ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಏನಾಗಿತ್ತು ಎಂಬುದು ಕ್ರಿಕೆಟ್ ಇತಿಹಾಸದ ಪುಟ ಸೇರಿದೆ. ತಂಡದ ಕೋಚ್ ಗುರುವಾಗಿದ್ದು, ಆಟಗಾರರೆಲ್ಲರೂ ಶಿಷ್ಯರೇ ಆಗಿರುವುದರಿಂದ ಕೋಚ್ ಜವಾಬ್ದಾರಿಯನ್ನು ಕೆಲ ಅನುಭವಿಗಳಿಗೆ ಮಾತ್ರ ನೀಡಲಾಗಿದೆ.
ಭಾರತ ಕ್ರಿಕೆಟ್ನ ಶ್ರೇಷ್ಠ ಬೌಲರ್ ಆಗಿದ್ದ ಅನಿಲ್ ಕುಂಬ್ಳೆ, ಅಂದಿನ ನಾಯಕ ವಿರಾಟ್ ಕೊಹ್ಲಿಯಿಂದಲೇ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತಂಡದ ಎಲ್ಲ ಆಟಗಾರರು ಮತ್ತು ನಾಯಕರೂ ಶಿಸ್ತಿನಲ್ಲಿರಬೇಕು ಎಂಬುದು ಕೋಚ್ರ ಏಕೈಕ ಆಶಯವಾಗಿತ್ತು. ಆಗ ಭರ್ಜರಿ ಫಾರ್ಮ್ ನಲ್ಲಿದ್ದ ಕೊಹ್ಲಿಗೆ ಎಲ್ಲರೂ ಶಿಸ್ತು ಪಾಲಿಸುವಂತೆ ಕೋಚ್ ಕುಂಬ್ಳೆ ನೀಡಿದ ಆದೇಶ ಇಷ್ಟವಾಗಲಿಲ್ಲ.
“ನಾನು ನಾಯಕ ಮತ್ತು ತಂಡದ ಮ್ಯಾನೇಜ್ಮೆಂಟ್ನೊಂದಿಗೆ ನಡೆಸಿದ ಸಂಭಾಷಣೆಯಲ್ಲಿ, ಕುಂಬ್ಳೆ ವಿಪರೀತ ಶಿಸ್ತನ್ನು ಬಯಸಿದ್ದರು. ತಂಡದ ಸದಸ್ಯರು ಇದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು ಎಂದು ಹೇಳಲಾಗಿದೆ. ನಾನು ಈ ವಿಷಯದ ಬಗ್ಗೆ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡಿದ್ದಾಗ ಯುವ ಆಟಗಾರರು ಇವರೊಂದಿಗೆ ಕೆಲಸ ಮಾಡಲು ಭಯ ಪಡುತ್ತಿದ್ದಾರೆ” ಎಂದು ವಿನೋದ್ ರಾಯ್ ಬರೆದಿದ್ದಾರೆ ಎಂದು ಇಂಗ್ಲೆಂಷ್ ವೈಬ್ ಸೈಟ್ ಪ್ರಕಟಿಸಿದೆ.
ವಿನೋದ್ ರಾಯ್ ತಮ್ಮ ಹೊಸ ಪುಸ್ತಕಕ್ಕೆ ‘ನಾಟ್ ಜಸ್ಟ್ ಎ ನೈಟ್ ವಾಚ್ಮ್ಯಾನ್: ಮೈ ಇನ್ನಿಂಗ್ಸ್ ಇನ್ ದಿ ಬಿಸಿಸಿಐ’ ಎಂದು ಹೆಸರಿಸಿದ್ದಾರೆ. ಸುಪ್ರೀಂ ಕೋರ್ಟ್ ಅವರನ್ನು ಬಿಸಿಸಿಐನಲ್ಲಿ ಆಡಳಿತಗಾರರ ಸಮಿತಿಯ (ಸಿಒಎ) ಮುಖ್ಯಸ್ಥರನ್ನಾಗಿ ನೇಮಿಸಿತ್ತು.
“ಈ ಇಡೀ ಸಮಸ್ಯೆಯನ್ನು ನಿಭಾಯಿಸಿದ ರೀತಿಯಿಂದ ಕುಂಬ್ಳೆ ತೀವ್ರ ದುಃಖಿತರಾಗಿದ್ದರು. ಕುಂಬ್ಳೆ ಅವರು ಯುಕೆಯಿಂದ ಹಿಂದಿರುಗಿದಾಗ ನಾವು ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ್ದೇವೆ” ಎಂದು ರಾಯ್ ಬರೆದಿದ್ದಾರೆ. ಇಡೀ ಕಾರ್ಯಕ್ರಮವನ್ನು ಯೋಜಿಸಿದ ರೀತಿಯಲ್ಲಿ ಅವರು ತೀವ್ರ ನಿರಾಶೆಗೊಂಡರು. ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಅವರು ಭಾವಿಸಿದರು. ಯಾವುದೇ ತಂಡ ಮತ್ತು ಅದರ ನಾಯಕನಿಗೆ ಇಷ್ಟು ಪ್ರಾಮುಖ್ಯತೆ ನೀಡಬಾರದು ಎಂದು ಕುಂಬ್ಳೆ ತಿಳಿಸಿದ್ದರು ಎಂದು ಪುಸ್ತಕದಲ್ಲಿ ಬರೆಯಾಲಗಿದೆ.
“ತಂಡದಲ್ಲಿ ಮತ್ತು ಅದರ ಹಿರಿಯ ಆಟಗಾರರಲ್ಲಿ ಶಿಸ್ತು ಮತ್ತು ವೃತ್ತಿಪರ ಮನೋಭಾವವನ್ನು ಬೆಳೆಸುವುದು ತರಬೇತುದಾರನ ಜವಾಬ್ದಾರಿಯಾಗಿದೆ. ಅವರಲ್ಲಿನ ಸ್ಪೂರ್ತಿಯನ್ನು ತಂಡದ ಆಟಗಾರರು ಗೌರವಿಸಬೇಕಾಗಿತ್ತು” ಎಂದು ವಿನೋದ್ ಬರೆದುಕೊಂಡಿದ್ದಾರೆ.