ಜೈಪುರದಲ್ಲಿ ಕರ್ನಾಟಕ ತಂಡ ಅಂದುಕೊಂಡಿದ್ದು ಯಾವುದೂ ನಡೆಯಲಿಲ್ಲ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಬೇಕು ಅನ್ನುವ ಕನಸು ನನಸಾಗಲಿಲ್ಲ. ತಮಿಳುನಾಡು ವಿರುದ್ಧ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ನಲ್ಲೇ ಹೊರಬಿದ್ದಿದೆ. ತಮಿಳುನಾಡು 151 ರನ್ಗಳಿಂದ ಕರ್ನಾಟಕ ತಂಡವನ್ನು ಸೋಲಿಸಿ ಮುನ್ನಡೆಯಿತು
ಟಾಸ್ ಗೆದ್ದ ಕರ್ನಾಟಕ ತಮಿಳುನಾಡು ತಂಡವನ್ನು ಬ್ಯಾಟಿಂಗ್ಗೆ ಇಳಿಸಿದತು. ಬಾಬಾ ಅಪರಾಜಿತ್ 13 ರನ್ಗಳಿಸಿ ಔಟಾದರು. ಆದರೆ ನಾರಾಯಣ್ ಜಗದೀಸನ್ ಮತ್ತು ಭಡ್ತಿ ಪಡೆದು ಬಂದಿದ್ದ ರವಿಶ್ರೀನಿವಾಸನ್ ಸಾಯಿ ಕಿಶೋರ್ ಕರ್ನಾಟಕ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ರನ್ಗಳಿಸಿದರು. 2ನೇ ವಿಕೆಟ್ಗೆ ಈ ಜೋಡಿ 147 ರನ್ಗಳನ್ನು ಸೇರಿಸಿತು. ಸಾಯಿಕಿಶೋರ್ 3 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 61 ರನ್ಗಳಿಸಿ ಔಟಾದರು. ಜಗದೀಸನ್ 101 ಎಸೆತಗಳಲ್ಲಿ 102 ರನ್ಗಳಿಸಿ ನಿರ್ಗಮಿಸಿದರು. ದಿನೇಶ್ ಕಾರ್ತಿಕ್ 44 ರನ್ ಮತ್ತು ಬಾಬಾ ಇಂದ್ರಜಿತ್ 31 ರನ್ ಗಳಿಸಿ ಮಿಂಚಿದರು. ಆದರೆ ಶಾರೂಖ್ ಖಾನ್ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 79 ರನ್ಗಳಿಸಿ ತಮಿಳುನಾಡಿನ ಬೃಹತ್ ಮೊತ್ತಕ್ಕೆ ಕಾರಣರಾದರು. 50 ಓವರುಗಳಲ್ಲಿ ತಮಿಳುನಾಡು 8 ವಿಕೆಟ್ ಕಳೆದುಕೊಂಡು 354 ರನ್ಗಳಿಸಿತು. ಪ್ರವೀಣ್ ದುಬೆ 3 ವಿಕೆಟ್ ಪಡೆದು ಮಿಂಚಿದರು.
ಚೇಸಿಂಗ್ ಆರಂಭಿಸಿದ ಕರ್ನಾಟಕ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡಿತು. ದೇವದತ್ ಪಡಿಕಲ್ (0), ರೋಹನ್ ಕದಂ (24), ಕೆ.ವಿ ಸಿದ್ಧಾರ್ಥ್ (29) ಮತ್ತು ಮನೀಷ್ ಪಾಂಡೆ (9) ರನ್ ಗಳಿಸಿ ನಿರ್ಗಮಿಸಿದ್ದು ಹೊಡೆತ ನೀಡಿತು. ಅಭಿನವ್ ಮನೋಹರ್ (34) ಮತ್ತು ಶ್ರೀನಿವಾಸ್ ಶರತ್ (43) ರನ್ಗಳಿಸಿದ್ದು ಬಿಟ್ಟರೆ ಬೇರೆಯವರಿಂದ ಹೆಚ್ಚಿನ ಕೊಡಗೆ ಬರಲಿಲ್ಲ. ಪ್ರವೀಣ್ ದುಬೆ ಕೊನೆಯಲ್ಲಿ 26 ರನ್ಗಳಿಸಿದ್ದು. ಕರ್ನಾಟಕ 39 ಓವರುಗಳಲ್ಲಿ 203 ರನ್ಗಳಿಗೆ ಆಲೌಟ್ ಆಗಿ 151 ರನ್ ಸೋಲು ಅನುಭವಿಸಿತು. ತಮಿಳುನಾಡು ಪರ ಸಿಲಂಬರಸನ್ 4 ವಿಕೆಟ್ ಮತ್ತು ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರು.