ಅಬುಧಾಬಿಯಲ್ಲಿ ನಡೆಯುವುದು ಮಾಡು ಇಲ್ಲವೆ ಮಡಿ ಪಂದ್ಯ. ವೆಸ್ಟ್ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಟೂರ್ನಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಬೇಕು. ಇದರ ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಹೀನಾಯ ಸೋಲಿಗೆ ಪ್ರಾರ್ಥನೆ ಮಾಡಬೇಕು. ಈ ಪಂದ್ಯವನ್ನು ಸೋತವರು ಬ್ಯಾಗು ಹಿಡಿ ಮನೆಗೆ ನಡಿ ಅನ್ನುವ ಮಟ್ಟಕ್ಕೆ ಬರ್ತಾರೆ. ಹೀಗಾಗಿ ಹಾಲಿ ಚಾಂಪಿಯನ್ ವೆಸ್ಟ್ಇಂಡೀಸ್ ತನ್ನೆಲ್ಲಾ ಶಕ್ತಿ ಸೇರಿಸಿ ಆಡಬೇಕಾದ ಅನಿವಾರ್ಯತೆ ಇದೆ. ಇನ್ನೊಂದೆಡೆ ಶ್ರೀಲಂಕಾ ಕೂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ವೆಸ್ಟ್ಇಂಡೀಸ್ ಬಿಗ್ ಹಿಟ್ಟರ್ಗಳನ್ನೇ ಹೊಂದಿದೆ. ಕ್ರಿಸ್ ಗೇಲ್, ಎವಿನ್ ಲೆವಿಸ್, ರೋಸ್ಟನ್ ಚೇಸ್, ಶಿಮ್ರನ್ ಹೆಟ್ಮಯರ್, ಕೈರನ್ ಪೊಲ್ಲಾರ್ಡ್, ಆ್ಯಂಡ್ರೆ ರಸೆಲ್, ಡ್ವೈನ್ ಬ್ರಾವೋ ಹೀಗೆ ಸಿಕ್ಸರ್ ಕಿಂಗ್ಗಳನ್ನೇ ಹೊಂದಿದೆ. ಆದರೆ ಇಲ್ಲಿ ತನಕ ಯಾರೂ ಕೂಡ ಸರಿಯಾಗಿ ಸಿಡಿದಿಲ್ಲ. ಬೌಲಿಂಗ್ನಲ್ಲಿ ರವಿ ರಾಂಪಾಲ್, ಅನೈಕಲ್ ಹೊಸೈನ್ ಬ್ರಾವೋ ಮತ್ತು ರಸೆಲ್ ಬಲವಿದ್ದರೂ ಎದುರಾಳಿಯನ್ನು ಸರಿಯಾಗಿ ಕಟ್ಟಿ ಹಾಕಿಲ್ಲ. ಆದರೆ ಅಬುದಾಭಿಯಲ್ಲಿ ಹಾಲಿ ಚಾಂಪಿಯನ್ ವೆಸ್ಟ್ಇಂಡೀಸ್ ಒಂದು ತಪ್ಪು ಮಾಡಿದರೂ ಎಲ್ಲಾ ಆಸೆಯನ್ನು ಕೈ ಬಿಡಬೇಕಾಗುತ್ತದೆ.
ಶ್ರೀಲಂಕಾ ತಂಡಕ್ಕೂ ಸ್ಥಿರ ಪ್ರದರ್ಶನದ್ದೇ ಸಮಸ್ಯೆ. ಕುಸಾಲ್ ಪೆರಾರ, ಪಥುನ್ ನಿಸ್ಸಾಂಕ ಮತ್ತು ಚರಿತ್ ಅಸಲಂಕಾ ಬ್ಯಾಟಿಂಗ್ ಶಕ್ತಿ ತೋರಿದರೂ ಸ್ಥಿರವಾಗಿಲ್ಲ. ಭಾನುಕಾ ರಾಜಪಕ್ಸೆ ಕೂಡ ಮ್ಯಾಚ್ ವಿನ್ನರ್ ಅನ್ನೋದು ಗೊತ್ತಾಗಿದೆ. ಬೌಲಿಂಗ್ನಲ್ಲೂ ಹಸರಂಗ, ಮಹೀಶ್ ತೀಕ್ಷಣ, ಚಾಮಿರ ಮತ್ತು ಕರುಣರತ್ನೆ ಕಮಾಲ್ ಮಾಡಬಹುದು. ಆದರೆ ತಂಡವನ್ನು ಯಾವುದು ಕೂಡ ಸರಿಯಾಗಿ ಕೈ ಹಿಡಿದಿಲ್ಲ. ಒಟ್ಟಿನಲ್ಲಿ ಅಬಿಧಾಬಿ ಪಂದ್ಯದಲ್ಲಿ ಯಾರು ಸೋಲ್ತಾರೋ ಅವರಿಗೆ ಗೇಟ್ಪಾಸ್ ಖಚಿತ.