ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಕಾಣಬಹುದಾಗಿದೆ. ವರದಿಯ ಪ್ರಕಾರ, ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಟಿ 20 ಸರಣಿಯಲ್ಲಿ ವಿಶ್ರಾಂತಿ ನೀಡಬಹುದು. ಕೊಹ್ಲಿ ದೀರ್ಘಕಾಲದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ.
ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ರಾಷ್ಟ್ರೀಯ ತಂಡಕ್ಕೆ ಮರಳಬಹುದು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಜಡೇಜಾ ಗಾಯದ ಕಾರಣ ಟೀಮ್ ಇಂಡಿಯಾದ ಭಾಗವಾಗಿಲ್ಲ. ಇದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ವೆಸ್ಟ್ ಇಂಡೀಸ್ ಸರಣಿಯಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಟೆಸ್ಟ್ ಸರಣಿಗೂ ಮುನ್ನ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಎಲ್ಲಾ ಮೂರು ಮಾದರಿಗಳ ನಾಯಕನನ್ನಾಗಿ ಘೋಷಿಸಬಹುದು.
ಜಡೇಜಾ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಬೆವರು ಹರಿಸುತ್ತಿದ್ದಾರೆ. ಅವರು ಫೆಬ್ರವರಿ 24 ರೊಳಗೆ ಲಕ್ನೋ ತಲುಪಬಹುದು. ಅಲ್ಲಿ ಅವರು ಕೆಲವು ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಜಡೇಜಾ ಅವರು ಟಿ20 ಸರಣಿ ಬದಲಿಗೆ ಟೆಸ್ಟ್ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ.
ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಮತ್ತು ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಫೆಬ್ರವರಿ 24 ರಿಂದ ಲಕ್ನೋದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದೊಂದಿಗೆ ಶ್ರೀಲಂಕಾ ತಂಡದ ಪ್ರವಾಸ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 4 ರಿಂದ ಮೊಹಾಲಿಯಲ್ಲಿ ಆರಂಭವಾಗಲಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.
ಆಯ್ಕೆದಾರರು, ಆಟಗಾರರು, ಕೋಚ್ಗಳು ರೋಹಿತ್ ಶರ್ಮಾ ಅವರು ಟೆಸ್ಟ್ ತಂಡದ ನಾಯಕರಾಗಬೇಕೆಂದು ಬಯಸುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ವಾರ ಶ್ರೀಲಂಕಾ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ನಂತರ ರೋಹಿತ್ ಅವರನ್ನು ಟೆಸ್ಟ್ ನಾಯಕನಾಗಿ ನೇಮಕ ಮಾಡುವ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು.