ವನಿಂದು ಹಸರಂಗ(20/4) ಚಾಣಾಕ್ಷ ಬೌಲಿಂಗ್ ಹಾಗೂ ಇತರೆ ಬೌಲರ್ಗಳ ಸಾಂಘಿಕ ದಾಳಿಗೆ ತತ್ತರಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 129 ರನ್ಗಳ ಟಾರ್ಗೆಟ್ ನೀಡಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೆಕೆಆರ್, ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಪರಿಣಾಮ 18.5 ಓವರ್ಗಳಲ್ಲಿ 128 ರನ್ಗಳಿಗೆ ಸರ್ವಪತನ ಕಂಡಿತು. ಕೆಕೆಆರ್ ಪರ ಗರಿಷ್ಠ ಮೊತ್ತ ಕಲೆಹಾಕಿದ ಆಂಡ್ರೆ ರಸೆಲ್(25) ರನ್ಗಳಿಸಿ ತಂಡದ ಮೊತ್ತವನ್ನು 100 ರನ್ಗಳ ಗಡಿದಾಟಿಸಿದರು. ಇನ್ನಿಂಗ್ಸ್ನ ಕೊನೆಯಲ್ಲಿ ಉಮೇಶ್ ಯಾದವ್18 ಹಾಗೂ ವರುಣ್ ಚಕ್ರವರ್ತಿ10* ರನ್ಗಳಿಸಿ 10ನೇ ವಿಕೆಟ್ಗೆ 27 ರನ್ಗಳ ಉಪಯುಕ್ತ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು
ಆರ್ಸಿಬಿ ಸಾಂಘಿಕ ಬೌಲಿಂಗ್
ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸ್ಸಿ ಬೌಲಿಂಗ್ ಆಯ್ಕೆ ಮಾಡಿದರು. ನಾಯಕನ ಲೆಕ್ಕಾಚಾರಕ್ಕೆ ತಕ್ಕಂತೆ ಬೌಲಿಂಗ್ ದಾಳಿ ನಡೆಸಿದ ಆರ್ಸಿಬಿ ಬೌಲರ್ಗಳು, ಕೆಕೆಆರ್ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು. ತಮ್ಮ ಸ್ಪಿನ್ ಕಮಾಲ್ ಮಾಡಿದ ವನಿಂದು ಹಸರಂಗ 20/4 ವಿಕೆಟ್ ಪಡೆದು ಕೊಲ್ಕತ್ತಾ ಬ್ಯಾಟ್ಸ್ಮನ್ಗಳ ಆಟಕ್ಕೆ ಬ್ರೇಕ್ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಆಕಾಶ್ ದೀಪ್ 45/3, ಹರ್ಷಲ್ ಪಟೇಲ್ 11/2, ಹಾಗೂ ಮೊಹಮ್ಮದ್ ಸಿರಾಜ್ 25/1 ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲು ಮುರಿದರು.
ಕೈಕೊಟ್ಟ ಕೆಕೆಆರ್ ಬ್ಯಾಟ್ಸ್ಮನ್ಗಳು
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಸುಲಭವಾಗಿ ರನ್ಗಳಿಸಲಾಗದೆ ಪರದಾಡಿತು. ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯಾ ರಹಾನೆ(9), ವೆಂಕಟೇಶ್ ಅಯ್ಯರ್(10) ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್(13) ಜವಾಬ್ದಾರಿಯುತ ಆಟವಾಡಲಿಲ್ಲ. ಉಳಿದಂತೆ ನಿತೀಶ್ ರಾಣಾ(10), ಸುನೀಲ್ ನರೈನ್(12), ಸ್ಯಾಮ್ ಬಿಲ್ಲಿಂಗ್ಸ್(14) ಹಾಗೂ ಶೆಲ್ಡನ್ ಜ್ಯಾಕ್ಸನ್(0), ಟಿಮ್ ಸೌತಿ(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.