ಟೀಮ್ ಇಂಡಿಯಾದ ಸ್ಟೈಲಿಷ್ ಆಲ್ರೌಂಡರ್ ಆಗಿ ಗುರುತಿಸಿಕೊಂಡವು ಹಾರ್ದಿಕ್ ಪಾಂಡ್ಯಾ. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡಕ್ಕೆ ಎಂಟ್ರಿಕೊಟ್ಟವರು ಹಾರ್ದಿಕ್ ಪಾಂಡ್ಯಾ. ಆದರೆ ಬೆನ್ನುನೋವು ಹಾರ್ದಿಕ್ ಕ್ರಿಕೆಟ್ ಜೀವನವನ್ನು ಮುಗಿಸುವ ಸಾಧ್ಯತೆ ಇದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಿಂದ ಪಾಂಡ್ಯಾ ದೂರವಾಗುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ನೀಡಿದ್ದರು. ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಪಾಂಡ್ಯ ಕಂಬ್ಯಾಕ್ ಮಾಡುವ ಯೋಜನೆಯಲ್ಲಿದ್ದಾರೆ. ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್ ಬಗ್ಗೆ ಗಮನಹರಿಸಲು ಪಾಂಡ್ಯ ಚಿಂತಿಸಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳುವ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ 2019 ರಿಂದ ಬೆನ್ನು ನೋವನಿಂದ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದರೂ ಸಂಪೂರ್ಣ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಬೌಲಿಂಗ್ ಮಾಡುವುದನ್ನು ಪಾಂಡ್ಯ ನಿಲ್ಲಿಸಿದ್ದರು. ಶಾರ್ದೂಲ್ ಠಾಕೂರ್ ಹಾಗೂ ವೆಂಕಟೇಶ್ ಅಯ್ಯರ್ ಆಲ್ರೌಂಡರ್ಗಳಾಗಿ ತಂಡದಲ್ಲಿದ್ದಾರೆ. ಹೀಗಾಗಿ ಈ ಇಬ್ಬರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಪಾಂಡ್ಯಗೆ ಅವಕಾಶ ಸಿಗಲಿದೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಮತ್ತು 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ವೇಳೆ ಫಿಟ್ ಆಗಿ ತಂಡಕ್ಕೆ ಎಂಟ್ರಿ ಪಡೆಯುವದನ್ನು ಹಾರ್ದಿಕ್ ಎದುರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಹಾರ್ದಿಕ್ ಪಾಲಿಗೆ ಬೆನ್ನುನೋವು ವಿಲನ್ ಆಗಿ ಕಾಡುತ್ತಿದೆ.