ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪ್ರಾಬಲ್ಯ ಮೆರೆದ ಡೆಲ್ಲಿ ಕ್ಯಾಪಿಟಲ್ಸ್ 44 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಮುಂಬೈನ ಬ್ರೆಬೌರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್ಗಳಲ್ಲಿ 5 ವಿಕೆಟ್ಗೆ 215 ರನ್ ಕಲೆಹಾಕಿತು. ಈ ಕಠಿಣ ಸವಾಲು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್, ಪ್ರಮುಖ ಆಟಗಾರರ ವೈಫಲ್ಯದಿಂದಾಗಿ 19.4 ಓವರ್ಗಳಲ್ಲಿ 171 ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ 44 ರನ್ಗಳ ಸೋಲನುಭವಿಸಿದ ಕೆಕೆಆರ್, 15ನೇ ಆವೃತ್ತಿಯಲ್ಲಿ 2ನೇ ಸೋಲು ಕಂಡಿತು.
ನಾಯಕನ ವ್ಯರ್ಥ ಆಟ:
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 216 ರನ್ಗಳ ಟಾರ್ಗೆಟ್ ಎದುರಿಸಿದ ಕೆಕೆಆರ್, ಆರಂಭಿಕ ಆಘಾತ ಅನುಭವಿಸಿತು. ಅಂಜಿಕ್ಯಾ ರಹಾನೆ(8), ವೆಂಕಟೇಶ್ ಅಯ್ಯರ್(18) ಬಹುಬೇಗನೆ ನಿರ್ಗಮಿಸಿದರು. ನಂತರ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ 54 ರನ್(33 ಬಾಲ್, 5 ಬೌಂಡರಿ, 2 ಸಿಕ್ಸರ್) ಹಾಗೂ ನಿತೀಶ್ ರಾಣಾ 30 ರನ್(20 ಬಾಲ್, 3 ಸಿಕ್ಸರ್) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 3ನೇ ವಿಕೆಟ್ಗೆ 69 ರನ್ಗಳ ಜೊತೆಯಾಟವಾಡಿದರು ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ನಂತರ ಬಂದ ಆಂಡ್ರೆ ರಸೆಲ್ 24, ಸ್ಯಾಮ್ ಬಿಲ್ಲಿಂಗ್ಸ್ 15, ಪ್ಯಾಟ್ ಕಮ್ಮಿನ್ಸ್ 4, ಸುನೀಲ್ ನರೈನ್ 4, ಉಮೇಶ್ ಯಾದವ್ 0, ರಶೀಕ್ ಸಲಾಂ 7 ಹಾಗೂ ವರುಣ್ ಚಕ್ರವರ್ತಿ 1 ತಂಡಕ್ಕೆ ಆಸರೆಯಾಗಲಿಲ್ಲ.
ಕುಲ್ದೀಪ್-ಕಲೀಲ್ ಕಮಾಲ್:
ಡೆಲ್ಲಿ ಪರ ಬ್ಯಾಟಿಂಗ್ನಲ್ಲಿ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಜುಗಲ್ಬಂದಿ ನಡೆಸಿದರೆ. ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ 4/35 ಹಾಗೂ ಕಲೀಲ್ ಅಹ್ಮೆದ್ 3/25 ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು. ಚಾಣಾಕ್ಷ ಬೌಲಿಂಗ್ ಪ್ರದರ್ಶಿಸಿದ ಇವರಿಬ್ಬರು, ಕೆಕೆಆರ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಉಳಿದಂತೆ ಶಾರ್ದೂಲ್ ಥಾಕೂರ್ 2/30 ಹಾಗೂ ಲಲಿತ್ ಯಾದವ್ 1/8 ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ವಾರ್ನರ್-ಪೃಥ್ವಿ ಅಬ್ಬರ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರಂಭಿಕರು ಆಸರೆಯಾದರು. ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ 51 ರನ್(29 ಬಾಲ್, 7 ಬೌಂಡರಿ, 2 ಸಿಕ್ಸ್) ಹಾಗೂ ಡೇವಿಡ್ ವಾರ್ನರ್ 61 ರನ್(45 ಬಾಲ್, 6 ಬೌಂಡರಿ, 2 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೆಕೆಆರ್ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಈ ಜೋಡಿ, ಮೊದಲ ವಿಕೆಟ್ಗೆ 93 ರನ್ಗಳ ಅತ್ಯುತ್ತಮ ಆರಂಭ ಒದಗಿಸಿದರು.
ನಂತರ ಬಂದ ನಾಯಕ ರಿಷಬ್ ಪಂತ್ 27 ರನ್(14 ಬಾಲ್, 2 ಬೌಂಡರಿ, 2 ಸಿಕ್ಸ್) ಬಿರುಸಿನ ಆಟವಾಡಿದರು. ಆದರೆ ನಂತರ ಕಣಕ್ಕಿಳಿದ ಲಲಿತ್ ಯಾದವ್(1) ಹಾಗೂ ರೋವ್ಮನ್ ಪೊವೆಲ್(8) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. 6ನೇ ವಿಕೆಟ್ಗೆ ಜೊತೆಯಾದ ಅಕ್ಸರ್ ಪಟೇಲ್ 22*(14) ಹಾಗೂ ಶಾರ್ದೂಲ್ ಥಾಕೂರ್ 29*(11) ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 49 ರನ್ಗಳ ಜೊತೆಯಾಟದಿಂದ ತಂಡದ ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಕೆಕೆಆರ್ ಪರ ಸುನೀಲ್ ನರೈನ್ (2/21), ಉಮೇಶ್ ಯಾದವ್, ಆಂಡ್ರೆ ರಸೆಲ್ ಹಾಗೂ ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು.