team india – ರಾಹುಲ್ ದ್ರಾವಿಡ್ಗೆ ರವಿಶಾಸ್ತ್ರಿ ಹೇಳಿರುವ ಕಿವಿ ಮಾತು ಏನು ?
ಟೀಮ್ ಇಂಡಿಯಾದ ಮಾಜಿ ಗುರು ರವಿಶಾಸ್ತ್ರಿ ಅವರು ಟೀಮ್ ಇಂಡಿಯಾದ ಹಾಲಿ ಗುರು ರಾಹುಲ್ ದ್ರಾವಿಡ್ ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಸದ್ಯ ಟೀಮ್ ಇಂಡಿಯಾ ಸಂಕಷ್ಟದ ಕಾಲವನ್ನು ಎದುರಿಸುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಹೊರ ನಡೆದಿದ್ದಾರೆ. ತಂಡದ ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಇದು ತಂಡದ ಹೊಂದಾಣಿಕೆಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಬಗೆ ಹರಿಸಲು ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ರವಿಶಾಸ್ತ್ರಿ ಅವರು ರಾಹುಲ್ ದ್ರಾವಿಡ್ ಗೆ ಕಿವಿ ಮಾತು ಹೇಳಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಟೀಮ್ ಇಂಡಿಯಾದ ಸದ್ಯದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಆಡುವಂತಹ ಆಟಗಾರರನ್ನು ಗುರುತಿಸಿಕೊಳ್ಳಬೇಕು. ಈ ಕಾರ್ಯವನ್ನು ರಾಹುಲ್ ದ್ರಾವಿಡ್ ಮತ್ತು ಟೀಮ್ ಮ್ಯಾನೇಜ್ ಮೆಂಟ್ ಮಾಡಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ.
2022 ಐಸಿಸಿ ಟಿ-20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಗೆ ಟೀಮ್ ಇಂಡಿಯಾ ಸನ್ನದ್ದಗೊಳ್ಳಬೇಕು. ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರು ಇರಬೇಕು. ಒಂದೇ ತಂಡವನ್ನು ಮುಂದುರಿಸಿಕೊಂಡು ಹೋಗಬಾರದು ಎಂದು ರವಿಶಾಸ್ತ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ ಮುಂದಿನ ಎಂಟು ಹತ್ತು ತಿಂಗಳು ಮಹತ್ವದ ಸಮಯ. ಈ ಸಮಯದಲ್ಲಿ ಸರಿಯಾದ ಕಾಂಬಿನೇಷನ್ ನಲ್ಲಿ ತಂಡವನ್ನು ಕಟ್ಟಬೇಕು. ನಾಲ್ಕೈದು ವರ್ಷಗಳ ಕಾಲ ಆಡುವಂತಹ ಆಟಗಾರರನ್ನು ತಂಡದಲ್ಲಿಟ್ಟುಕೊಳ್ಳಬೇಕು. ಯುವ ಮತ್ತು ಅನುಭವಿ ಆಟಗಾರರನ್ನು ಹೊಂದಿರುವ ತಂಡವಿರಬೇಕು ಎಂಬುದನ್ನು ನಾನು ಯಾವಾಗಲೂ ನಂಬುತ್ತೇನೆ ಅಂತಾರೆ ರವಿಶಾಸ್ತ್ರಿ.
team india – Ravi Shastri’s Advice For head coach Rahul Dravid
ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಬಾರಿ ಬದಲಾವಣೆಯ ಅಗತ್ಯವಿದೆ. ನೀವು ಒಂದೇ ತಂಡಕ್ಕೆ ಅಂಟಿಕೊಂಡ್ರೆ ಮುಂದಿನ ದಿನಗಳಲ್ಲಿ ತುಂಬಾನೇ ಕಷ್ಟವಾಗುತ್ತದೆ. ಆಗ ತಂಡ ಸಮತೋಲನದಲ್ಲಿರುವುದಿಲ್ಲ ಎನ್ನುತ್ತಾರೆ ಶಾಸ್ತ್ರಿ.
ಮುಂದಿನ ಶ್ರೀಲಂಕಾ ಸರಣಿಗೆ ಮುನ್ನ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿ ಫೆಬ್ರವರಿ 6ರಿಂದ ಅಹಮದಾಬಾದ್ ನಲ್ಲಿ ನಡೆದ್ರೆ, ಟಿ-20 ಸರಣಿ ಫೆಬ್ರವರಿ 16ರಿಂದ 20ರವರೆಗೆ ಕೊಲ್ಕತ್ತಾದಲ್ಲಿ ನಡೆಯಲಿದೆ.