ಬೆಂಗಳೂರು: ಎಂಟನೇ ಆವೃತ್ತಿಯ ಪ್ರೊ ಕಬಡ್ಡಿಯ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಬ್ಬರದ ಆಟವಾಡಿ ಸೆಮಿಫೈನಲ್ಸ್ ಹಂತ ಪ್ರವೇಶಿಸಿದೆ. ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ದಬಾಂಗ್ ದೆಹಲಿ ವಿರುದ್ಧ ಕಾದಾಟ ನಡೆಸಲಿದೆ. ಸೋವಾಮರ ನಡೆದ ಪಂದ್ಯದಲ್ಲಿ ಬೆಂಗಳೂರು 49-29ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಮುನ್ನಡೆದಿದೆ.
ಮಹತ್ವದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಟಾಸ್ ಗೆದ್ದು ಕೋರ್ಟ್ ಆಯ್ಕೆ ಮಾಡಿಕೊಂಡಿತು. ಬುಲ್ಸ್ ಅಂಕದ ಖಾತೆ ತೆರೆಯಿತು. ಮೊದಾವಧಿಯ ಐದನೇ ನಿಮಿಷದಲ್ಲಿ ಬೆಂಗಳೂರು ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ ಪವನ್ ಸೆಹ್ರಾವತ್ ತಂಡ ಆರ್ಭಟಿಸಿತು. 14ನೇ ನಿಮಿಷದಲ್ಲಿ ಗುಜರಾತ್ ಜೈಂಟ್ಸ್ ತಂಡ ಆಲೌಟ್ ಆಯಿತು. 15ನೇ ನಿಮಿಷದ ಹೊತ್ತಿಗೆ ಬುಲ್ಸ್ 20-11 ರಿಂದ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯ ಕೊನೆಯ ಕ್ಷಣದಲ್ಲಿ ಬೆಂಗಳೂರು ಸೂಪರ್ ಟ್ಯಾಕಲ್ ಮಾಡಿ ಅಂಕ ಹಿಗ್ಗಿಸಿತು. ಈ ಅವಧಿಯಲ್ಲಿ ಬುಲ್ಸ್ 24-17 ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪವನ್ 9, ಚಂದನ್ ರಂಜಿತ್ 7 ಅಂಕ ಸೇರಿಸಿತು.
ಎರಡನೇ ಅವಧಿಯ ಆರಂಭದಲ್ಲಿ ಆಲ್ ಔಟ್ ಭೀತಿಯಲ್ಲಿದ್ದ ತಂಡಕ್ಕೆ ಬುಲ್ಸ್ ತಂಡದ ರಕ್ಷಣಾ ಆಟಗಾರರು ಆಧಾರವಾದರು. ಈ ಅವಧಿಯಲ್ಲಿ ಬೆಂಗಳೂರು ತಂಡ ಸೂಪರ್ ಟ್ಯಾಕಲ್ ಮಾಡಿ ಅಂಕಗಳನ್ನು ಸೇರಿಸಿತು. ಅಲ್ಲದೆ ಈ ಅವಧಿಯ ಆರನೇ ನಿಮಿಷದಲ್ಲಿ ಜೈಂಟ್ಸ್ ಮತ್ತೊಮ್ಮೆ ಆಲೌಟ್ ಆಯಿತು. ಬೆಂಗಳೂರು ಬುಲ್ಸ್ ಈ ಅವಧಿಯಲ್ಲಿ ಸೊಗಸಾದ ರಕ್ಷಣಾ ಆಟದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿತು. ಇದೇ ಅವಧಿಯ 17ನೇ ನಿಮಿಷದಲ್ಲಿ ಬೆಂಗಳೂರು ಮತ್ತೊಮ್ಮೆ, ಗುಜರಾತ್ ತಂಡದ ಅಂಗಳ ಖಾಲಿ ಮಾಡಿತು. ಸಮಯೋಚಿತ ಆಟದ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ಪಂದ್ಯ ಗೆದ್ದು ಬೀಗಿತು.
ಒಟ್ಟಾರೆ ಪಂದ್ಯದಲ್ಲಿ ಬುಲ್ಸ್ ಪರ ಪವನ್ ಸೆಹ್ರಾವತ್ 13, ಭರತ್ 6, ಚಂದ್ರನ್ ರಂಜಿತ್ 7 ಅಂಕ ಸೇರಿಸಿದರು. ಪರಾಜಿತ್ ತಂಡದ ಪರ ರಾಕೇಶ್ ಎಂಟು ಅಂಕ ತಮ್ಮದಾಗಿಸಿಕೊಂಡರು.