IPL 2022: KKR – Rinku Singh – 9ನೇ ಕ್ಲಾಸ್ ಫೇಲ್.. ಬದುಕು ಕಟ್ಟಿಕೊಟ್ಟಿದ್ದು ಕ್ರಿಕೆಟ್.. ಇದು ರಿಂಕು ಸಿಂಗ್ ನೈಜ ಕಥೆ..!

ಇದು ರಿಂಕು ಸಿಂಗ್ ಅವರ ನೈಜ ಕಥೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ಟೂರ್ನಿಯ 47ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 23 ಎಸೆತಗಳಲ್ಲಿ ಅಜೇಯ 42 ರನ್ ದಾಖಲಿಸಿ ಕೆಕೆಆರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನಿನ್ನೆಯ ತನಕ ರಿಂಕು ಸಿಂಗ್ ಯಾರು ? ಅವರ ಹಿನ್ನೆಲೆ ಏನು ಎಂಬುದು ತುಂಬಾ ಜನರಿಗೆ ಗೊತ್ತಿರಲಿಲ್ಲ. ಮನೆಯಲ್ಲಿ ಕಡುಬಡತನವಿದ್ರೂ ರಿಂಕು ಸಿಂಗ್ ಅವರಲ್ಲಿ ಅದ್ಭುತ ಪ್ರತಿಭೆ ಇತ್ತು. ಓದು ತಲೆಗೆ ಹತ್ತಲಿಲ್ಲ. ಆದ್ರೆ ಕೈಹಿಡಿದಿದ್ದು ಕ್ರಿಕೆಟ್. ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಗೆಲ್ಲುತ್ತಿದ್ದ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಯ ನಗದು ಬಹುಮಾನಗಳು ಅವರ ಹೊಟ್ಟೆಯ ಹಸಿವನ್ನು ನೀಗಿಸುತ್ತಿತ್ತು. ಬಡತನ, ಹಸಿವು, ನೋವು, ಸಂಕಷ್ಟ ಎಲ್ಲವನ್ನು ಮೆಟ್ಟಿ ನಿಂತ ರಿಂಕು ಸಿಂಗ್ ನಡೆದು ಬಂದ ಹಾದಿಯೇ ಒಂದು ರೋಚಕ ಕಥೆ.
ಹೌದು, ಉತ್ತರ ಪ್ರದೇಶದ ಆಲಿಗರ್ ರಿಂಕು ಸಿಂಗ್ ಅವರ ಹುಟ್ಟೂರು. 9ನೇ ಕ್ಲಾಸ್ ಫೇಲ್… ಎಲ್ ಪಿಜಿ ಗ್ಯಾಸ್ ಗೊಡೌನ್ ಆವರಣದಲ್ಲಿ ದಿನ ನಿತ್ಯ ಓಡಾಟ.. ವಾಸ ಮಾಡಲು ಎರಡು ರೂಮ್ ಗಳ ಸಣ್ಣ ಕ್ವಾರ್ಟರ್ಸ್. ಅಪ್ಪ – ಅಮ್ಮ, ಇಬ್ಬರು ಅಣ್ಣಂದಿರು, ಇಬ್ಬರು ಸಹೋದರಿಯರು. ಅಪ್ಪ ಖಾನ್ಚಂದ್ರ. ಮನೆ ಮನೆಗೆ ಎಲ್ ಪಿಜಿ ಗ್ಯಾಸ್ ವಿತರಣೆ ಮಾಡುತ್ತಿದ್ದರು. ತಿಂಗಳ ಸಂಬಳ 7 ಸಾವಿರ ರೂ. ಅಣ್ಣ ಆಟೋರಿಕ್ಷಾ ಡ್ರೈವರ್. ಇನ್ನೊಬ್ಬ ಅಣ್ಣ ಕೋಚಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು.

