ತಪ್ಪುಗಳಿಂದ ಪಾಠ ಕಲಿತಿರುವ ಆರ್ಸಿಬಿ ತವರಿನಲ್ಲಿ ಇಂದು ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಖನೌ ವಿರುದ್ಧ ಬ್ಯಾಟರ್ಗಳಿಂದ ಹೆಚ್ಚಿನ್ ರನ್ ಹಾಗೂ ಡೆತ್ ಓವರ್ನಲ್ಲಿ ಶಿಸ್ತುಬದ್ಧ ಬೌಲಿಂಗ್ ನಿರೀಕ್ಷಿಸುತ್ತಿದೆ.
ಮೊನ್ನೆ ಕೋಲ್ಕತ್ತಾ ವಿರುದ್ಧ ಈಡನ್ ಅಂಗಳದಲ್ಲಿ 81 ರನ್ಗಳ ಸೋಲು ಅನುಭವಿಸಿತ್ತು. ಇದೀಗ ಚಿನ್ನಸ್ವಾಮಿ ಮೈದಾನದಲ್ಲಿ ಗೆಲುವಿನ ಲಯಕ್ಕೆ ಮರಳಲು ಹೋರಾಡಲಿದೆ.ಹಲವಾರು ವರ್ಷಗಳಿಂದ ಆರ್ಸಿಬಿ ತಂಡಕ್ಕೆ ಡೆತ್ ಓವರ್ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಮೊನ್ನೆ ಕೋಲ್ಕತ್ತಾ ವಿರುದ್ಧ ಒಂದು ಹಂತದಲ್ಲಿ 12 ಓವರ್ವರೆಗೂ ಸಂಪೂರ್ಣ ಹಿಡಿತ ಸಾಧಿಸಿತ್ತು. ನಂತರ ಗೇಮ್ ಪ್ಲ್ಯಾನ್ ಕೈಕೊಟ್ಟಿದ್ದರಿಂದ ಕೋಲ್ಕತ್ತಾ 204 ರನ್ ಗಳಿಸಿತು. ಮುಂಬೈ ವಿರುದ್ಧ ಕೊನೆಯ 5 ಓವರ್ಗಳಲ್ಲಿ ಆರ್ಸಿಬಿ ಪ್ರತಿ ಓವರ್ಗೆ 13 ರನ್ ಚಚ್ಚಿಸಿಕೊಂಡಿತ್ತು. ಡೆತ್ ಓವರ್ ಸ್ಪೆಶಲಿಸ್ಟ್ ಹರ್ಷಲ್ ಪಟೇಲ್ ಮತ್ತು ಮೊಹ್ಮದ್ ಸಿರಾಜ್ ಹೊಸ ಚೆಂಡಿನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು. ಆದರೆ ಕೊನೆಯಲ್ಲಿ ದುಬಾರಿ ಬೌಲರ್ಗಳಾದರು.
ಸ್ಪಿನ್ನರ್ ವನಿಂದು ಹಸರಂಗ ರಾಷ್ಟ್ರೀಯ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೇಗಿ ಜೋಶ್ ಹೇಜಲ್ವುಡ್ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದಾರೆ.ಈ ವಾರದಲ್ಲಿ ಈ ಇಬ್ಬರು ಬೌಲರ್ಗಳು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೂ ದಕ್ಷಿಣ ಆಫ್ರಿಕಾದ ಮಧ್ಯಮ ವೇಗಿ ವಾಯ್ನೆ ಪಾರ್ನೆಲ್ ಗಾಯಾಳು ರೀಸಿ ಟಾಪ್ಲಿ ಸ್ಥಾನದಲ್ಲಿ ಆಡಲಿದ್ದಾರೆ.
ಆರ್ಸಿಬಿ ತಂಡದ ಆರಂಭಿಕರಾದ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮುಂಬೈ ವಿರುದ್ಧ ಅತ್ಯುತ್ತಮವಾಗಿ ಜವಾಬ್ದಾರಿ ನಿಭಾಯಿಸಿದರು. ಆದರೆ ಕೋಲ್ಕತ್ತಾ ವಿರುದ್ಧ ಸ್ಪಿನ್ ಎದುರು ಶರಣಾದರು.
ಇಂದಿನ ಪಂದ್ಯದಲ್ಲಿ ಲಖನೌ ಸ್ಪಿನ್ನರ್ಗಳೆದುರು ಆರ್ಸಬಿ ಬ್ಯಾಟರ್ಗಳು ಎಚ್ಚರಿಕೆಯಿಂದ ಆಡಬೇಕು.ಮೊನ್ನೆ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಲಖನೌ 5 ವಿಕೆಟ್ ಜಯ ಸಾಸಿತು.
ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೊಯಿ 3 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ. ಸಹ ಸ್ಪಿನ್ನರ್ಸ್ಗಳಾದ ಅಮಿತ್ ಮಿಶ್ರಾ ಮತ್ತು ಕೃಣಾಲ್ ಪಾಂಡ್ಯ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇನ್ನು ವೇಗದ ವಿಭಾಗದಲ್ಲಿ ಜ್ವರದಿಂದ ಬಳಲುತ್ತಿದ್ದ ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ಹಾಗೂ ಗಾಯದ ಸಮಸ್ಯೆಗೆ ಗುರಿಯಾಗಿದ್ದ ತಂಡದ ಮತ್ತೋರ್ವ ವೇಗಿ ಆವೇಶ್ ಖಾನ್ ಇಂದಿನ ಪಂದ್ಯಕ್ಕೆ ಲಭ್ಯಯರಾಗಿದ್ದಾರೆ. ಇವರಿಬ್ಬರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಾಗಿದ್ದಾರೆ.
ಲಖನೌ ತಂಡ ಟೂರ್ನಿಯಲ್ಲಿ 2 ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಕೈಚೆಲ್ಲಿದೆ. ತಂಡದ ಬ್ಯಾಟರ್ಗಳು ಸ್ಥಿರವಾಗಿದ್ದಾರೆ. ಕೈಲೆ ಮೇಯರ್ಸ್ ಅದ್ಭುತ ಪ್ರದರ್ಶನ ನೀಡಿದರೆ ನಾಯಕ ಕೆ.ಎಲ್.ರಾಹುಲ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.