ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಸೋತ ಮೇಲೆ ಟೀಮ್ ಇಂಡಿಯಾದ ಸೋಲಿಲ್ಲದ ಸರಪಳಿ ತುಂಡಾಗಿದೆ. ದಕ್ಷಿಣ ಆಫ್ರಿಕಾ ಎಲ್ಲಾ ನಿರೀಕ್ಷೆಗಳನ್ನು ಮೀರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ನಲ್ಲಿ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾಕ್ಕಿಂತಲೂ ಗಟ್ಟಿ ಅನ್ನುವುದನ್ನು ತೋರಿಸಿಕೊಟ್ಟಿದೆ. ಆದರೆ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ತನ್ನ ಶಕ್ತಿ ಪ್ರದರ್ಶನಕ್ಕೆ ಅವಕಾಶವಿದೆ. ವೈಫಲ್ಯ ಮೊದಲ ಪಂದ್ಯಕ್ಕೆ ಮಾತ್ರ ಸೀಮಿತ ಅನ್ನುವುದನ್ನು ತೋರಿಸಲು ವೇದಿಕೆಯಾಗಿದೆ.
ಕಟಕ್ನ ಭಾರಾಮತಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮುನ್ನ ಟೀಮ್ಇಂಡಿಯಾ ಬೌಲಿಂಗ್ ವಿಭಾಗವನ್ನು ಬಲಪಡಿಸಬೇಕಿದೆ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ತಂಡದಲ್ಲಿ ಉಳಿಸಿಕೊಳ್ಳುವ ಪ್ಲಾನ್ ಮಾಡಿದರೆ ಔಟ್ ಅಂಡ್ ಔಟ್ ವೇಗಕ್ಕಾಗಿ ಆವೇಶ್ ಖಾನ್ ಬದಲಿಗೆ ಉಮ್ರನ್ ಮಲಿಕ್ರನ್ನು ಆಡಿಸಿಕೊಳ್ಳಬೇಕಿದೆ. ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಶಕ್ತಿಯನ್ನು ಬಳಸಿಕೊಂಡರೆ ಉತ್ತಮ.
ಸ್ಪಿನ್ ವಿಭಾಗಕ್ಕೆ ಹೆಚ್ಚು ಬಲ ಬೇಕಿದೆ. ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಎಡಗೈ ಬ್ಯಾಟ್ಸ್ಮನ್ಗಳ ಸಂಖ್ಯೆ ಹೆಚ್ಚಿರುವುದರಿಂದ ಒಬ್ಬ ಆಫ್ ಸ್ಪಿನ್ನರ್ಗಾಗಿ ಹುಡುಕಾಟ ನಡೆಸಬೇಕಿದೆ. ಚಹಲ್ ಲೆಗ್ ಸ್ಪಿನ್ನರ್ ಆಗಿರುವುದರಿಂದ ಎಡಗೈ ಬ್ಯಾಟ್ಸ್ಮನ್ಗಳಿಗೆ ಟಾರ್ಗೆಟ್ ಆಗುತ್ತಿದ್ದಾರೆ. ಅಷ್ಟೇ ಅಲ್ಲದೆ ಚಹಲ್ ಗೂಗ್ಲಿ ಎಸೆಯುತ್ತಿಲ್ಲ. ಹೀಗಾಗಿ ಗೂಗ್ಲಿ ಸ್ಪೆಷಲಿಸ್ಟ್ ರವಿ ಬಿಷ್ಣೋಯಿಗೆ ಸ್ಥಾನ ಕೊಡಬಹುದು. ಅಕ್ಸರ್ ಪಟೇಲ್ ಕಂಟ್ರೋಲ್ನಲ್ಲಿ ಇರುವುದರಿಂದ ಸಮಸ್ಯೆ ಇಲ್ಲ.
ಕಟಕ್ ಪಿಚ್ ಬಗ್ಗೆಯೂ ಟೀಮ್ ಇಂಡಿಯಾ ಅಧ್ಯಯನ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾಡು ಇಲ್ಲವೆ ಮಡಿ ಮನಸ್ಥಿತಿಯಲ್ಲಿ ಆಡಿದರೆ ಉತ್ತಮ ಫಲಿತಾಂಶ ಸಾಧ್ಯ.