ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿದ್ದೂ ಜಾಹೀರಾತು ಕಂಪನಿಗಳ ಡಾರ್ಲಿಂಗ್. ಈಗಲೂ ಹಲವು ಬ್ರಾಂಡ್ ಗಳು ಧೋನಿಯನ್ನೇ ನೆಚ್ಚಿಕೊಂಡಿದೆ. ಐಪಿಎಲ್ ಬಂದರಂತೂ ಧೋನಿ ನಟಿಸಿರುವ ಜಾಹೀರಾತುಗಳದ್ದೇ ಕಾರುಬಾರು. ಆದರೆ ಈ ಬಾರಿ ಜಾಹೀರಾತು ಒಂದರಲ್ಲಿ ಎಡವಟ್ಟಾಗಿದೆ. ಅಷ್ಟೇ ಅಲ್ಲ ಆ ಜಾಹೀರಾತು ಪ್ರಸಾರಕ್ಕೆ ನಿಷೇಧ ಹೇರಲಾಗಿದೆ.
ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಅಥವಾ ASCI ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಜಾಹೀರಾತನ್ನು ಪ್ರಸಾರ ಮಾಡದಂತೆ ಸೂಚಿಸಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡ ಜಾಹೀರಾತಿನಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಹೀಗಾಗಿ ಕೂಡಲೇ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದ ಹಿನ್ನಲೆಯಲ್ಲಿ ಎಎಸ್ಸಿಐ ಈ ಶಿಫಾರಸು ಮಾಡಿದ್ದು, ಈ ಜಾಹೀರಾತಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಜಾಹೀರಾತಿನಲ್ಲಿ ಎಂಎಸ್ ಧೋನಿ ಅವರನ್ನು ಬಸ್ ಚಾಲಕನಾಗಿ ತೋರಿಸಲಾಗಿದೆ. ಅಲ್ಲದೆ ಜಾಹೀರಾತಿನಲ್ಲಿ ಜನನಿಬಿಡ ರಸ್ತೆಯ ಮಧ್ಯೆ ಬಸ್ ನಿಲ್ಲಿಸುವುದನ್ನು ಚಿತ್ರಿಸಲಾಗಿದೆ. ಈ ವೇಳೆ ಒಬ್ಬ ಟ್ರಾಫಿಕ್ ಪೊಲೀಸ್ ಬಂದು ಅವನನ್ನು ಪ್ರಶ್ನಿಸುತ್ತಾನೆ. ಇದಾದ ನಂತರ ಧೋನಿ ಪ್ರತಿಕ್ರಿಯಿಸಿ, ನಾನು ಐಪಿಎಲ್ನ ಸೂಪರ್ ಓವರ್ ಅನ್ನು ವೀಕ್ಷಿಸುತ್ತಿದ್ದೇನೆ ಎಂದು ತಿಳಿಸುತ್ತಾರೆ. ಇದನ್ನು ಟ್ರಾಫಿಕ್ ಪೋಲೀಸ್ ಸಾಮಾನ್ಯವೆಂದು ಪರಿಗಣಿಸಿ ಹೊರಡುತ್ತಾನೆ. ಇದನ್ನೇ ಪ್ರಸ್ತಾಪಿಸಿ ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದೆ.
ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾಗೆ ರಸ್ತೆ ಸುರಕ್ಷತಾ ಸಂಸ್ಥೆ ದೂರು ನೀಡಿದ್ದು, ASCI ಗ್ರಾಹಕ ದೂರು ಸಮಿತಿ ಸದಸ್ಯರು ಈ ಜಾಹೀರಾತನ್ನು ಪ್ರೋಮೋ ಪರಿಶೀಲಿಸಿದ್ದಾರೆ. ಅಲ್ಲದೆ ASCI ಜಾಹೀರಾತಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿದೆ. ಹೀಗಾಗಿ ಏಪ್ರಿಲ್ 20 ರೊಳಗೆ ಈ ಜಾಹೀರಾತನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ತಿಳಿಸಲಾಗಿದೆ