24ರ ಹರೆಯದ ರಿಂಕು ಸಿಂಗ್ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದರು. ಆದ್ರೆ ಕ್ರಿಕೆಟ್ ಆಟದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಒಂದಲ್ಲ ದಿನ ಕ್ರಿಕೆಟ್ ಆಟವನೇ ತನ್ನ ಬದುಕನ್ನು ರೂಪಿಸುತ್ತದೆ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದರು. ಆ ನಂಬಿಕೆ ಹುಸಿಯಾಗಲಿಲ್ಲ. ಮನೆಯ ಸಂಕಷ್ಟವನ್ನು ಮರೆತು ಕ್ರಿಕೆಟ್ ಮೇಲಿನ ಪ್ರೀತಿ ಮತ್ತು ಬದ್ದತೆಯಿಂದ ಇವತ್ತು ಐಪಿಎಲ್ ನಲ್ಲಿ ಆಡುತ್ತಿದ್ದಾರೆ.
ಅಂದ ಹಾಗೇ, ನಾಲ್ಕೈದು ವರ್ಷಗಳ ಹಿಂದೆ. ರಿಂಕು ಸಿಂಗ್ ಕುಟುಂಬದ ಮೇಲೆ ಐದು ಲಕ್ಷ ರೂಪಾಯಿ ಸಾಲ ಹೊರೆಯಾಗಿತ್ತು. ಸ್ಥಳೀಯ ಕ್ರಿಕೆಟ್ ಟೂರ್ನಿ ಜೊತೆಗೆ ಉತ್ತರ ಪ್ರದೇಶದ 19 ವಯೋಮಿತಿ ತಂಡದಲ್ಲೂ ಆಡುತ್ತಿದ್ದರು. ಹಾಗೇ ಭಾರತ 19 ವಯೋಮಿತಿ ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದರು. ಅಲ್ಲಿ ಸಿಗುತ್ತಿದ್ದ ಸಂಭಾವಣೆಯ ಹಣದಿಂದಲೇ ತನ್ನ ತಂದೆಯ ಸಾಲವನ್ನು ತೀರಿಸಲು ನೆರವಾಗುತ್ತಿದ್ದರು.
ದೆಹಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ರಿಂಕು ಸಿಂಗ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ಲಿ ಅವರಿಗೆ ಮೋಟರ್ ಬೈಕ್ ಸಿಕ್ಕಿತ್ತು. ಆ ಬೈಕ್ ಅನ್ನು ತಂದೆಗೆ ನೀಡಿದ್ದರು. ಆಲಿಗರ್ ನಲ್ಲಿ ಗ್ಯಾಸ್ ವಿತರಣೆ ಮಾಡಲು ಖಾನ್ ಚಂದ್ರ ಅವರು ಆ ಬೈಕ್ ಅನ್ನು ಬಳಕೆ ಮಾಡುತ್ತಿದ್ದರು. ಆದ್ರೂ ಮನೆಯ ಪರಿಸ್ಥಿತಿ ಸುಧಾರಣೆಯಾಗಲಿಲ್ಲ. ಹೀಗಾಗಿ ಅಣ್ಣನ ಸಲಹೆಯಂತೆ ಕೆಲಸಕ್ಕೆ ಹೋಗುವ ತೀರ್ಮಾನ ತೆಗೆದುಕೊಂಡ್ರು ರಿಂಕು ಸಿಂಗ್. ಆದ್ರೆ ರಿಂಕು ಸಿಂಗ್ ಗೆ ಆ ಕೆಲಸ ಇಷ್ಟವಾಗಲಿಲ್ಲ. ಗುಡಿಸುವುದು ಮತ್ತು ಒರೆಸುವ ಕೆಲಸ ಮಾಡಲು ರಿಂಕು ಸಿಂಗ್ ಮನಸು ಒಪ್ಪಲಿಲ್ಲ. ತನ್ನ ತಾಯಿಯ ಬಳಿ ನಾನು ಆ ಕೆಲಸಕ್ಕೆ ಹೋಗುವುದಿಲ್ಲ. ಏನಿದ್ರೂ ಕ್ರಿಕೆಟ್ ನಲ್ಲೇ ನನ್ನ ಬದುಕು ಹಸನಾಗುತ್ತೆ ಎಂದು ವಿಶ್ವಾಸದಿಂದಲೇ ಹೇಳಿದ್ದರು.
