ವಿಜಯ್ ಹಜಾರೆ | ರುತುರಾಜ್, ವೆಂಕಟೇಶ್ ಅಯ್ಯರ್ ಸೆಂಚೂರಿ Venkatesh Iyer sports karnataka
ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಅಯ್ಯರ್ ಧೂಳೆಬ್ಬಿಸಿದ್ದಾರೆ. ಕೇರಳ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಮಿಂಚಿನ ಶತಕ ಸಿಡಿಸಿದ್ರೆ, ಮಹಾರಾಷ್ಟ್ರ ಪರ ನಾಯಕ ರುತುರಾಜ್ ಗಾಯಕ್ವಾಡ್ ಶತಕ ಬಾರಿಸಿ ತಂಡಕ್ಕೆ ಏಕಾಂಗಿಯಾಗಿ ಜಯ ತಂದುಕೊಟ್ಟಿದ್ದಾರೆ.
2021ರ ಐಪಿಎಲ್ ನಲ್ಲಿ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರಿಸಿದ್ದರೇ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರ್ಭಟಿಸಿದ್ದರು. ಐಪಿಎಲ್ ಮೆಗಾ ಹರಾಜಿಗೆ ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೈನ್ಡ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಸಿಎಸ್ಕೆ ತಂಡ ಆರು ಕೋಟಿ ರುಪಾಯಿಗೆ ರುತುರಾಜ್ ಅವರನ್ನು ಉಳಿಸಿಕೊಂಡರೆ, ಕೆಕೆಆರ್ ತಂಡ ಎಂಟು ಕೋಟಿ ವೆಂಕಟೇಶ್ ಅಯ್ಯರ್ ಅವರನ್ನು ಉಳಿಸಿಕೊಂಡಿದೆ.
ಇನ್ನು ವಿಜಯ್ ಹಜಾರೆ ಟೂರ್ನಿ ವಿಚಾರಕ್ಕೆ ಬಂದರೇ ಮಹಾರಾಷ್ಟ್ರ, ಛತ್ತೀಸ್ಗಢ ನಡುವಿನ ಕದನದಲ್ಲಿ ಮೊದಲು ಬ್ಯಾಟ್ ಮಾಡಿದ ಛತ್ತೀಸ್ಗಢ 50 ಓವರ್ಗಳಲ್ಲಿ 7 ವಿಕೆಟ್ಗೆ 275 ರನ್ ಗಳಿಸಿತ್ತು. ನಂತರ ಈ ಗುರಿಯನ್ನ ಚೇಸ್ ಮಾಡಲು ಮುಂದಾದ ಮಹಾರಾಷ್ಟ್ರಕ್ಕೆ ರುತುರಾಜ್ ಸೆಂಚೂರಿಯೊಂದಿಗೆ ಜಯ ತಂದುಕೊಟ್ಟರು. ಪಂದ್ಯದಲ್ಲಿ 143 ಎಸೆತಗಳನ್ನು ಎದುರಿಸಿದ ಗಾಯಕ್ವಾಡ್ 154 ರನ್ ಗಳಿಸಿದರು. ಈ ಇನ್ನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್ಗಳು ಸೇರಿವೆ.
ಮತ್ತೊಂದೆಡೆ ಕೇರಳ ವಿರುದ್ಧದ ಮೊದಲ ಇನಿಂಗ್ಸ್ನಲ್ಲಿ ವೆಂಕಟೇಶ್ ಅಯ್ಯರ್ 84 ಎಸೆತಗಳನ್ನು ಎದುರಿಸಿ 7 ಬೌಂಡರಿ, 4 ಸಿಕ್ಸರ್ ಸಹಿತ 112 ರನ್ ಚಚ್ಚಿದರು. ಶುಭಂ ಶರ್ಮಾ 82 ರನ್ ಗಳಿಸಿದರು. ಇದರೊಂದಿಗೆ ಮಧ್ಯಪ್ರದೇಶ 50 ಓವರ್ಗಳಲ್ಲಿ 9 ವಿಕೆಟ್ಗೆ 329 ರನ್ ಗಳಿಸಿತು. ಈ ಗುರಿಯನ್ನ ಬೆನ್ನತ್ತಿದ ಕೇರಳ 289 ರನ್ ಗಳಿಗೆ ಆಲೌಟ್ ಆಯಿತು.