ಪ್ರಸಕ್ತ ರಣಜಿ ಋತುವಿನಲ್ಲಿ ತನ್ನ ಮೊದಲ ಗೆಲುವು ಸಾಧಿಸಿ, ಜಯದ ಉತ್ಸಾಹದಲ್ಲಿರುವ ಕರ್ನಾಟಕ ಹಾಗೂ ಪುದುಚೇರಿ ತಂಡಗಳ ನಡುವಿನ ಪಂದ್ಯ ಇಂದಿನಿಂದ ಆರಂಭವಾಗಲಿದೆ.
ಎಲೈಟ್ ʼಸಿʼ ಗುಂಪಿನಲ್ಲಿ ಎರಡು ಪಂದ್ಯಗಳನ್ನು ಆಡಿರುವ ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಡ್ರಾ ಸಾಧಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮನೀಷ್ ಪಾಂಡೆ ಬಳಗ, 117 ರನ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆ ಮೂಲಕ 9 ಅಂಕ ಪಡೆದಿರುವ ಕರ್ನಾಟಕ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನದಲ್ಲಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಬಲಿಷ್ಠವಾಗಿರುವ ಕರ್ನಾಟಕ, ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಕೆ.ವಿ. ಸಿದ್ಧಾರ್ಥ್ ಹಾಗೂ ನಾಯಕ ಮನೀಷ್ ಪಾಂಡೆ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಎರಡನೇ ಪಂದ್ಯದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಕರುಣ್ ನಾಯರ್(175 & 71*) ರನ್ಗಳಿಸಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದರೆ. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ್ದ ಪ್ರಸಿದ್ಧ ಕೃಷ್ಣ ಮೊದಲ ಇನ್ನಿಂಗ್ಸ್ನಲ್ಲಿ 6 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆಡಿರುವ ಎರಡು ಪಂದ್ಯವನ್ನು ಸೋತು, ಮತ್ತೊಂದರಲ್ಲಿ ಡ್ರಾ ಸಾಧಿಸಿರುವ ಪುದುಚೇರಿ, ಪ್ರಸಕ್ತ ಸೀಸನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಬಲಿಷ್ಠವಾಗಿದ್ದರೂ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಪುದುಚೇರಿ ವಿಫಲವಾಗಿದೆ. ಹೀಗಾಗಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಪುದುಚೇರಿ ಎದುರು ನೋಡುತ್ತಿದೆ.
ಉಭಯ ತಂಡಗಳ ನಡುವಿನ ಪಂದ್ಯ ಚೆನ್ನೈನ ಶ್ರೀ ಶಿವಸುಬ್ರಹ್ಮಣ್ಯ ನಾದರ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮಾ.3ರಿಂದ 6ರವರೆಗೆ ನಡೆಯಲಿದೆ.