ಅದಕ್ಕೆ ತಕ್ಕಂತೆ ರಿಂಕು ಸಿಂಗ್ ಅವರ ಅದೃಷ್ಟವೂ ಬದಲಾಯ್ತು. ಉತ್ತರ ಪ್ರದೇಶ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಆಡಿರುವ 9 ಪಂದ್ಯಗಳಲ್ಲಿ 692 ರನ್ ಗಳಿಸಿದ್ದರು.

ಹಾಗೇ ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು.ಆದ್ರೆ ಅಲ್ಲಿ ಆಡುವ ಅವಕಾಶ ಸಿಗಲಿಲ್ಲ. ಬಳಿಕ ಮುಂಬೈ ಇಂಡಿಯನ್ಸ್ ತಂಡದಿಂದ ಕರೆ ಬಂತು. ಟ್ರೈಯಲ್ಸ್ ನಲ್ಲಿ ರಿಂಕು ಸಿಂಗ್ 31 ಎಸೆತಗಳಲ್ಲಿ 91 ರನ್ ದಾಖಲಿಸಿ ಗಮನ ಸೆಳೆದಿದ್ದರು.
ಈ ಆಟದಿಂದ ನನ್ನ ಆತ್ಮವಿಶ್ವಾಸ ಹೆಚ್ಚಿತ್ತು. ಈ ಬಾರಿಯ ಐಪಿಎಲ್ ನಲ್ಲಿ ತನಗೆ ಅವಕಾಶ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದರು. 2022 ಮೆಗಾ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ರಿಂಕು ಸಿಂಗ್ ಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದವು. 20 ಲಕ್ಷ ರೂ ಮೂಲ ಬೆಲೆಯ ಆಟಗಾರ ರಿಂಕು ಸಿಂಗ್ ಕೊನೆಗೆ 80 ಲಕ್ಷ ರೂಪಾಯಿಗೆ ಕೆಕೆಆರ್ ಪಾಲಾದ್ರು. ಇದನ್ನೆಲ್ಲಾ ರಿಂಕು ಸಿಂಗ್ ಟಿವಿಯಲ್ಲಿ ನೋಡುತ್ತಿದ್ದರು. 80 ಲಕ್ಷ ರೂಪಾಯಿ ಕೆಕೆಆರ್ ತಂಡ ಖರೀದಿ ಮಾಡುತ್ತಿದ್ದಂತೆ ರಿಂಕು ಸಿಂಗ್ ಮನದಲ್ಲಿ ನಾನಾ ಅಲೋಚನೆಗಳು ಮೂಡಿದ್ದವು.
ಈ ಹಣದಲ್ಲಿ ಅಣ್ಣನ ಮದುವೆಗೆ ನೆರವಾಗಬಹುದು. ತಂಗಿಯ ಮದುವೆ ಮಾಡಬಹುದು. ಅಪ್ಪನ ಸಾಲ ತೀರಿಸಬಹುದು. ಇರೋದಕ್ಕೆ ಸಣ್ಣ ಮನೆ ಮಾಡಿಕೊಳ್ಳಬಹುದು. ಇದಕ್ಕಿಂತ ಇನ್ನೇನೂ ಬೇಕು ಎಂದು ಖುಷಿಯಲ್ಲೇ ಯೋಚನೆ ಮಾಡುತ್ತಿದ್ದೆ. ಅಷ್ಟೇ ಅಲ್ಲ, ನಮ್ಮ ಕುಟುಂಬದಲ್ಲಿ ಯಾರು ಕೂಡ ಇಷ್ಟು ದೊಡ್ಡ ಮೊತ್ತದ ಹಣವನ್ನೇ ನೋಡಿಲ್ಲ ಅಂತಾರೆ ರಿಂಕು ಸಿಂಗ್. ಬದುಕು ಎಷ್ಟು ವಿಸ್ಮಯ ಅಲ್ವಾ… ಹೆಂಗಿದ್ದ ಹೆಂಗಾದ ರಿಂಕು ಸಿಂಗ್..!