ಚಾಣಾಕ್ಷ ಬೌಲಿಂಗ್ ಟ್ಯಾಲೆಂಟ್ ಜೊತೆಗೆ ಒಂದಿಲ್ಲೊಂದು ವಿವಾದ, ಮ್ಯಾಚ್ ಫಿಕ್ಸಿಂಗ್ ಕಳಂಕ… ಹೀಗೆ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿದ್ದ ಟೀಂ ಇಂಡಿಯಾ ಕಂಡ ಅತ್ಯುತ್ತಮ ಬೌಲರ್ ಎನಿಸಿದ್ದ ಶಾಂತಕುಮಾರನ್ ಶ್ರೀಶಾಂತ್, ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಟೀಂ ಇಂಡಿಯಾದಲ್ಲಿ ಆಡಿದ ವೇಗದ ಬೌಲರ್ಗಳ ಪೈಕಿ ಎಸ್. ಶ್ರೀಶಾಂತ್ ಸಹ ಒಬ್ಬರು. ಭಾರತದ ಪರ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಆಡಿದ್ದ ಕೇರಳ ಮೂಲದ ಶ್ರೀಶಾಂತ್ ತನ್ನ ಬೌಲಿಂಗ್ಗಿಂತ ಹೆಚ್ಚಾಗಿ ವಿವಾದಗಳಿಂದಲೇ ಪ್ರಸಿದ್ಧಿಯಾಗಿದ್ದರು. ತಮ್ಮ ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿದ್ದ ಶ್ರೀಶಾಂತ್, ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ತಮ್ಮ ಕ್ರಿಕೆಟ್ ಕೆರಿಯರ್ ಹಾಳು ಮಾಡಿಕೊಂಡಿದ್ದರು.
ಒಂಭತ್ತು ವರ್ಷದ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಮ್ಬ್ಯಾಕ್ ಮಾಡಿದ್ದ 39 ವರ್ಷದ ಶ್ರೀಶಾಂತ್, ಪ್ರಸ್ತುತ ನಡೆಯುತ್ತಿರುವ 2021-22ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕೇರಳ ತಂಡದ ಪರ ಆಡಿದ್ದರು. ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ಗಳಿಂದ ಕೇವಲ 2 ವಿಕೆಟ್ ಪಡೆದಿದ್ದರು. ಆದರೆ ಇದೀಗ ಕ್ರಿಕೆಟ್ ಅಂಗಳದಿಂದ ದೂರ ಉಳಿಯುವ ನಿರ್ಧಾರ ಮಾಡಿರುವ ಶ್ರೀಶಾಂತ್ ಎಲ್ಲಾ ಮಾದರಿಯ ಡೊಮೆಸ್ಟಿಕ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿರುವ ಕುರಿತು ಟ್ವಿಟರ್ನಲ್ಲಿ ತಿಳಿಸಿರುವ ಶಾಂತಕುಮಾರನ್ ಶ್ರೀಶಾಂತ್, “ನನ್ನ 25 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನಾನು ಯಶಸ್ಸನ್ನು ಮತ್ತು ಗೆಲುವುಗಳನ್ನು ಕಂಡಿದ್ದೇನೆ. ಪರಿಶ್ರಮ, ಉತ್ಸಾಹ ಹಾಗೂ ಸ್ಪರ್ಧೆಯೊಂದಿಗೆ ತಯಾರಿ ಮಾಡಿಕೊಂಡು ತರಬೇತಿ ಪಡೆದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮೂಲಕ ನನ್ನ ಕುಟುಂಬ, ಸಹ ಆಟಗಾರರು ಮತ್ತು ಭಾರತೀಯರನ್ನು ಪ್ರತಿನಿಧಿಸುವುದು ಗೌರವದ ಸಂಗತಿ. ಆದರೆ ಯಾವುದೇ ವಿಷಾದವಿಲ್ಲದೆ, ಭಾರವಾದ ಹೃದಯದಿಂದ ಭಾರತೀಯ ಡೊಮೆಸ್ಟಿಕ್(ಪ್ರಥಮ ದರ್ಜೆ ಮತ್ತು ಎಲ್ಲಾ ಮಾದರಿ) ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿದ್ದೇನೆ.
