ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಮುಗಿದಿದೆ. ಈಗ ಮುಂದಿನ ಸರಣಿ ಬಗ್ಗೆ ಚರ್ಚೆ ಶುರುವಾಗಿದೆ. ಟೀಮ್ ಇಂಡಿಯಾ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದ್ದರಿಂದ ಸರಣಿ ಸೋಲಿನ ಅವಮಾನದಿಂದ ಪಾರಾಗಿದೆ. ಬೆಂಗಳೂರು ಪಂದ್ಯಕ್ಕೆ ಮಳೆ ಅಡ್ಡಿ ಬಾರದೇ ಇದ್ದಿದ್ದರೆ ಫಲಿತಾಂಶ ಸರಣಿಯಲ್ಲಿ ಯಾರು ಮೇಲು, ಯಾರು ಕೀಳು ಅನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು.
ಇಡೀ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಸ್ಥಿರವಾಗಿ ಮಿಂಚಿದ್ದು ಇಶನ್ ಕಿಶನ್, ಹಾರ್ದಿಕ್ ಪಾಂಡ್ಯಾ,ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್ ಮಾತ್ರ. ಹರ್ಷಲ್ ಪಟೇಲ್, ಆವೇಶ್ ಖಾನ್ ಒಂದೊಂದು ಪಂದ್ಯದಲ್ಲಿ ಮಿಂಚಿದ್ದರು. ಉಳಿದವರ ಸಾಧನೆ ಅಷ್ಟಕಷ್ಟೇ.
ಈ ಮಧ್ಯೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಬ್ಯಾಟಿಂಗ್ ಫಾರ್ಮ್ ಬಗ್ಗೆ ಟೀಕೆಗಳು ಎದುರಾಗಿದೆ. ರಿಷಬ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. 4 ಇನ್ನಿಂಗ್ಸ್ಗಳಿಂದ ಪಂತ್ ಕೇವಲ 58 ರನ್ ಸಿಡಿಸಲು ಮಾತ್ರ ಶಕ್ತರಾಗಿದ್ದರು. ವಿಶ್ವಕಪ್ಗೆ ರಿಷಬ್ ಸ್ಪೆಷಲಿಸ್ಟ್ ಕೀಪರ್ ಕೋಟಾದಲ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಕೆ.ಎಲ್. ರಾಹುಲ್ & ದಿನೇಶ್ ಕಾರ್ತಿಕ್ ಕೂಡ ಕೀಪಿಂಗ್ ಆಯ್ಕೆಗಳಾಗಿರುವುದರಿಂದ ಪಂತ್ ಬದಲು ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗೆ ಸ್ಥಾನ ನೀಡಲು ಒತ್ತಡ ಹೆಚ್ಚುತ್ತಿದೆ.
![Rishab Pant: T20ಯಲ್ಲಿ ಪಂತ್ ವೈಫಲ್ಯ, ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಕಂಟಕ? 5 rishab pant team india sports karnataka](http://sportskarnataka.com/wp-content/uploads/2022/06/rishab-pant5.jpg)