ಹುವೆಲ್ವಾ (ಸ್ಪೇನ್): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ನಿರಾಸೆ ಅನುಭವಿಸಿದ್ದಾರೆ.
ಭಾನುವಾರ ನಡೆದ ಫೈನಲ್ ನಲ್ಲಿ ಶ್ರೀಕಾಂತ್ 15-21, 20-22 ಮಲೇಷ್ಯಾದ ಲೋಹ್ ಕೀನ್ ಯೂ ವಿರುದ್ಧ ನಿರಾಸೆ ಅನುಭವಿಸಿದರು. ಫೈನಲ್ ನಲ್ಲಿ ಆಘಾತ ಅನುಭವಿಸದರೂ, ಶ್ರೀಕಾಂತ್ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನವರಾದ ಕಿಡಂಬಿ ಶ್ರೀಕಾಂತ್ ಅವರು 2018 ರಲ್ಲಿ ವಿಶ್ವದ ನಂಬರ್ ಒನ್ ಆಟಗಾರರಗಿದ್ದಾರು. ಅವರು ಆಸ್ಟ್ರೇಲಿಯನ್ ಓಪನ್, ಇಂಡೋನೇಷ್ಯಾ ಓಪನ್, ಸಿಂಗಾಪುರ್ ಓಪನ್, ಚೀನಾ ಓಪನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಪ್ರಶಸ್ತಿ ಸುತ್ತು ತಲುಪಿದ ಭಾರತದ ಮೊದಲ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1983ರಲ್ಲಿ ಪ್ರಕಾಶ್ ಪಡುಕೋಣೆ, 2019ರಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬಿ ಸಾಯಿ ಪ್ರಣೀತ್ ಕಂಚಿನ ಪದಕ ಗೆದ್ದಿದ್ದರು.
ಮೊದಲ ಗೇಮ್ ನ ಆರಂಭದಲ್ಲಿ ಶ್ರೀಕಾಂತ್ 3-3 ರಿಂದ ಎದುರಾಳಿ ಆಟಗಾರನಿಗೆ ಸವಾಲು ಎಸೆದರು. ಮೊದಲಾರ್ಧದಲ್ಲಿ ಜಿದ್ದಿಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮಲೇಷ್ಯಾ ಆಟಗಾರ ಗೆಲುವು ಸಾಧಿಸಿ, ಎರಡನೇ ಅವಧಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು.
ಎರಡನೇ ಗೇಮ್ ನಲ್ಲೂ ಶ್ರೀಕಾಂತ್ ಸೊಗಸಾದ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿದರು. ಲೋಹ್ ಕೀನ್ ಯೂ ಕೊನೆಯಲ್ಲಿ ಅಂಕಗಳನ್ನು ಸ್ಥಿರವಾಗಿ ಕಲೆ ಹಾಕಿ ಗೆಲುವು ದಾಖಲಿಸಿದರು.
ಮಹಿಳಾ ವಿಭಾಗದಲ್ಲಿ ಜಪಾನ್ ನ ಅಕಾನೆ ಯಮಾಗುಚಿ 21-14, 21-11 ರಿಂದ ತೈಪೇಯ ತೈ ಜು ಯಿಂಗ್ ರನ್ನು ಮಣಿಸಿ ಬಂಗಾರ ತಮ್ಮದಾಗಿಸಿಕೊಂಡರು.