ಲಿ ಗೆಲುವಿನ ಖಾತೆ ತೆರೆಯಿತು.
ಆರ್ಸಿಬಿ ಆರಂಭಿಕ ಆಘಾತ
ಕೆಕೆಆರ್ ನೀಡಿದ ಸುಲಭದ ಗುರಿ ಬೆನ್ನತ್ತಿದ ಆರ್ಸಿಬಿ, ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಅನುಜ್ ರಾವತ್(0), ನಾಯಕ ಫಾಫ್ ಡುಪ್ಲೆಸ್ಸಿ(5) ಬಹುಬೇಗನೆ ನಿರ್ಗಮಿಸಿದರು. ಇವರ ಬೆನ್ನಲ್ಲೇ ಉತ್ತಮವಾಗಿ ಆಡುವ ನಿರೀಕ್ಷೆ ಮೂಡಿಸಿದ್ದ ವಿರಾಟ್ ಕೊಹ್ಲಿ(12) ಕೂಡ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಡೇವಿಡ್ ವಿಲ್ಲಿ(18) ಹಾಗೂ ರುಥರ್ಫಾರ್ಡ್(28) 4ನೇ ವಿಕೆಟ್ಗೆ 45 ರನ್ಗಳ ಉಪಯುಕ್ತ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನ ಸುನೀಲ್ ನರೈನ್ ಬೇರ್ಪಡಿಸಿದರು. ನಂತರ ಜೊತೆಯಾದ ರುಥರ್ಫಾರ್ಡ್ ಹಾಗೂ ಶಹಬಾಜ್ ಅಹ್ಮದ್(27) ಕೂಡ ಜವಾಬ್ದಾರಿಯ ಆಟದಿಂದ 39 ರನ್ಗಳ ಜೊತೆಯಾಟದ ಮೂಲಕ ತಂಡವನ್ನ ಗೆಲುವಿಗೆ ಕಾರಣರಾದರು. ಕೆಕೆಆರ್ ಪರ ಟಿಮ್ ಸೌತಿ 20/3, ಉಮೇಶ್ ಯಾದವ್ 16/2, ನರೈನ್ 12/1 ಹಾಗೂ ಚಕ್ರವರ್ತಿ 33/1 ವಿಕೆಟ್ ಪಡೆದರು.
ಕೆಕೆಆರ್ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ, ಬ್ಯಾಟಿಂಗ್ ವೈಫಲ್ಯ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯಾ ರಹಾನೆ(9), ವೆಂಕಟೇಶ್ ಅಯ್ಯರ್(10) ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್(13), ನಿತೀಶ್ ರಾಣಾ(10), ಸುನೀಲ್ ನರೈನ್(12), ಸ್ಯಾಮ್ ಬಿಲ್ಲಿಂಗ್ಸ್(14) ಹಾಗೂ ಶೆಲ್ಡನ್ ಜ್ಯಾಕ್ಸನ್(0), ಟಿಮ್ ಸೌತಿ(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಆಂಡ್ರೆ ರಸೆಲ್(25) ರನ್ಗಳಿಸಿ ತಂಡಕ್ಕೆ ಆಸರೆಯಾದರೆ, ಉಮೇಶ್ ಯಾದವ್18 ಹಾಗೂ ವರುಣ್ ಚಕ್ರವರ್ತಿ10* ರನ್ಗಳಿಸಿ 10ನೇ ವಿಕೆಟ್ಗೆ 27 ರನ್ಗಳ ಉಪಯುಕ್ತ ಜೊತೆಯಾಟವಾಡಿದರು.
ಆರ್ಸಿಬಿ ಸಾಂಘಿಕ ಬೌಲಿಂಗ್
ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸ್ಸಿ ಬೌಲಿಂಗ್ ಆಯ್ಕೆ ಮಾಡಿದರು. ನಾಯಕನ ಲೆಕ್ಕಾಚಾರಕ್ಕೆ ತಕ್ಕಂತೆ ಬೌಲಿಂಗ್ ದಾಳಿ ನಡೆಸಿದ ಆರ್ಸಿಬಿ ಬೌಲರ್ಗಳು, ಕೆಕೆಆರ್ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು. ತಮ್ಮ ಸ್ಪಿನ್ ಕಮಾಲ್ ಮಾಡಿದ ವನಿಂದು ಹಸರಂಗ 20/4 ವಿಕೆಟ್ ಪಡೆದು ಕೊಲ್ಕತ್ತಾ ಬ್ಯಾಟ್ಸ್ಮನ್ಗಳ ಆಟಕ್ಕೆ ಬ್ರೇಕ್ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಆಕಾಶ್ ದೀಪ್ 45/3, ಹರ್ಷಲ್ ಪಟೇಲ್ 11/2, ಹಾಗೂ ಮೊಹಮ್ಮದ್ ಸಿರಾಜ್ 25/1 ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲು ಮುರಿದರು.
ತಂಡಗಳ ಮುಂದಿನ ಪಂದ್ಯ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 5ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 1ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.