ಟೀಂ ಇಂಡಿಯಾದ ಪಾಕೇಟ್ ಡೈನಮೈಟ್ ಖ್ಯಾತಿಯ ರಿಷಬ್ ಪಂತ್, ಕ್ರಿಕೆಟ್ ಅಂಗಳದಲ್ಲಿ ಯಶಸ್ಸಿನ ಅಲೆಯಲ್ಲಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಯುವ ಆಟಗಾರ, ತಮ್ಮ ಕ್ರಿಕೆಟ್ ಬದುಕಿಗೆ ಹೊಸ ತಿರುವುಕೊಟ್ಟ ಸನ್ನಿವೇಶವನ್ನ ಬಹಿರಂಗಪಡಿಸಿದ್ದಾರೆ.
2021ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ ಟೆಸ್ಟ್ ಸರಣಿ ತಮ್ಮ ಜೀವನದ ಮಹತ್ವದ ತಿರುವಾಗಿದೆ. ನೋವು ನಿವಾರಕ ಚುಚ್ಚುಮದ್ದು ತೆಗೆದುಕೊಂಡು ಆಡಿ, ಭಾರತ ತಂಡದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ಕಾರಣವಾಯಿತು ಎಂದು ಭಾರತ ತಂಡದ ವಿಕೆಟ್ ಕೀಪರ್, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೆಮೈನಾ ರೋಡ್ರಿಗಸ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ನನ್ನ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಯಾರೊಂದಿಗೂ ಸಹ ಮಾತನಾಡುತ್ತಿರಲಿಲ್ಲ. ನನಗೆ ನನ್ನದೇ ಆದಂತಹ ಸ್ವತಂತ್ರದ ಅಗತ್ಯವಿತ್ತು. ಪ್ರತಿನಿತ್ಯ ನನ್ನ 200% ಪರಿಶ್ರಮ ಹಾಕಲು ಬಯಸುತ್ತಿದ್ದೆ. ಆ ಸಂದರ್ಭ ನನ್ನ ಜೀವನದ ಅತ್ಯಂತ ಕೆಳಮಟ್ಟದ್ದಾಗಿತ್ತು. ನಾನು ಮುಂದೆ ಏನಾಗಲಿದೆ ಎಂಬ ಕುರಿತು ಚಿಂತಿಸುತ್ತಿದ್ದೆ. ಮುಂದೆ ಏನು? ಎಂಬ ಕುರಿತು ಮಾನಸಿಕವಾಗಿಯೂ ನಾನು ಸಾಕಷ್ಟು ಯೋಚನೆ ಮಾಡುತ್ತಿದ್ದೆ.
ಏಕಾಏಕಿ ಎಲ್ಲವೂ ಸ್ಥಗಿತಗೊಂಡಿತು, ಎರಡು ಮಾದರಿ ಕ್ರಿಕೆಟ್ನಿಂದಲೂ ನನ್ನನ್ನು ಕೈಬಿಡಲಾಗಿತ್ತು. ಈ ನಡುವೆ ಮತ್ತೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಗುವುದು ಅಸಾಧ್ಯ ಎಂಬ ಮಾತುಗಳು ಹೆಚ್ಚಾಯಿತು. ಆದರೆ ಈ ಸಮಯದಲ್ಲಿ ನಾನು ಏಕಾಂಗಿಯಾಗಿ ಕುಳಿತು, ವೈಯಕ್ತಿಕವಾಗಿ ನಾನು ಏನನ್ನು ಮಾಡಬಹುದು ಎಂಬ ಬಗ್ಗೆ ಚಿಂತಿಸುತ್ತಿದ್ದೆ. ಈ ವೇಳೆ ನನ್ನ ತಲೆಯಲ್ಲಿ ಉಳಿದ ಆಲೋಚನೆ ಎಂದರೆ, ಮುಂದೆ ಏನಾದರೂ ಆಗಲಿ, ಪ್ರತಿನಿತ್ಯ ಪರಿಶ್ರಮ ಹಾಕಿ ಮುನ್ನಡೆಯುವುದಾಗಿತ್ತು. ಫಲಿತಾಂಶ ಏನೇ ಬರಲಿ, ನೀನು ಶೇ.200 ಪರಿಶ್ರಮ ಹಾಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಭಾರತ ಗೆಲ್ಲಬೇಕು ಎಂಬುದು ನನ್ನ ನಿರೀಕ್ಷೆಯಾಗಿತ್ತು ಎಂದು ಪಂತ್ ಹೇಳಿಕೊಂಡಿದ್ದಾರೆ.
