ಐಪಿಎಲ್ ನಲ್ಲಿ ಯಾವುದೇ ತಂಡದ ಕೋಚ್ ಆಗಲ್ಲ.. ಮುಂದಿನ ನಡೆ ಮಾಧ್ಯಮದ ಕಡೆ – ರವಿಶಾಸ್ತ್ರಿ
ಟೀಮ್ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಅವರು ಈಗ ವಿಶ್ರಾಂತಿಯಲ್ಲಿದ್ದಾರೆ. ಎರಡು ಅವಧಿಗಳ ಕಾಲ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದ ರವಿಶಾಸ್ತ್ರಿ ಹಲವು ಟೀಕೆಗಳನ್ನು ಕೇಳಬೇಕಾಗಿತ್ತು. ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಶಾಸ್ತ್ರಿ ಈಗ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನು ನೀಡುತ್ತಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಮ್ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್ ವಿರುದ್ದವೂ ರವಿಶಾಸ್ತ್ರಿ ಬಹಿರಂಗವಾಗಿಯೇ ತಿರುಗಿ ಬಿದ್ದಿದ್ದಾರೆ.
ಏತನ್ಮದ್ಯೆ, ರವಿಶಾಸ್ತ್ರಿ ಅವರು ಐಪಿಎಲ್ ನಲ್ಲಿ ಅಹಮದಾಬಾದ್ ತಂಡದ ಕೋಚ್ ಆಗುತ್ತಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಈ ಎಲ್ಲಾ ಗಾಸಿಪ್ ಸುದ್ದಿಗಳಿಗೆ ರವಿಶಾಸ್ತ್ರಿಯವರೇ ತೆರೆ ಎಳೆದಿದ್ದಾರೆ.
ನಾನು ಐಪಿಎಲ್ ನಲ್ಲಿ ಯಾವುದೇ ತಂಡಕ್ಕೂ ಕೋಚ್ ಆಗಿ ಹೋಗುವುದಿಲ್ಲ. ನನಗೆ ಈಗ ವಿಶ್ರಾಂತಿಯ ಅವಶ್ಯಕತೆ ಇದೆ. ಹಲವು ಸಮಯ ಬಯೋ ಬಬಲ್ ನಲ್ಲಿದ್ದೆ. ಹೀಗಾಗಿ ನನಗೆ ಸ್ವಚ್ಛಂದವಾದ ಗಾಳಿ ಬೇಕಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಿದ್ದ ರವಿಶಾಸ್ತ್ರಿಯವರು ತಮ್ಮ ನಿಖರವಾದ ಮಾತು, ಪದಪುಂಜಗಳಿಂದ ಆಟವನ್ನು ಮತ್ತು ಆಟಗಾರರನ್ನು ವರ್ಣಿಸುತ್ತಿದ್ದ ರೀತಿಗೆ ಎಂಥವರು ಕೂಡ ಆಕರ್ಷಿತರಾಗಲೇಬೇಕು. ರವಿಶಾಸ್ತ್ರಿಯವರಿಗೆ ಇದೇ ಹೆಚ್ಚು ಜನಮನ್ನಣೆಯನ್ನು ಪಡೆದುಕೊಳ್ಳಲು ಸಾಧ್ಯವಾಯ್ತು.
ಇದೀಗ ಮುಂದಿನ ದಿನಗಳಲ್ಲಿ ಮತ್ತೆ ಕ್ರಿಕೆಟ್ ವಿಶ್ಲೇಷಕರಾಗಿ ಸೇವೆ ಸಲ್ಲಿಸುವ ಇಂಗಿತವನ್ನು ಕೂಡ ಶಾಸ್ತ್ರಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರವಿಶಾಸ್ತ್ರಿ ಅವರಿಗೆ ಕೋಚ್ ಹುದ್ದೆ ಸಾಕಾಗಿದೆ. ಅಲ್ಲಿ ಎಷ್ಟೇ ಕೆಲಸ ಮಾಡಿದ್ರೂ, ಎಷ್ಟೇ ಯಶ ಸಾಧಿಸಿದ್ರೂ ಟೀಕೆಗಳು ತಪ್ಪುವುದಿಲ್ಲ ಎಂಬ ಸತ್ಯ ಗೊತ್ತಾಗಿಬಿಟ್ಟಿದೆ. ಹೀಗಾಗಿ ತನ್ನ ಆಸಕ್ತಿದಾಯಕವಾಗಿ ಮಾಧ್ಯಮ ಪ್ರಪಂಚ ಅದರಲ್ಲೂ ಕ್ರಿಕೆಟ್ ವಿಶ್ಲೇಷಣೆ ಮಾಡುವತ್ತ ಮತ್ತೆ ಒಲವು ತೋರಿದ್ದಾರೆ.