ಪ್ರವಾಸಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ ರಿಷಬ್ ಪಂತ್ ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಸಹ ರಿಷಬ್ ಪಂತ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಕೆಟ್ಕೀಪರ್ ರಿಷಬ್ ಪಂತ್ ಇನ್ನೂ ಯುವಕನಾಗಿದ್ದು, ಅವರನ್ನು ಈಗಲೇ ಟೀಂ ಇಂಡಿಯಾದ ನಾಯಕನನ್ನಾಗಿ ಮಾಡುವುದನ್ನು ನಾನು ತಡೆಯುತ್ತಿದ್ದೆ. ರಿಷಬ್ ಪಂತ್ ಅವರು ಇನ್ನು ಹೆಚ್ಚಿನ ಪ್ರಬುದ್ಧತೆಯನ್ನು ಪಡೆಯಬೇಕಿದೆ. ಹೀಗಾಗಿ ರಿಷಬ್ ಪಂತ್ ಅವರಿಗೆ ತಂಡದ ನಾಯಕತ್ವ ನೀಡುವುದನ್ನ ನಾನು ತಡೆಯುತ್ತಿದ್ದೆ ಹೊರತು, ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ರಿಷಬ್ ಪಂತ್ ಅವರಂತಹ ಆಟಗಾರನಿಗೆ ನಂತರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ.
ಟೀಂ ಇಂಡಿಯಾದ ನಾಯಕನಾಗುವುದು ದೊಡ್ಡ ವಿಷಯ. ರಿಷಬ್ ಪಂತ್ ಇನ್ನು ಯುವಕನಾಗಿದ್ದು, ಆತ ಈಗಲೇ ಎಲ್ಲೂ ಹೋಗುವುದಿಲ್ಲ. ಅವರು ಹೆಚ್ಚು ಸಮಯ ಆಡಿದರೆ, ಅವರು ಹೆಚ್ಚು ಪ್ರಬುದ್ಧತೆಯನ್ನು ಗಳಿಸುತ್ತಾರೆ ಎಂದು ರಿಷಬ್ ಪಂತ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ಮದನ್ ಲಾಲ್ ಖಾಸಗಿ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ರಿಷಬ್ ಪಂತ್ ಅವರು ತಮ್ಮ ಆಟವನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆಗ ಅವರಿಗೆ ತಂಡದ ನಾಯಕತ್ವ ನೀಡಿದ್ದೇ ಆದಲ್ಲಿ, ಆತ ಉತ್ತಮ ಕ್ಯಾಪ್ಟನ್ ಆಗುತ್ತಾನೆ. ಎಲ್ಲ ಪರಿಸ್ಥಿತಿಯನ್ನ ಪ್ರಬುದ್ಧತೆಯಿಂದ ಎದುರಿಸುತ್ತಾನೆ. ರಿಷಬ್ ಪಂತ್ ಒಬ್ಬ ಉತ್ತಮ ಆಟಗಾರನಾಗಿದ್ದು, ಇನ್ನಷ್ಟು ಪ್ರಬುದ್ಧತೆಯಿಂದ ಆಡಿದ್ದೇ ಆದಲ್ಲಿ ಅದು ನಿಜಕ್ಕೂ ಅದ್ಭುತ ಎನಿಸಲಿದೆ ಎಂದಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆ.ಎಲ್.ರಾಹುಲ್ ಅವರನ್ನು ಟೀಂ ಇಂಡಿಯಾದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದ ಕೆ.ಎಲ್. ರಾಹುಲ್ ಹೊರಗುಳಿದ ನಂತರ ರಿಷಬ್ ಪಂತ್ ಅವರಿಗೆ T20I ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತರೂ, ನಂತರದಲ್ಲಿ ಭಾರತ ಬಲಿಷ್ಠ ಕಮ್ಬ್ಯಾಕ್ ಮಾಡಿತ್ತು. ಆದರೆ ಸರಣಿಯ 5ನೇ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಸರಣಿ 2-2ರಿಂದ ಸಮಬಲಗೊಂಡಿತು. ಕೇವಲ ನಾಯಕತ್ವದಲ್ಲಿ ಮಾತ್ರವಲ್ಲದೇ ರಿಷಬ್ ಪಂತ್ ತಮ್ಮ ಬ್ಯಾಟಿಂಗ್ನಲ್ಲೂ ಭಾರೀ ವೈಫಲ್ಯ ಕಂಡಿದ್ದರು. 24 ವರ್ಷದ ಪಂತ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ಹೆಚ್ಚು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು. ಈ ಪ್ರದರ್ಶನದಿಂದಾಗಿ ರಿಷಬ್ ಪಂತ್ ಸಾಕಷ್ಟು ಟೀಕೆಗಳನ್ನು ಎದುರಿಸಿದರು.