ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ನ ಖ್ಯಾತ ಫ್ರಾಂಚೈಸಿಗಳಲ್ಲಿ ಒಂದು. ಫ್ಯಾನ್ ಬೇಸ್ ಲೆಕ್ಕಾಚಾರದಲ್ಲಿ ಆರ್ಸಿಬಿಗೆ ಸರಿಸಾಟಿ ಹೊಂದುವ ತಂಡ ಮತ್ತೊಂದಿಲ್ಲ. ಆದರೆ ಕರ್ನಾಟಕದ ಕ್ರಿಕೆಟಿಗರು ಮಾತ್ರ ಆರ್ಸಿಬಿಯಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ. ಆರಂಭದ ಒಂದೆರಡು ಸೀಸನ್ ಹೊರತು ಪಡಿಸಿದರೆ ಉಳಿದ ಸೀಸನ್ಗಳಲ್ಲಿ ಬೆಂಗಳೂರು ತಂಡದಲ್ಲಿದ್ದ ಕನ್ನಡಿಗರ ಸಂಖ್ಯೆ ನಗಣ್ಯ.
2008ರಲ್ಲಿ ಐಪಿಎಲ್ ಆರಂಭವಾದಾಗ ಬೆಂಗಳೂರು ತಂಡದಲ್ಲಿ ಕನ್ನಡಿಗರದ್ದೇ ಕಾರುಬಾರು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ರಂತಹ ದಿಗ್ಗಜರಿಂದ ಹಿಡಿದು, ಸುನೀಲ್ ಜೋಶಿ, ಬಾಲಚಂದ್ರ ಅಖಿಲ್ ರಂತಹ ಆಟಗಾರರು ಇದ್ದರು. ಅಂಡರ್ 19 ಕಪ್ ಗೆದ್ದುಬಂದ ಮನೀಷ್ ಪಾಂಡೆಯೂ ತಂಡದ ಸದಸ್ಯನಾಗಿದ್ದರು. ಆದರೆ ಬರು ಬರುತ್ತಾ ಕರ್ನಾಟಕದ ಕ್ರಿಕೆಟಿಗರು ಆರ್ಸಿಬಿ ತಂಡದಿಂದ ಮಾಯವಾದರು. ರಣಜಿ ಟ್ರೋಫಿ, ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಗಳನ್ನು ಕರ್ನಾಟಕ ಗೆದ್ದರೂ ಆ ತಂಡದ ಆಟಗಾರರಿಗೆ ಅವಕಾಶ ಸಿಗಲಿಲ್ಲ.
ವಿಜಯ್ ಮಲ್ಯ ಆರ್ಸಿಬಿ ತಂಡದ ಮಾಲೀಕನಾಗಿದ್ದಾಗ ಕನ್ನಡಿಗರಿಗೆ ಆರ್ಸಿಬಿಯಲ್ಲಿ ಅವಕಾಶವಿತ್ತು. ಸಿಇಒ, ಕೋಚ್, ಅಸಿಸ್ಟಂಟ್ ಕೋಚ್ಗಳೆಲ್ಲರೂ ಕನ್ನಡಿಗರೇ ಆದರು. ಯಾವಾಗ ಮಾಲೀಕತ್ವ ಬದಲಾಯಿತೋ ಅಲ್ಲಿಂದ ಆಟಗಾರರ ರಾಜ್ಯಗಳು ಕೂಡ ಬದಲಾಗತೊಡಗಿದವು. ಈಗ ಆರ್ಸಿಬಿಯಲ್ಲಿ ಕರ್ನಾಟಕದ ಆಟಗಾರರು ಅಂತ ಹೇಳಿಕೊಳ್ಳಲಿರುವುದು ಕೇವಲ ಎರಡೇ ಆಟಗಾರರು.
ಹಳೆಯ ಹರಾಜಿನ ಮಾತು ಈಗ ಬೇಡ. ಆದರೆ ಈ ಬಾರಿ ಆರ್ಸಿಬಿಗೆ ಕರ್ನಾಟಕದ ಆಟಗಾರರನ್ನು ಖರೀದಿ ಮಾಡುವ ಅವಕಾಶವಿತ್ತು. ಮನೀಷ್ ಪಾಂಡೆಗೆ ಬಿಡ್ ಮಾಡದೆ ಎಡವಟ್ಟು ಮಾಡಿಕೊಂಡಿದೆ. ದೇವದತ್ ಪಡಿಕಲ್ ಅವರನ್ನು ಉಳಿಸಿಕೊಂಡಿಲ್ಲ. ಕರುಣ್ ನಾಯರ್, ಕೆ. ಗೌತಮ್ ಮತ್ತು ರಾಬಿನ್ ಉತ್ತಪ್ಪ ಸುದ್ದಿಗೇ ಹೋಗಲಿಲ್ಲ.
ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಸದಸ್ಯ ಅನೀಶ್ವರ್ ಗೌತಮ್ ರನ್ನು ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಲವನೀತ್ ಸಿಸೋಡಿಯಾರನ್ನು ಕಾಟಚಾರಕ್ಕೆ ಅನ್ನುವಂತೆ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಆಡುವ ಬಳಗದಲ್ಲಿ ಈ ಆಟಗಾರರು ಇರುತ್ತಾರೋ ಅನ್ನುವ ಪ್ರಶ್ನೆ ಇದೆ. ಯಾರು ಏನೇ ಹೇಳಿದರೂ ಒಂದಂತೂ ಸತ್ಯ, ಫ್ರಾಂಚೈಸಿ ಆಟದಲ್ಲಿ ದುಡ್ಡಿಗಷ್ಟೇ ಬೆಲೆ.