ಮುಂದಿನ ಪೀಳಿಗೆಯ ಕ್ರಿಕೆಟಿಗರಿಗಾಗಿ ನನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ತೀರ್ಮಾನಿಸಿದ್ದೇನೆ. ಈ ನಿರ್ಧಾರ ನನ್ನದೇ ಆಗಿದ್ದರೂ, ಈ ನಿರ್ಧಾರದಿಂದ ನನಗೆ ಸಂತೋಷ ನೀಡುವುದಿಲ್ಲ ಎಂದು ತಿಳಿದಿದ್ದರು, ಇದು ಸರಿಯಾದ ಮತ್ತು ಗೌರವಯುತ ನಿರ್ಧಾರವಾಗಿದೆ. ಈ ಎಲ್ಲಾ ಕ್ಷಣಗಳನ್ನು ನನ್ನ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಶ್ರೀಶಾಂತ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿಆಡಿರುವ 74 ಪ್ರಥಮ ದರ್ಜೆ ಪಂದ್ಯಗಳಲ್ಲಿ 213 ವಿಕೆಟ್ಗಳನ್ನು ಪಡೆದಿದ್ದು, 92 ಲಿಸ್ಟ್-ಎ ಪಂದ್ಯಗಳಲ್ಲಿ 124 ವಿಕೆಟ್ ಪಡೆದಿದ್ದಾರೆ. ಅಲ್ಲದೆ 65 ಟಿ20 ಪಂದ್ಯಗಳಿಂದ 54 ವಿಕೆಟ್ ಕಬಳಿಸಿರುವ ಶ್ರೀಶಾಂತ್, 2005ರ ಅಕ್ಟೋಬರ್ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಏಕದಿನ ಕ್ರಿಕೆಟ್ನಲ್ಲಿ 53 ಪಂದ್ಯಗಳಲ್ಲಿ 75 ವಿಕೆಟ್ ಪಡೆದಿರುವ ಕೇರಳದ ಫಾಸ್ಟ್ ಬೌಲರ್, 27 ಟೆಸ್ಟ್ಗಳಿಂದ 87 ವಿಕೆಟ್ ಹಾಗೂ 10 ಅಂತಾರಾಷ್ಟ್ರೀಯ ಟಿ20 ಪಂದ್ಯದಿಂದ 7 ವಿಕೆಟ್ ಪಡೆದಿದ್ದಾರೆ.
ಶ್ರೀಶಾಂತ್ ತಮ್ಮ ಕೊನೆಯ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್ನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. ಅಲ್ಲದೇ ಐಪಿಎಲ್ನಲ್ಲೂ ಆಡಿರುವ ಶ್ರೀಶಾಂತ್, ಕಿಂಗ್ಸ್ ಇಲವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 44 ಐಪಿಎಲ್ ಪಂದ್ಯಗಳನ್ನು ಆಡಿ 40 ವಿಕೆಟ್ ಪಡೆದಿದ್ದರು. ಕೊನೆಯದಾಗಿ 2013ರ ಐಪಿಎಲ್ನಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದರು. ಆದರೆ ಈ ಸೀಸನ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದ ಎಸ್. ಶ್ರೀಶಾಂತ್, ಬಂಧನಕ್ಕೊಳಗಾಗಿದ್ದರು.
ಮರೆಯದ ಶ್ರೀಶಾಂತ್ ಪ್ರದರ್ಶನ:
ಬೌಲಿಂಗ್ ಮಾತ್ರವಲ್ಲದೇ ಶ್ರೀಶಾಂತ್ ತಮ್ಮ ಮೋಜಿನ ವರ್ತನೆಗೆ ಪ್ರಸಿದ್ಧರಾಗಿದ್ದರು. ಟೀಮ್ ಇಂಡಿಯಾದ ಡಿಸ್ಕೋ ಡ್ಯಾನ್ಸರ್ ಎಂದು ಕರೆಯುತ್ತಿದ್ದ ಇವರು, 2006ರಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ನೆಲ್ಗೆ ಸಿಕ್ಸರ್ ಹೊಡೆದಿದ್ದರು. ಆಗ ಅವರನ್ನು ನೆಲ್ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದರು. ಆಗ ಶ್ರೀಶಾಂತ್ ಡ್ಯಾನ್ಸ್ ಮಾಡಿ ಸಿಕ್ಸರ್ ಅನ್ನು ಸೆಲೆಬ್ರೆಟ್ ಮಾಡಿದ್ದರು.
ಅಗ್ರೆಸ್ಸಿವ್ ಸೆಲೆಬ್ರೇಷನ್:
ಡ್ಯಾನ್ಸ್ ಜೊತೆಗೆ ತಮ್ಮ ಅಗ್ರೆಷನ್ನಿಂದಲೂ ಗಮನ ಸೆಳೆದಿದ್ದ ಶ್ರೀಶಾಂತ್, 2007ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ವಿಕೆಟ್ ಪಡೆದ ಬಳಿಕ ಅವರ ಮುಖದ ಮುಂದೆ ಚಪ್ಪಾಳೆ ತಟ್ಟಿದರು. ಆದರೆ ಶ್ರೀಶಾಂತ್ ಅವರ ಈ ವರ್ತನೆಗೆ ಆಸೀಸ್ನಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು.
ಕಪಾಳ ಮೋಕ್ಷ ಮಾಡಿದ್ದ ಹರ್ಭಜನ್
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವಾಗ, ಶ್ರೀಶಾಂತ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಸಿಟ್ಟಿಗೆ ಗುರಿಯಾಗಿದ್ದರು. ಶ್ರೀಶಾಂತ್ ಅವರ ವಾಗ್ದಾಳಿಯಿಂದ ನಿರಾಶೆಗೊಂಡ ಭಜ್ಜಿ, ಕಪಾಳ ಮೋಕ್ಷ ಮಾಡಿದ್ದರು. ಅದಕ್ಕೆ ಆ ಸೀಸನ್ನ ಉಳಿದ ಭಾಗಕ್ಕೆ ಹರ್ಭಜನ್ ಸಿಂಗ್ ಅವರನ್ನು ಪಂದ್ಯಗಳಿಂದ ಬ್ಯಾನ್ ಮಾಡಲಾಯಿತು.