ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೇವಲ ಭಾರತದ ಕ್ರಿಕೆಟ್ ಸಂಸ್ಥೆಗಳಿಗೆ ಮಾತ್ರ ಬಾಸ್ ಅಲ್ಲ. ಅನಧಿಕೃತವಾಗಿ ವಿಶ್ವ ಕ್ರಿಕೆಟ್ ಅನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಬಿಸಿಸಿಐ ಅನುಮೋದನೆ ಇಲ್ಲದೇ ಇದ್ದರೆ ಐಸಿಸಿಯಲ್ಲಿ ಒಂದು ಹುಲುಕಡ್ಡಿ ಕೂಡ ಅಲುಗಾಡುವುದಿಲ್ಲ ಅನ್ನುವ ಮಾತಿದೆ. ಆದರೆ ಅದೆಷ್ಟು ಸತ್ಯ, ಸುಳ್ಳು ಅನ್ನುವ ಬಗ್ಗೆ ಮಾಹಿತಿ ಇಲ್ಲ. ಈ ಮಧ್ಯೆ ಪಾಕ್ ಕ್ರಿಕೆಟ್ ಬೋರ್ಡ್ ಮಾಜಿ ಅಧ್ಯಕ್ಷ ಎಹಸಾನ್ ಮಣಿ ಬಿಸಿಸಿಐ ಬಿಜೆಪಿ ಕೈಗೊಂಬೆ ಎಂದು ಆರೋಪ ಮಾಡಿದ್ದಾರೆ.
ಭಾರತದಲ್ಲಿ ಬಿಜೆಪಿ ಕೇಂದ್ರದದಲ್ಲಿ ಸರ್ಕಾರ ನಡೆಸುತ್ತಿದೆ. ಬಿಜೆಪಿ ಮಾತೆನ್ನೇ ಬಿಸಿಸಿಐ ಕೇಳುತ್ತದೆ. ಅದರ ಪದಾಧಿಕಾರಿಗಳು ಕೂಡ ಬಿಜೆಪಿಯವರೇ. ಹೀಗಾಗಿ ಬಿಸಿಸಿಐ ಜೊತೆ ಸಂವಹನ ನಡೆಸುವುದು ಕಷ್ಟದ ಮಾತು ಎಂದು ಮಣಿ ಆರೋಪಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಇದ್ದರೂ. ಬಿಸಿಸಿಐ ಕಾರ್ಯದರ್ಶಿ ಯಾರು ಗೊತ್ತಾ? ಜೈ ಶಾ, ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಮಗ. ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಬಿಜೆಪಿ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ. ನಿಜವಾದ ನಿಯಂತ್ರಣವು ಆ ಜನರ ಮೇಲಿದೆ. ಅವರು ಬಿಸಿಸಿಐ ಅನ್ನು ನಡೆಸುತ್ತಿದ್ದಾರೆ. ಅದಕ್ಕಾಗಿಯೇ ಪಿಸಿಬಿ ಭಾರತೀಯ ಮಂಡಳಿಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಸುಧಾರಿಸದಿರಲು ಇದೇ ಕಾರಣ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿ 2012-13ರಲ್ಲಿ ನಡೆದಿತ್ತು. ಅಂದಿನಿಂದ, ಎರಡೂ ದೇಶಗಳು ಐಸಿಸಿ ಈವೆಂಟ್ಗಳು ಮತ್ತು ಏಷ್ಯಾ ಕಪ್ನಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಪಿಸಿಬಿ ದ್ವಿಪಕ್ಷೀಯ ಸರಣಿ ಬಗ್ಗೆ ಉತ್ಸಾಹ ತೋರಿದರೂ ಭಾರತ, ಪಾಕ್ ಗಡಿಯಲ್ಲಿ ಮಾಡುತ್ತಿರುವ ಕುತಂತ್ರ ನಿಲ್ಲಿಸದ ಹೊರತು ಸಣಿ ಆಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಭಾರತ ಸರ್ಕಾರದ ಈ ನಿಲುವನ್ನು ಬಿಸಿಸಿಐ ಚಾಚು ತಪ್ಪದೆ ಪಾಲಿಸುತ್ತಿದೆ.