19 ವಯೋಮಿತಿ ವಿಶ್ವಕಪ್ – ಭಾರತಕ್ಕೆ ಮತ್ತೆ ಶಾಕ್.. ಯಶ್ ಧೂಳ್ ಸೇರಿ ಐವರಿಗೆ ಮತ್ತೆ ಕೋವಿಡ್ ಪಾಸಿಟಿವ್
19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಕ್ಯಾಂಪ್ಗೆ ಕೋವಿಡ್ ಸೋಂಕು ಅಘಾತವನ್ನುಂಟು ಮಾಡಿದೆ.
ನಾಯಕ ಯಶ್ ಧೂಳ್ ಸೇರಿದಂತೆ ಐದು ಮಂದಿ ಆಟಗಾರರು ಶನಿವಾರ ನಡೆಯಲಿರುವ ಲೀಗ್ ನ ಕೊನೆಯ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಶುಕ್ರವಾರ ನಡೆದ ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ನಾಯಕ ಯಶ್ ಧೂಳ್ ಸೇರಿದಂತೆ ಐದು ಮಂದಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಉಗಾಂಡಾ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆಲ್ ರೌಂಡರ್ ವಾಸು ವ್ಯಾಟ್ಸ್ ಮಾತ್ರ ನೆಗಟಿವ್ ವರದಿ ಬಂದಿದೆ.
ಮೊನ್ನೆ ನಡೆದ ಐರ್ಲೆಂಡ್ ಪಂದ್ಯಕ್ಕೆ ಮುನ್ನ ನಡೆದಿದ್ದ ಟೆಸ್ಟ್ ನಲ್ಲಿ ಆರು ಮಂದಿ ಆಟಗಾರರಿಗೆ ಪಾಸಿಟಿವ್ ವರದಿ ಬಂದಿತ್ತು. ಆರು ಮಂದಿ ಆಟಗಾರರು ಐಸೊಲೇಷನ್ ನಲ್ಲಿದ್ದರು.
ಈಗಾಗಲೇ ಭಾರತ ಕಿರಿಯರ ತಂಡ ಬಿ ಗುಂಪಿನ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧ ಜಯ ಸಾಧಿಸಿಕೊಂಡು ಕ್ವಾರ್ಟರ್ ಫೈನಲ್ ಪ್ರವೇಶವನ್ನು ಭದ್ರಪಡಿಸಿಕೊಂಡಿತ್ತು.
ಇನ್ನೊಂದೆಡೆ ಬಿಸಿಸಿಐ ಹೆಚ್ಚುವರಿಯಾಗಿ ಐವರು ಆಟಗಾರರನ್ನು ವೆಸ್ಟ್ ಇಂಡಿಸ್ಗೆ ಕಳುಹಿಸಿಕೊಟ್ಟಿದೆ. ಜನವರಿ 29ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಹೆಚ್ಚುವರಿ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ.
ವಿಶ್ವಕಪ್ ಟೂರ್ನಿಗೆ ಮುನ್ನ ಭಾರತ ಕಿರಿಯರ ತಂಡ ಏಷ್ಯಾಕಪ್ ಗೆದ್ದುಕೊಂಡು ಯುಎಇನಿಂದ ವೆಸ್ಟ್ ಇಂಡಿಸ್ ಗೆ ಪ್ರಯಾಣ ಬೆಳೆಸಿತ್ತು. ಕೆರೆಬಿಯನ್ ನಾಡಿನಲ್ಲೂ ತಂಡ ಜೈವಿಕ ಸುರಕ್ಷತೆಯಡಿಯಲ್ಲಿತ್ತು. ಆದ್ರೂ ಕೋವಿಡ್ ಸೋಂಕು ಹೇಗೆ ವಕ್ಕರಿಸಿಕೊಂಡಿತ್ತು ಎಂಬುದು ಗೊತ್ತಾಗುತ್ತಿಲ್ಲ.