೧೯ ವಯೋಮಿತಿ ವಿಶ್ವಕಪ್ – ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಎದುರಾಳಿ ಬಾಂಗ್ಲಾದೇಶ
೧೯ ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಉಗಾಂಡ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಬಿ ಗುಂಪಿನ ಸೂಪರ್ ಲೀಗ್ ನ ಕೊನೆಯ ಪಂದ್ಯದಲ್ಲಿ ಭಾರತ ಕಿರಿಯರ ತಂಡ ೩೨೬ ರನ್ ಗಳಿಂದ ಉಗಾಂಡ ತಂಡವನ್ನು ಮಣಿಸಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಇದರೊಂದಿಗೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ. ನಾಲ್ಕು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಶನಿವಾರ ಬ್ರಿಯಾನ್ ಲಾರಾ ಮೈದಾಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಿರಿಯರ ತಂಡ ನಿಗದಿತ ೫೦ ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ೪೦೫ ರನ್ ದಾಖಲಿಸಿತು.
ಭಾರತದ ಪರ ಆಂಗ್ ಕ್ರಿಶ್ ೧೪೪ ರನ್ ಹಾಗೂ ರಾಜ್ ಬಾವಾ ಅಜೇಯ ೧೬೨ ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ್ರು. ಅಷ್ಟೇ ಅಲ್ಲ, ಟೂರ್ನಿಯ ಇತಿಹಾಸದಲ್ಲೇ ಅತೀ ಹೆಚ್ಚು ರನ್ ದಾಖಲಿಸಿದ್ದ ಹಿರಿಮೆಗೂ ಭಾರತ ತಂಡ ಪಾತ್ರವಾಗಿದೆ.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಉಗಾಂಡ ತಂಡ ೧೯.೪ ಓವರ್ ಗಳಲ್ಲಿ ಕೇವಲ ೭೯ ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತ್ತು.
ಜನವರಿ ೨೯ ರಂದು ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಕಿರಿಯರ ತಂಡಕ್ಕೆ ಕೋವಿಡ್ ಸೋಂಕು ಆಘಾತವನ್ನುಂಟು ಮಾಡಿದೆ. ನಾಯಕ ಯಶ್ ಧೂಳ್ ಮತ್ತು ಉಪನಾಯಕ ಸೇರಿದಂತೆ ಐದು ಮಂದಿ ಆಟಗಾರರು ಕೋವಿಡ್ ಸೋಂಕಿನಿAದ ಬಳಲುತ್ತಿದ್ದಾರೆ. ಬಾಂಗ್ಲಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ನಾಯಕ ಮತ್ತು ಉಪನಾಯಕ ಸೇರಿದಂತೆ ಪ್ರಮುಖ ಆಟಗಾರರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ. ಇನ್ನೊಂದೆಡೆ ಬಿಸಿಸಿಐ ಮುಂಜಾಗ್ರತಕ್ರಮವಾಗಿ ಐದು ಮಂದಿ ಹೆಚ್ಚುವರಿ ಆಟಗಾರರನ್ನು ವೆಸ್ಟ್ ಇಂಡೀಸ್ ಗೆ ಕಳಹಿಸಿಕೊಟ್ಟಿದೆ. ಸದ್ಯ ಈ ಐದು ಮಂದಿ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.