ಟೀಮ್ ಇಂಡಿಯಾ (Team India) ಮಿಷನ್ ವರ್ಲ್ಡ್ಕಪ್ಗೆ ಸಿದ್ಧವಾಗುತ್ತಿದೆ. ಆದರೆ ತಂಡದ ಆಟಗಾರರಿಗೆ ಅದರ ಬಗ್ಗೆ ಹೆಚ್ಚು ಯೋಚನೆಯೇ ಇಲ್ಲ. ಯಾವುದು ಮಾಡಬೇಕು? ಯಾವುದು ಮಾಡಬಾರದು ಅನ್ನುವ ಪರಿಜ್ಞಾನವೂ ಇಲ್ಲ. ಹೀಗಾಗಿ ಮತ್ತೆ ಮತ್ತೆ ಗಾಯದ ಸಮಸ್ಯೆ ಎದುರಾಗುತ್ತಿದೆ. ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಸ್ವಯಂಕೃತ ಅಪರಾಧದಿಂದಲೇ ದೊಡ್ಡ ಗಾಯ ಮಾಡಿಕೊಂಡಿದ್ದು, ಬಿಸಿಸಿಐ (BCCI) ಕೆಂಡವಾಗಿದೆ (Furious).
ಟೈಮ್ಸ್ ಇಂಡಿಯಾ ವರದಿ ಪ್ರಕಾರ ಜಡೇಜಾ ಗಾಯದ ಮೇಲೆ ಮತ್ತೊಂದು ಗಾಯ ಮಾಡಿಕೊಂಡಿದ್ದಾರೆ. ಜಡ್ಡು ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದ ವೇಳೆ ಮೊಣಕಾಲು ಗಾಯದ ಸಮಸ್ಯೆ (Injury) ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದರು.ಆದಾದ ಬಳಿಕ ಬಿಸಿಸಿಐ ನಿಗಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆಪರೇಷನ್ ಬಳಿಕ ಬೇಗ ಗುಣಮುಖರಾಗಲು ಜಡೇಜಾರನ್ನು ದುಬೈನಲ್ಲಿ ಕೆಲವು ಚಟುವಟಿಕೆಗಳನ್ನು ಮಾಡುವಂತೆ ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿತ್ತು. ನೀರು ಆಧಾರಿತ ತರಬೇತಿ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಲಾಗಿತ್ತು.
ಜಡ್ಡು ಬಿಸಿಸಿಐ ವೈದ್ಯರು ಹೇಳಿದ್ದ ಚಟುವಟಿಕೆ ಹೊರತಾಗಿ ಸ್ಕೀ ಬೋರ್ಡ್ ಮಾಡಲು ಹೋಗಿದ್ದಾರೆ. ಈ ವೇಳೆ ಜಾರಿ ಬಿದ್ದು ಗಾಯವನ್ನು ಮತ್ತಷ್ಟು ದೊಡ್ಡದು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಟಿ20 ವಿಶ್ವಕಪ್ನಿಂದಲೂ (T20 World Cup) ಔಟ್ ಆಗಿದ್ದಾರೆ. ಜಡೇಜಾ ಈ ವರ್ತನೆ ಬಗ್ಗೆ ಬಿಸಿಸಿಐ ಕೆಂಡವಾಗಿದೆ. ಜವಾಬ್ದಾರಿ ಮತ್ತು ಟಿ20 ವಿಶ್ವಕಪ್ ಮರೆತು ಬೇಡದ ಕೆಲಸ ಮಾಡಿದ್ದಕ್ಕೆ ಜಡೇಜಾ ವಿರುದ್ಧ ಸಿಟ್ಟಾಗಿದೆ. ಟೀಮ್ ಇಂಡಿಯಾದ ಅಭಿಮಾನಿಗಳು ಜಡೇಜಾ ನಿರ್ಲಕ್ಷ್ಯವನ್ನು ಟೀಕಿಸುತ್ತಿದ್ದಾರೆ.