ಪ್ರವಾಸಿ ಭಾರತ(Team India) ಹಾಗೂ ಅತಿಥೇಯ ನ್ಯೂಜಿ಼ಲೆಂಡ್(New Zealand) ವಿರುದ್ಧದ ಎರಡನೇ ಏಕದಿನ ಪಂದ್ಯ ನಾಳೆ(November 27) ನಡೆಯಲಿದೆ. ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿರುವ ಭಾರತ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಉಭಯ ತಂಡಗಳ ನಡುವಿನ ದ್ವಿತೀಯ ಪಂದ್ಯಕ್ಕಾಗಿ ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ ಅಂಗಳ ಸಜ್ಜಾಗಿದೆ. ಶಿಖರ್ ಧವನ್ ನೇತೃತ್ವದ ಭಾರತ ತಂಡ ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ 7 ವಿಕೆಟ್ಗಳ ಹೀನಾಯ ಸೋಲು ಕಂಡಿತು. ಬ್ಯಾಟಿಂಗ್ನಲ್ಲಿ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಶಿಖರ್ ಧವನ್ ಅರ್ಧಶತಕಗಳಿಸಿದರೆ. ಸಂಜೂ ಸ್ಯಾಮ್ಸನ್ ಹಾಗೂ ವಾಷಿಂಗ್ಟನ್ ಸುಂದರ್ ಉಪಯುಕ್ತ ರನ್ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲೇಥಮ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಭಾರತದ ಬೌಲರ್ಗಳು ತತ್ತರಿಸಿದರು.
ಭಾರತದ ಪರ ಚೊಚ್ಚಲ ಏಕದಿನ ಪಂದ್ಯವಾಡಿದ ಉಮ್ರಾನ್ ಮಲ್ಲಿಕ್ ಸ್ವಲ್ಪಮಟ್ಟಿನ ಸಕ್ಸಸ್ ಕಂಡರು, ಉಳಿದ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಮೊದಲ ಏಕದಿನ ಪಂದ್ಯವಾಡಿದ ಅರ್ಶದೀಪ್ ಸಿಂಗ್, ಶಾರ್ದೂಲ್ ಥಾಕೂರ್, ವಾಷಿಂಗ್ಟನ್ ಸುಂದರ್ ಹಾಗೂ ಚಹಲ್ ಅವರುಗಳು ವಿಕೆಟ್ ಪಡೆಯುವಲ್ಲಿ ವಿಫಲವಾಗುವ ಜೊತೆಗೆ ದುಬಾರಿ ರನ್ ನೀಡಿದ್ದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ಬೌಲಿಂಗ್ ವೈಫಲ್ಯದಿಂದ ಸೋಲಿನ ಆಘಾತ ಅನುಭವಿಸಿರುವ ಭಾರತ, ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಹೀಗಾಗಿ ಎರಡನೇ ಪಂದ್ಯಕ್ಕೆ ತಂಡದಲ್ಲಿ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಮುಖ್ಯವಾಗಿ ತಂಡದ ಬೌಲಿಂಗ್ ವಿಭಾಗದಲ್ಲಿ ಅರ್ಶದೀಪ್ ಸಿಂಗ್, ಯುಜ್ವೇಂದ್ರ ಚಹಲ್ ಅವರ ಬದಲಿಗೆ ದೀಪಕ್ ಚಹರ್ ಹಾಗೂ ಕುಲ್ದೀಪ್ ಯಾದವ್ ಅವರನ್ನ ಆಡಿಸುವ ಸಾಧ್ಯತೆ ಇದೆ. ಇವರ ಜೊತೆಗೆ ಆಲ್ರೌಂಡರ್ ಸ್ಥಾನದಲ್ಲಿ ಶಾರ್ದೂಲ್ ಥಾಕೂರ್ ಬದಲಿಗೆ ದೀಪಕ್ ಹೂಡ ಅವರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಕೂಡ ಇದೆ.
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಗೆದ್ದುಬೀಗಿರುವ ನ್ಯೂಜಿ಼ಲೆಂಡ್, 2ನೇ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಆಡುವ ಸಾಧ್ಯತೆ ಇದೆ. ಆದರೆ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಫಿನ್ ಅಲೆನ್, ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕಾಗಿದೆ. ಉಳಿದಂತೆ ಕಿವೀಸ್ ಪಡೆ ಅತ್ಯಂತ ಬಲಿಷ್ಠವಾಗಿದ್ದು, ಎರಡನೇ ಪಂದ್ಯವನ್ನು ಗೆದ್ದು ಸರಣಿ ತಮ್ಮದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.