ತಿರುವನಂತಪುರ: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ಧ 236 ರನ್ ಭರ್ಜರಿ ಜಯ ದಾಖಲಿಸಿ ಶುಭಾರಂಭಗೈದಿತು.
ಎಲೈಟ್ `ಬಿ’ ಗುಂಪಿನ ಪಂದ್ಯದಲ್ಲಿ ಜಯ ಗಳಿಸಲು ನಿಗದಿತ 50 ಓವರ್ಗಳಲ್ಲಿ 290 ರನ್ ಸೇರಿಸುವ ಕಠಿಣ ಸವಾಲು ಸ್ವೀಕರಿಸಿದ ಪುದುಚೇರಿ, ಕರ್ನಾಟಕ ತಂಡದ ಮಾರಕ ದಾಳಿಗೆ ತತ್ತರಿಸಿ 17.3 ಓವರ್ಗಳಲ್ಲಿ ಕೇವಲ 53 ರನ್ಗೆ ಕುಸಿದು ಹೀನಾಯ ಸೋಲು ಅನುಭ”ಸಿತು.
ಪುದುಚೇರಿ ಪರ ಹುಬ್ಬಳ್ಳಿ ಹುಡುಗ ಪವನ್ ದೇಶಪಾಂಡೆ 16, ಪಾರಸ್ ಡೋಗ್ರಾ 12 ಹಾಗೂ ದಾಮೋದರನ್ ರೋಹಿತ್ 11 ರನ್ ಮಾಡಿದರೆ, ಉಳಿದವರು ಎರಡಂಕ್ಕಿ ಮೊತ್ತವನ್ನು ಕೂಡ ಕಾಣಲಿಲ್ಲ.
ಕರ್ನಾಟಕ ಪರ ಜೆ.ಸುಚಿತ್ 4, ವಿ.ಕೌಶಿಕ್ 3, ಕೆ.ಸಿ.ಕಾರಿಯಪ್ಪ ಹಾಗೂ ವಿದ್ಯಾಧರ್ ಪಾಟೀಲ್ ತಲಾ ಒಂದು ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ಗೆ ಕಳುಹಿಸಲ್ಪಟ್ಟ ಕರ್ನಾಟಕ, ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 289 ರನ್ ಸೇರಿಸಿತು.
ಕರ್ನಾಟಕ ರೋಹನ್ ಕದಂ (೦) ಅವರ ವಿಕೆಟ್ ಅನ್ನು ಮೊದಲ ಓವರ್ನಲ್ಲಿಯೇ ಕಳೆದುಕೊಂಡಿತಾದರೂ, ಎರಡನೇ ವಿಕೆಟ್ ಜೊತೆಯಾಟದಲ್ಲಿ ಆರ್.ಸಮರ್ಥ ಹಾಗೂ ಕೆ.ವಿ.ಸಿದ್ಧಾರ್ಥ 31.5 ಓವರ್ಗಳಲ್ಲಿ 153 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು.
ಆರ್.ಸಮರ್ಥ್ ಆಕರ್ಷಕ 65 (107 ಎಸೆತ, 10 ಬೌಂಡರಿ) ಹಾಗೂ ಸಿದ್ಧಾರ್ಥ 61 (93 ಎಸೆತ, 5 ಬೌಂಡರಿ) ರನ್ ಮಾಡಿ ಔಟಾದರು.
ನಾಯಕ ಮನೀಷ್ ಪಾಂಡೆ ಅಜೇಯ 64 (48 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಶ್ರೀನಿವಾಸ್ ಶರತ್ 55 ರನ್ ಮಾಡಿ ತಂಡದ ಮೊತ್ತವನ್ನು ವೃದ್ಧಿಸಿದರು.
ಸ್ಕೋರ್ ವಿವರ
ಕರ್ನಾಟಕ 50 ಓವರ್ಗಳಲ್ಲಿ 6 ವಿಕೆಟ್ಗೆ 289
ಪುದುಚೇರಿ 17.3 ಓವರ್ಗಳಲ್ಲಿ 53