ಶ್ರೇಯಸ್ ಗೋಪಾಲ್(5/82) ಹಾಗೂ ಪ್ರಸಿದ್ಧ ಕೃಷ್ಣ(3/38) ಅದ್ಭುತ ಬೌಲಿಂಗ್ ನೆರವಿನಿಂದ ಕರ್ನಾಟಕ, 2022ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 20 ರನ್ಗಳಿಂದ ಜಯಗಳಿಸಿದ ಕರ್ನಾಟಕ, ಆ ಮೂಲಕ ಎಲೈಟ್ ʼಸಿʼ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಚೆನ್ನೈನ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನದಾಟದಲ್ಲಿ ಕರ್ನಾಟಕದ ಬೌಲರ್ಗಳ ಪಾರುಪತ್ಯ ಮುಂದುವರೆಯಿತು. ಪುದುಚೇರಿ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲಿ 192 ರನ್ಗಳಿಗೆ ಆಲೌಟ್ ಮಾಡಿದ ಕರ್ನಾಟಕ ಗೆಲುವಿನ ನಗೆಬೀರಿತು. ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದು ಮಿಂಚಿದರೆ, ಪ್ರಸಿದ್ಧ ಕೃಷ್ಣ 3 ವಿಕೆಟ್ ಪಡೆದರು. ಪುದುಚೇರಿ ಪರ ಪವನ್ ದೇಶಪಾಂಡೆ(54*) ಏಕಾಂಗಿ ಹೋರಾಟ ನಡೆಸಿದರು.
ಮೂರನೇ ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 64 ರನ್ಗಳಿಸಿದ್ದ ಪುದುಚೇರಿ, 150 ರನ್ಗಳ ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿತು. ಆದರೆ 4ನೇ ದಿನದಾಟದ ಆರಂಭದಲ್ಲೇ ನಾಯಕ ಡಿ. ರೋಹಿತ್(12) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಆದರೆ ನಂತರ ಜೊತೆಯಾದ ಪವನ್ ದೇಶಪಾಂಡೆ ಹಾಗೂ ಚಿರಂಜೀವಿ(28) 6ನೇ ವಿಕೆಟ್ಗೆ 61 ರನ್ಗಳ ಜೊತೆಯಾಟವಾಡಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಶ್ರೇಯಸ್ ಗೋಪಾಲ್, ಚಿರಂಜೀವಿ ಅವರಿಗೆ ಪೆವಿಲಿಯನ್ ದಾರಿ ತೋರಿದರು.
ನಂತರ ಬಂದ ಸಾಗರ್ ತ್ರಿವೇದಿ(11) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ಪವನ್ ದೇಶಪಾಂಡೆ ಹಾಗೂ ಸುಬೋಧ್ ಭಾಟಿ(37) 8ನೇ ವಿಕೆಟ್ಗೆ 42 ರನ್ಗಳ ಜೊತೆಯಾಟವಾಡಿದರು. ಆದರೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಅಶಿತ್(0) ಹಾಗೂ ಸಾಗರ್ ಉದೇಶಿ(0) ಯಾವುದೇ ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ಪುದುಚೇರಿ 192 ರನ್ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು.
ಈ ಗೆಲುವಿನಿಂದ ಕರ್ನಾಟಕ 2022ರ ಎಲೈಟ್ ʼಸಿʼ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಪ್ರಸಕ್ತ ಸಾಲಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 2 ಸೋಲು ಹಾಗೂ 1 ಡ್ರಾನೊಂದಿಗೆ 16 ಅಂಕಗಳಿಸಿದೆ.
=====================
ಪಂದ್ಯದ ಸಾರಾಂಶ
ಕರ್ನಾಟಕ 1ನೇ ಇನ್ನಿಂಗ್ಸ್: 453ಕ್ಕೆ 8 ಡಿಕ್ಲೇರ್
(ಪಡಿಕ್ಕಲ್ 178, ಮನೀಷ್ ಪಾಂಡೆ 107, ಸಿದ್ಧಾರ್ಥ್ 85)
ಪುದುಚೇರಿ 1ನೇ ಇನ್ನಿಂಗ್ಸ್: 241 ಆಲೌಟ್
(ಡಿ. ರೋಹಿತ್ 100*, ಕೆ.ಗೌತಮ್ 5/86)
ಪುದುಚೇರಿ 2ನೇ ಇನ್ನಿಂಗ್ಸ್: 192 ಆಲೌಟ್
(ಪವನ್ ದೇಶಪಾಂಡೆ 54*, ಎಸ್. ಗೋಪಾಲ್ 5/82, ಪ್ರಸಿದ್ಧ ಕೃಷ್ಣ 3/38)