ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಏಕದಿನ ಸರಣಿಯಲ್ಲಂತೂ ಕ್ಲೀನ್ ಸ್ವೀಪ್ ಮಾಡಿಸಿಕೊಂಡು ಅವಮಾನ ಅನುಭವಿಸಿದೆ. ಟೀಮ್ ಇಂಡಿಯಾದ ಈ ಸತತ ವೈಫಲ್ಯಗಳಿಗೆ ಹಲವು ಕಾರಣಗಳಿವೆ. ಪ್ರಮುಖ ಆಟಗಾರರ ಅಲಭ್ಯತೆ, ಸೂಕ್ತ ನಾಯಕನ ಕೊರತೆ ಮತ್ತು ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲಿನ ವೈಫಲ್ಯ ಟೀಮ್ ಇಂಡಿಯಾವನ್ನು ಕಂಗೆಡಿಸಿದೆ.
ಸರಣಿಯ ಉದ್ದಕ್ಕೂ ಟೀಮ್ ಇಂಡಿಯಾ ಉತ್ತಮ ಓಪನಿಂಗ್ ಪಾರ್ಟನರ್ ಶಿಪ್ ಪಡೆಯಲಿಲ್ಲ. ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಬೇಗನೆ ನಿರ್ಗಮಿಸಿದರು. 2ನೇ ಪಂದ್ಯದಲ್ಲಿ ಶಿಖರ್ ಧವನ್ ಆರಂಭದಲ್ಲೇ ಮುಗ್ಗರಿಸಿದರು. ವಿರಾಟ್ ಕೊಹ್ಲಿ ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಉತ್ತಮ ಆಟ ಆಡಿದರೂ ಅದರಿಂದ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಮಧ್ಯಮ ಕ್ರಮಾಂಕ ಸರಣಿಯುದ್ದಕ್ಕೂ ವೈಫಲ್ಯ ಅನುಭವಿಸಿತು. ಶ್ರೇಯಸ್ ಅಯ್ಯರ್ ತಂಡಕ್ಕೆ ಅನಿವಾರ್ಯ ಎಂದಾಗ ಕೈ ಕೊಟ್ಟರು. ರಿಷಬ್ ಪಂತ್ ಎರಡನೇ ಪಂದ್ಯದಲ್ಲಿ ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಎಡವಿದರು. ಮೊದಲೆರಡು ಪಂದ್ಯ ಆಡಿದ್ದ ವೆಂಕಟೇಶ್ ಅಯ್ಯರ್ ಇಂಪ್ಯಾಕ್ಟ್ ಮಾಡಲಿಲ್ಲ. ಕೊನೆಯ ಪಂದ್ಯ ಆಡಿದ್ದ ಸೂರ್ಯ ಕುಮಾರ್ ಯಾದವ್ ಉತ್ತಮ ಆಟ ಆಡುವ ಲಕ್ಷಣ ತೋರಿದರೂ ಅನಿವಾರ್ಯ ಅಂದಾಗ ಕೈ ಕೊಟ್ಟರು.
ಇನ್ನು ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ಟೂರ್ನಿಯ ಮೂರೂ ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿತು. ಜಸ್ ಪ್ರಿತ್ ಬುಮ್ರಾ ಒಬ್ಬರೇ ಮೂರೂ ಪಂದ್ಯಗಳಲ್ಲಿ ಮಿಂಚಿದರು. ಭುವನೇಶ್ವರ್ ಕುಮಾರ್, ಶಾರ್ದೂಲ್ ಥಾಕೂರ್, ಅಶ್ವಿನ್ ಮತ್ತು ಚಹಲ್ ತಂಡಕ್ಕೆ ಉಪಯೋಗವಾಗಿಲಿಲ್ಲ. ಕೊನೆಯ ಪಂದ್ಯದಲ್ಲಿ ದೀಪಕ್ ಚಹರ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅದು ತಂಡವನ್ನು ಗೆಲ್ಲಿಲಸಲಿಲ್ಲ.
ಟೀಮ್ ಇಂಡಿಯಾಕ್ಕೆ ಅನುಭವಿ ನಾಯಕನ ಕೊರತೆ ಕಾಡಿತ್ತು. ತಂಡದಲ್ಲಿರುವ ಆಟಗಾರರನ್ನು ಬಳಸಿಕೊಳ್ಳುವ ಚಾಕಚಕ್ಯತೆ ರಾಹುಲ್ ಬಳಿ ಕಾಣಲಿಲ್ಲ. ಅಷ್ಟೇ ಅಲ್ಲ ಬೇಕಾದ ಸಮಯದಲ್ಲ ಎಡವಿದ್ದು ತಂಡಕ್ಕೆ ದಕ್ಷಿಣ ಆಫ್ರಿಕಾದಲ್ಲಿ ದುಬಾರಿ ಆಯಿತು. ಒಟ್ಟಿನಲ್ಲಿ ಟೀಮ್ ಇಂಡಿಯಾದ ವೈಫಲ್ಯ ವೈಟ್ ವಾಶ್ ಅವಮಾನ ಆಗುವಂತೆ ಮಾಡಿತು.