ನಾಯಕ ಮನೀಷ್ ಪಾಂಡೆ(107*) ಹಾಗೂ ದೇವದತ್ ಪಡಿಕ್ಕಲ್(178) ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್ ಗಳ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದ ಪುದುಚೇರಿ ವಿರುದ್ಧದ ರಣಜಿ ಟೋಫಿ ಲೀಗ್ ಪಂದ್ಯದಲ್ಲಿ ಕರ್ನಾಟಕ ಸಂಪೂರ್ಣ ಹಿಡಿತ ಸಾಧಿಸಿದೆ.
ಚೆನ್ನೈನ ಶಿವಸುಬ್ರಹ್ಮಣ್ಯ ನದಾರ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಕರ್ನಾಟಕದ ಆಟಗಾರರು ಪ್ರಾಬಲ್ಯ ಮೆರೆದರು. ಬ್ಯಾಟ್ಸ್ಮನ್ ಗಳ ಶ್ರೇಷ್ಠ ಪ್ರದರ್ಶನದಿಂದ ಮೊದಲ ಇನ್ನಿಂಗ್ ನಲ್ಲಿ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 453 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪುದುಚೇರಿ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 52 ರನ್ ಕಲೆಹಾಕಿದೆ. ಆರಂಭಿಕ ಆಟಗಾರ
ಶ್ಯಾಮ್ ಕನ್ಗೈಯನ್(24*) ಹಾಗೂ ಚಿರಂಜೀವಿ(12*) ಕಣದಲ್ಲಿದ್ದಾರೆ.
*ಮನೀಷ್ ಭರ್ಜರಿ ಬ್ಯಾಟಿಂಗ್*
ಇದಕ್ಕೂ ಮುನ್ನ ಮೊದಲ ದಿನದ ಮೊತ್ತ 3 ವಿಕೆಟ್ ನಷ್ಟಕ್ಕೆ 293 ರನ್ ಗಳಿಂದ ದಿನದಾಟ ಆರಂಭಿಸಿದ ಕರ್ನಾಟಕ, ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿತು. ನಿನ್ನೆ ರಣಜಿ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದ ದೇವದತ್ ಪಡಿಕ್ಕಲ್(178) ತಮ್ಮ ಖಾತೆಗೆ ಕೇವಲ 17 ರನ್ ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದರು. ಆದರೆ ವೈಯಕ್ತಿಕ 21 ರನ್ ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಮನೀಷ್ ಪಾಂಡೆ, ತಮ್ಮ ಶ್ರೇಷ್ಠ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಪುದುಚೇರಿ ಬೌಲಿಂಗ್ ದಾಳಿಗೆ ತಿರುಗೇಟು ನೀಡಿದ ಮನೀಷ್ ಪಾಂಡೆ, ಪ್ರಸಕ್ತ ಸೀಸನ್ನಿನ ತಮ್ಮ ಎರಡನೇ ಶತಕ ಬಾರಿಸಿ ಅಬ್ಬರಿಸಿದರು.
ಆದರೆ ಪಡಿಕ್ಕಲ್ ಔಟಾದ ನಂತರ ಕಣಕ್ಕಿಳಿದ ಕರ್ನಾಟಕದ ಆಟಗಾರರು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಬಿ.ಆರ್. ಶರತ್(6), ಶ್ರೇಯಸ್ ಗೋಪಾಲ್(10) ಬಹುಬೇಗನೆ ನಿರ್ಗಮಿಸಿದರೆ. ತಂಡದ ಪ್ರಮುಖ ಆಲ್ರೌಂಡರ್ ಕೆ.ಗೌತಮ್(0) ಮೊದಲ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಬಂದ ವಿದ್ಯಾಧರ್ ಪಾಟೀಲ್(25) ಹಾಗೂ ಪ್ರಸಿದ್ಧ ಕೃಷ್ಣ(12*) ಸ್ವಲ್ಪಮಟ್ಟಿನ ಪ್ರತಿರೋಧ ತೋರುವ ಮೂಲಕ ನಾಯಕನಿಗೆ ಸಾಥ್ ನೀಡಿದರು. ಅಂತಿಮವಾಗಿ ಕರ್ನಾಟಕ 133.2 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 453 ರನ್ ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪುದುಚೇರಿ ಪರ ಅಶಿತ್ ರಾಜೀವ್ 4 ವಿಕೆಟ್ ಪಡೆದು ಮಿಂಚಿದರೆ, ಸುಬೋತ್ ಬಾಟಿ ಹಾಗೂ ಸಾಗರ್ ಉದೇಶಿ ತಲಾ 2 ವಿಕೆಟ್ ಕಬಳಿಸಿದರು.
*ಪುದುಚೇರಿಗೆ ಓಪನಿಂಗ್ ಶಾಕ್*
ಕರ್ನಾಟಕದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಪುದುಚೇರಿಗೆ ಕರ್ನಾಟಕದ ಬೌಲರ್ ಗಳು ಆರಂಭಿಕ ಶಾಕ್ ನೀಡಿದರು. ತಂಡದ ಪರ ಆರಂಭಿಕನಾಗಿ ಬಂದ ಅರವಿಂದ್ ಕೋತಂಡಪಾಣಿ(13) ರನ್ ಗಳಿಸಿ ನಿರ್ಗಮಿಸಿದರೆ. ಮೊದಲ ಕ್ರಮಾಂಕದಲ್ಲಿ ಬಂದ ಸಾಗರ್ ಉದೇಶಿ(2) ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ಶ್ಯಾಮ್ ಕನ್ಗೈಯನ್(24*) ಹಾಗೂ ಚಿರಂಜೀವಿ(12*) ತಂಡಕ್ಕೆ ಚೇತರಿಕೆ ನೀಡಿದರು. ಕರ್ನಾಟಕದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಪ್ರಸಿದ್ಧ ಕೃಷ್ಣ ಹಾಗೂ ವಿದ್ಯಾಧರ್ ಪಾಟೀಲ್ ತಲಾ 1 ವಿಕೆಟ್ ಪಡೆದಿದ್ದಾರೆ. ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿರುವ ಪುದುಚೇರಿ 401 ರನ್ ಗಳ ಹಿನ್ನಡೆ ಹೊಂದಿದೆ.