ಟೀಮ್ ಇಂಡಿಯಾಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಬೌಲಿಂಗ್ ವಿಭಾಗವಂತೂ ಕಳೆಗುಂದಿದೆ. ಬ್ಯಾಟ್ಸ್ಮನ್ಗಳು ಕೂಡ ಒದ್ದಾಟ ನಡೆಸುತ್ತಿದ್ದಾರೆ. ಒಬ್ಬ ಪರಿಪೂರ್ಣ ಆಲ್ರೌಂಡರ್ಗಾಗಿ ತಂಡ ಹುಡುಕಾಟ ನಡೆಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ 2ನೇ ಏಕದಿನ ಪಂದ್ಯವನ್ನು ಕಳೆದುಕೊಂಡು ಸರಣಿ ಸೋಲು ಅನುಭವಿಸಿದೆ.
ಟೀಮ್ ಇಂಡಿಯಾಕ್ಕೆ ಮೊದಲ ಸಮಸ್ಯೆ ಇರುವುದು ಆರಂಭಿಕ ವಿಚಾರದಲ್ಲಿ ರೋಹಿತ್ ಶರ್ಮಾ ತಂಡಕ್ಕೆ ವಾಪಾಸಾದರೆ ಶಿಖರ್ ಧವನ್ ಜೊತೆಗೆ ಕಣಕ್ಕಿಳಿಯುತ್ತಾರೆ. ಆಗ 4ನೇ ಕ್ರಮಾಂಕದ ಸಮಸ್ಯೆಗೆ ರಾಹುಲ್ ಉತ್ತರವಾಗುತ್ತಾರೆ. ಆದರೆ ರೋಹಿತ್ ಗಾಯಗೊಂಡಿರುವುದು ಟೀಮ್ ಇಂಡಿಯಾಕ್ಕೆ ಹಿನ್ನಡೆ ಉಂಟು ಮಾಡಿದೆ. ಅಷ್ಟೇ ಅಲ್ಲ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರರ ಸ್ಥಿರ ಪ್ರದರ್ಶನದ ಕೊರತೆ ತಂಡಕ್ಕೆ ದುಬಾರಿ ಆಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಲ್ಲ ಆಲ್ರೌಂಡರ್ ಕೊರತೆ ತಂಡವನ್ನು ಕಾಡುತ್ತಿದೆ. ರವೀಂದ್ರ ಜಡೇಜಾ ಈ ಸ್ಲಾಟ್ನ ಪ್ರಮುಖ ಪ್ಲೇಯರ್. ಜಡ್ಡು ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸೈ. ಜೊತೆಗೆ ಫೀಲ್ಡಿಂಗ್ ಕೂಡ ಅಮೋಘವಾಗಿ ಮಾಡಬಲ್ಲರು. ಅಶ್ವಿನ್ ಅಥವಾ ಯಜ್ವೆಂದ್ರ ಚಹಲ್ ಬದಲು ಜಡೇಜಾ ಆಡುತ್ತಿದ್ದರು. ಜಡ್ಡು ಇದ್ದಿದ್ದರೆ ಎಡಗೈ ಸ್ಪಿನ್ನರ್ ಅಗಿಯೂ ಬಳಕೆ ಅಗುತ್ತಿದ್ದರು. ಜಡೇಜಾ ಆಗಮನದಿಂದ ಶ್ರೆಯಸ್ ಅಯ್ಯರ್ ಅಥವಾ ಸೂರ್ಯ ಕುಮಾರ್ ಯಾದವ್ಗೆ, ವೆಂಕಟೇಶ್ ಅಯ್ಯರ್ ಜಾಗದಲ್ಲಿ ಆಡಲು ಅವಕಾಶವಿತ್ತು.
ಇನ್ನು ಫಾಸ್ಟ್ ಬೌಲಿಂಗ್ ವಿಭಾಗ ಕೇವಲ ಜಸ್ ಪ್ರಿತ್ ಬುಮ್ರಾರನ್ನು ಮಾತ್ರ ನಂಬಿಕೊಂಡಿದೆ. ಭುವನೇಶ್ವರ್ ಕುಮಾರ್ ಈಗ ಮೊನಚಿಲ್ಲದ ಅಸ್ತ್ರವಾಗಿದ್ದಾರೆ. ಮೊಹಮ್ಮದ್ ಶಮಿ ಈ ಜಾಗಕ್ಕೆ ಸೂಕ್ತ ಆಟಗಾರ. ಆದರೆ ವರ್ಕ್ ಲೋಡ್ ರೊಟೇಷನ್ ಮತ್ತು ಗಾಯದ ಕಾರಣದಿಂದ ಹಲವು ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಇದು ಹೊಸ ನಾಯಕ ರಾಹುಲ್ ಮೇಲೆ ಒತ್ತಡ ಹೇರುವ ಜೊತೆಗೆ ತಂಡಕ್ಕೆ ಸರಣಿ ಸೋಲಿನ ಆಘಾತ ನೀಡಿದೆ.