ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಆದರೆ ದ್ವಿತೀಯ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರರ ಫೀಲ್ಡಿಂಗ್ ಬಗ್ಗೆ ನಾಯಕ ರೋಹಿತ್ ಶರ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಕುರಿತು ಪ್ರಶಸ್ತಿ ಪ್ರಧಾನದ ವೇಳೆ ಮಾತನಾಡಿದ ನಾಯಕ ರೋಹಿತ್ ಶರ್ಮ, ಎರಡನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು. ಪ್ರಮುಖವಾಗಿ ವಿರಾಟ್ ಕೊಹ್ಲಿ, ರಿಷಬ್ ಪಂತ್, ವೆಂಕಟೇಶ್ ಅಯ್ಯರ್ ಹಾಗೂ ಭುವನೇಶ್ವರ್ ಕುಮಾರ್ ಅವರುಗಳ ಪ್ರದರ್ಶನ ಉತ್ತಮವಾಗಿತ್ತು. ಆದರೆ ತಂಡದ ಆಟಗಾರರು ಫೀಲ್ಡಿಂಗ್ ವೇಳೆ ಕೆಲವು ಕ್ಯಾಚ್ಗಳನ್ನು ಪಡೆದಿದ್ದರೆ ಪಂದ್ಯ ವಿಭಿನ್ನವಾಗಿರುತ್ತಿತ್ತು ಎಂದು ರೋಹಿತ್ ಶರ್ಮ ಹೇಳಿದರು.
ವೆಸ್ಟ್ ಇಂಡೀಸ್ ವಿರುದ್ದ ಆಡುವಾಗ ಸ್ವಲ್ಪಮಟ್ಟಿನ ಆತಂಕ ಇದ್ದೇ ಇರುತ್ತದೆ. ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇತ್ತು, ಹೀಗಾಗಿ ನಾವು ಉತ್ತಮ ತಯಾರಿ ಮಾಡಿಕೊಂಡಿದ್ದೆವು. ಒತ್ತಡದ ಸಂದರ್ಭದಲ್ಲಿ ಯಾವ ರೀತಿ ಆಡಬೇಕೆಂಬ ಬಗ್ಗೆಯೂ ಯೋಜನೆಗಳನ್ನು ರೂಪಿಸಿದ್ದೆವು. ಹರ್ಷಲ್ ಪಟೇಲ್ ಉತ್ತಮ ಯಾರ್ಕರ್ಗಳನ್ನು ಮಾಡುತ್ತಿದ್ದರು, ಒತ್ತಡದ ಸಂದರ್ಭದಲ್ಲಿ ಅನುಭವ ಪ್ರಮುಖ ಪಾತ್ರವಹಿಸುತ್ತದೆ ಎಂದ ಅವರು, ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಒತ್ತಡವನ್ನು ನಿಭಾಯಿಸಿದರೆ. ಪಂತ್ ಹಾಗೂ ಅಯ್ಯರ್ ಸಹ ತಂಡದ ಇನ್ನಿಂಗ್ಸ್ಗೆ ಉತ್ತಮ ಅಂತ್ಯ ಒದಗಿಸಿದರು.
ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ನಮ್ಮ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿದರು. ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ ಇಬ್ಬರ ಪ್ರದರ್ಶನ ತಂಡಕ್ಕೆ ನೆರವಾಯಿತು. ಪ್ರತಿಯೊಬ್ಬ ನಾಯಕ ಸಹ ತನ್ನ ಆಟಗಾರರಿಂದ ಈ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಾನೆ. ಆದರೆ ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ಉತ್ತಮವಾಗಿರಲಿಲ್ಲ. ಒಂದೊಮ್ಮೆ ನಾವು ಕ್ಯಾಚ್ಗಳನ್ನು ಕೈಚೆಲ್ಲದೆ ಹಿಡಿದಿದ್ದರೆ, ಪಂದ್ಯ ವಿಭಿನ್ನವಾಗಿರುತ್ತಿತ್ತು ಎಂದರು.
ಕೊಲ್ಕಾತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ 2ನೇ ಪಂದ್ಯದ ವೇಳೆ ಟೀಂ ಇಂಡಿಯಾ ಫೀಲ್ಡಿಂಗ್ ಉತ್ತಮವಾಗಿರಲಿಲ್ಲ. ಚೇಸಿಂಗ್ ವೇಳೆ ವಿಂಡೀಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್ ಹಾಗೂ ರೋವ್ಮನ್ ಪೂವಲ್ ಅವರ ಕ್ಯಾಚ್ಗಳನ್ನು ರವಿ ಬಿಷ್ಣೋಯಿ ಹಾಗೂ ಭುವನೇಶ್ವರ್ ಕುಮಾರ್ ಅವರುಗಳು ಕೈಚೆಲ್ಲಿದ್ದು ರೋಹಿತ್ ಪಡೆಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಆದರೆ ಇನ್ನಿಂಗ್ಸ್ನ ಕೊನೆಯಲ್ಲಿ ಬಲಿಷ್ಠ ಕಮ್ ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದ ಭಾರತ, 8 ರನ್ಗಳ ಗೆಲುವು ಸಾಧಿಸುವ ಜೊತೆಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.