ಪಂದ್ಯದ ವೇಳೆ ನಾನು ಪೇನ್ ಕಿಲ್ಲರ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೆ. ನೆಟ್ಸ್ನಲ್ಲಿ ಬ್ಯಾಟ್ ಹಿಡಿದು ಆಡಲು ಯತ್ನಿಸುತ್ತಿದ್ದೆ, ತುಂಬಾ ನೋವಾಗುತ್ತಿತ್ತು. ಎದುರಾಳಿ ತಂಡದಲ್ಲಿ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಅವರುಗಳಿದ್ದ ಕಾರಣ ಮತ್ತೆ ಪೆಟ್ಟು ಬೀಳಲಿದೆ ಎಂಬ ಆತಂಕ ಕೂಡ ಇತ್ತು.
ಆದರೆ ಕೊನೆಯ ದಿನದಂದು 400 ರನ್ ಚೇಸ್ ಮಾಡುವಾಗ ಆಸ್ಟ್ರೇಲಿಯಾ ಬೌಲರ್ಗಳನ್ನು ಎದುರಿಸಿದ ಸಂದರ್ಭದಲ್ಲಿ ಎಲ್ಲವೂ ಸರಿಯಾದ ರೀತಿ ಸಾಗುತ್ತಿತ್ತು. ಆದರೆ ಭೋಜನ ವಿರಾಮದ ಹೊಸ್ತಿಲಲ್ಲ ರಹಾನೆ ಔಟಾದಾಗ ನಾನು ಒತ್ತಡಕ್ಕೆ ಸಿಲುಕಿದೆ. ನನಗೆ ಸರಿಯಾದ ದಾರಿ ಸಹ ಸಿಗುತ್ತಿರಲಿಲ್ಲ, ಜೊತೆಗೆ ಒತ್ತಡ ಸಹ ಹೆಚ್ಚುತ್ತಿತ್ತು. ಈ ನಡುವೆ ಪಂದ್ಯದಲ್ಲಿ ಮೇಲುಗೈ ಹೊಂದಿದ್ದ ಆಸ್ಟ್ರೇಲಿಯಾ ಆಟಗಾರರು ಗೆಲ್ಲಲೇಬೇಕೆಂಬ ಕಾರಣಕ್ಕೆ ಸ್ಲೆಡ್ಜಿಂಗ್ ಮಾಡಲು ಆರಂಭಿಸಿದ್ದರು.
ಈ ಹಂತದಲ್ಲಿ ನಾನು ಒಂದಿಷ್ಟು ಬೌಂಡರಿ ಗಳಿಸಿದೆ, ನನ್ನ ಸಹಜ ಆಟವನ್ನು ಆಡಲಾರಂಭಿಸಿದೆ. ಇದಕ್ಕಿದ್ದಂತೆ ಪಂದ್ಯದ ಆವೇಗ ಬದಲಾಯಿತು, ನಾವು ಗೆಲ್ಲುವ ಸ್ಥಿತಿಯಲ್ಲಿದ್ದೆವು. ಈ ವೇಳೆ ನಾನು ಪ್ರತಿಯೊಂದು ಬಾಲ್ ಮೇಲೆ ಹೆಚ್ಚು ನಿಗಾವಹಿಸಿ ಆಡಲಾರಂಭಿಸಿದ್ದರಿಂದ ನನ್ನ ನೋವು ಸಹ ಕಡಿಮೆಯಾಯಿತು. ಆದರೆ ಸಿಡ್ನಿ ಪಂದ್ಯದಲ್ಲಿ ಶತಕದಿಂದ ವಂಚಿತನಾಗಿದ್ದು ಬೇಸರವಾಗಲಿಲ್ಲ. ಬದಲಾಗಿ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಬೇಸರ ಮೂಡಿಸಿತು. ನಂತರದಲ್ಲಿ ಅಶ್ವಿನ್-ವಿಹಾರಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಆದರೆ ಇದು ಸರಣಿಯ ಹಾಗೂ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು ಎಂದು ರಿಷಬ್ ಪಂತ್ ಹೇಳಿಕೊಂಡಿದ್ದಾರೆ.
ಆಸೀಸ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಿಷಬ್ ಪಂತ್, ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲಿ ಮಿಂಚಿದ್ದರು. 2-1ರಿಂದ ಸರಣಿ ಮುಡಿಗೇರಿಸಿಕೊಂಡ ಭಾರತದ ಪರ ರಿಷಬ್ ಪಂತ್, 5 ಇನ್ನಿಂಗ್ಸ್ನಲ್ಲಿ 68.50 ಸರಾಸರಿಯಲ್ಲಿ 274 ರನ್ಗಳಿಸಿದ್ದರು. ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ವೃದ್ಧಿಮಾನ್ ಸಾಹ ಗಾಯಗೊಂಡಿದ್ದು, ರಿಷಬ್ ಪಂತ್ಗೆ ತಂಡದಲ್ಲಿ ಸ್ಥಾನ ಪಡೆಯಲು ಕಾರಣವಾಗಿತ್ತು.