ಬಾಲಿ: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿವಿ ಸಿಂಧು ಅವರು ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-12, 21-18ರಿಂದ ಜರ್ಮನಿಯ ಇವೊನ್ ಲಿ ಅವರ ವಿರುದ್ಧ 37 ನಿಮಿಷಗ ಹೋರಾಟದಲ್ಲಿ ಜಯ ಸಾಧಿಸಿದರು. ಎರಡು ನೇರ ಗೇಮ್ ಗಳಲ್ಲಿ ಜಯ ಸಾಧಿಸಿದ ಸಿಂಧು ಮುಂದಿನ ಹಂತಕ್ಕೆ ಪ್ರವೇಶ ಪಡೆದರು.
ಭರವಸೆಯ ಆಟಗಾರ ಬಿ.ಸಾಯ್ ಪ್ರಣೀತ್ 21-17, 14-21, 21-19ರಿಂದ ಕ್ರಿಸ್ಟೋ ಪೊಪೊವ್ ವಿರುದ್ಧ ಒಂದು ಗಂಟೆ 23 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆಲುವು ಸಾಧಿಸಿ ಮುನ್ನಡೆದರು. ಮೊದಲ ಗೇಮ್ ನಲ್ಲಿ ಗೆಲುವು ದಾಖಲಿಸಿದ ಪ್ರಣೀತ್, ಎರಡನೇ ಗೇಮ್ ನಲ್ಲಿ ಹಿನ್ನಡೆ ಅನುಭವಿಸಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಪ್ರಣೀತ್ ಸೊಗಸಾದ ಪ್ರದರ್ಶನ ನೀಡಿದರು.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಅವರು 14-21, 18-21 ರಿಂದ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ನಿರಾಸೆ ಅನುಭವಿಸಿದರು.
ಸಾತ್ವಿಕ್ ಸಾಯ್ ರಾಜ್ ರೆಡ್ಡಿ, ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಜಯ ಸಾಧಿಸಿದರು.