ಇತ್ತೀಚಿನವರೆಗೆ ಪ್ರತಿಭಟನೆಯಲ್ಲಿ ತೊಡಗಿದ್ದ ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಅವರುಗಳಿಗೆ ಏಶ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸಲು ನೇರ ಅರ್ಹತೆ ನೀಡಲಾಗಿದ್ದು, ಇದು ಇನ್ನಿತರ ಹಲವಾರು ಕುಸ್ತಿಪಟುಗಳ ಅಸಮಾಧನಕ್ಕೆ ಕಾರಣವಾಗಿದೆ.
ಈ ನಡೆಯ ವಿರುದ್ಧ ಮತ್ತೋರ್ವ ಕುಸ್ತಿಪಟು ಅಂತಿಮ್ ಪಂಘಾಲ್ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಎಲ್ಲಾ ಕುಸ್ತಿಪಟುಗಳು ಟ್ರಯಲ್ಸ್ನಲ್ಲಿ ಭಾಗವಹಿಸಿ , ಅಲ್ಲಿ ಅರ್ಹರೆಂದು ಕಂಡುಬಂದ ಬಳಿಕವಷ್ಟೇ ಏಶ್ಯನ್ ಗೇಮ್ಸ್ಗೆ ಅರ್ಹತೆ ಪಡೆಯುತ್ತಾರೆಂದು ನಿಯಮ ರೂಪಿಸಲಾಗಿತ್ತು. ಆದರೆ ಇದೀಗ ವಿನೇಶ್ ಮತ್ತು ಬಜರಂಗ್ಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ವಿನೇಶ್ ಮತ್ತು ಬಜರಂಗ್ ಮುಂಚೂಣಿಯಲ್ಲಿದ್ದರು.
ಆದರೆ ಕುಸ್ತಿ ಒಕ್ಕೂಟದ ಅಡ್ಹಾಕ್ ಸಮಿತಿಯ ಈಗಿನ ನಿರ್ಧರವು ಇತರ ಕುಸ್ತಿಪಟುಗಳಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ. ಅಂತಿಮ್ ಪಂಘಾಲ್ ಅವರು ಇದರ ವಿರುದ್ಧ ದಿಲ್ಲಿ ಹೈಕೋರ್ಟ್ಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ಅಂತಿಮ್ ಪಂಘಾಲ್ ಕಳೆದ ವರ್ಷ 20ರ ಕೆಳಹರಯದ ಕುಸ್ತಿ ಚಾಂಪ್ಯನ್ಶಿಪ್ ಗೆದ್ದು ಇತಿಹಾಸ ಬರೆದಿದ್ದರು. ಈಗ ಆಕೆ ಸೀನಿಯರ್ ವಿಭಾಗದಲ್ಲಿ ವಿನೇಶ್ ಪೋಗಟ್ ಅವರ ಕೆಟಗರಿಯಲ್ಲೇ ಸ್ಪರ್ಧಿಸಲು ಬಯಸುತ್ತಿದ್ದಾರೆ.
ವಿನೇಶ್ ಪೋಗಟ್ ಏಶ್ಯನ್ ಗೇಮ್ಸ್ನ 53 ಕಿಲೋ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ಅಂತಿಮ್ ಕೂಡಾ ಇದೇ ವಿಭಾಗದಲ್ಲಿ ಸ್ಪರ್ಧಿಸಲು ಬಯಸುತ್ತಿದ್ದಾರೆ. ಟ್ರಯಲ್ಸ್ನಲ್ಲಿ ಆಕೆ ವಿಜೇತೆಯಾಗಿದ್ದರು. ಆದರೆ ವಿನೇಶ್ ಆಯ್ಕೆಯಾಗಿರುವುದರಿಂದ ಅಂತಿಮ್ ಪಂಘಾಲ್ ಮೀಸಲಿಗರಾಗಿ ಉಳಿಯಬೇಕಾಗುತ್ತದೆ. ಕುಸ್ತಿ ಒಕ್ಕೂಟದ ಈ ನಿರ್ಧರದ ವಿರುದ್ಧ ಹೈಕೋರ್ಟಿನ ಮೊರೆ ಹೋಗುವುದಾಗಿ ಅಂತಿಮ್ರ ಕೋಚ್ ವಿಕಾಸ್ ಭಾರದ್ವಾಜ್ ತಿಳಿಸಿದ್ದಾರೆ.
ಕಳೆದ ವರ್ಷ ಅಂತಿಮ್ ಪಂಘಾಲ್ 20ರ ಕೆಳಹರಯದ ವಿಶ್ವ ಚಾಂಪ್ಯನ್ಶಿಪ್ ಗೆಲ್ಲುವ ಮೂಲಕ ಇಂತಹ ಸಾಧನೆ ಮಾಡಿದ ಪ್ರಥಮ ಭಾರತೀಯಳೆಂಬ ಸಾಧನೆ ಮಾಡಿದ್ದರು. ಈ ವರ್ಷ ಏಶ್ಯನ್ ಚಾಂಪ್ಯನ್ಶಿಪ್ಗೆ ವಿನೇಶ್ ಆಗಮಿಸದಿದ್ದಾಗ ಅಂತಿಮ್ ಸೀನಿಯರ್ ವಿಭಾಗದಲ್ಲೇ ಬೆಳ್ಳಿ ಗೆದ್ದಿದ್ದರು. ಗುಜರಾತಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ವಿನೇಶ್ರನ್ನು ಈ ಹಿಂದೆ ಸೋಲಿಸಿದ್ದ ಮಂಗೋಲಿಯಾದ ಖುಲಾನ್ ನಿಕ್ತ್ಯುಗ್ರನ್ನು ವಿಶ್ವಚಾಂಪ್ಯನ್ಶಿಪ್ನಲ್ಲಿ ಅಂತಿಮ್ ಪರಾಭಾವಗೊಳಿಸಿದ್ದರು.
ಎಲ್ಲರಿಂದಲೂ ಇತ್ತೀಚೆಗೆ ಪ್ರಶಂಸೆಗೊಳಪಡುತ್ತಿರುವ ಅಂತಿಮ್ ಪಂಘಾಲ್ ಕುಸ್ತಿ ಒಕ್ಕೂಟದ ನಿರ್ಧಾರದಿಂದ ಅಸಮಾಧಾನಗೊಂಡಿರುವುದು ಸಹಜವೇ ಆಗಿದೆ. ವಿನೇಶ್ ನೇರವಾಗಿ ಅರ್ಹತೆ ಪಡೆಯಲು ಅವರು ಯಾವ ವಿಶೇಷತೆ ಹೊಂದಿದ್ದಾರೆ ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.