ಮೊಹಾಲಿ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ಮೊದಲ ಇನ್ನಿಂಗ್ಸ್ ಅನ್ನು 8 ವಿಕೆಟ್ ಗೆ 574 ರನ್ ಆಗಿದ್ದಾಗ ಡಿಕ್ಲೇರ್ ಮಾಡಿದರು. ಆಗ ಜಡೇಜಾ 175 ರನ್ ಗಳಿಸಿ ದ್ವಿಶತಕದ ಸನಿಹದಲ್ಲಿದ್ದರು. ಮೊಹಮ್ಮದ್ ಶಮಿ ಜೊತೆಗೆ 9ನೇ ವಿಕೆಟ್ಗೆ 94 ಎಸೆತಗಳಲ್ಲಿ ಅಜೇಯ 103 ರನ್ ಸೇರಿಸಿದ್ದರು.
ಜಡೇಜಾ 20ರಿಂದ 25 ನಿಮಿಷ ಮೈದಾನದಲ್ಲಿದಿದ್ದರೆ ದ್ವಿಶತಕ ಸಿಡಿಸಬಹುದಿತ್ತು ಎಂದು ನಂಬಲಾಗಿತ್ತು. ಇನ್ನಿಂಗ್ಸ್ ಡಿಕ್ಲೇರ್ ಆದ ನಂತರ ರೋಹಿತ್ ಮೇಲೆ ಪ್ರಶ್ನೆಗಳು ಏಳಲಾರಂಭಿಸಿದವು. 18 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು 194 ರನ್ ಗಳಿಸಿದ್ದಾಗ ಡಿಕ್ಕೇರ್ ಮಾಡಿದ ಘಟನೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರು ತಾಳೆ ಹಾಕಲು ಪ್ರಾರಂಭಿಸಿದರು. ಆದರೆ, ದಿನದಾಟದ ನಂತರ ಜಡೇಜಾ ಮುಂದೆ ಬಂದು ಸಂಪೂರ್ಣ ವಿವಾದದ ಬಗ್ಗೆ ತಮ್ಮ ಹೇಳಿಕೆಯನ್ನು ನೀಡುವ ಮೂಲಕ ವಿಷಯವನ್ನು ನುಣುಚಿಕೊಂಡರು.
ಎರಡನೇ ದಿನದ ಪಂದ್ಯದ ಅಂತ್ಯದ ಬಳಿಕ ರೋಹಿತ್ ನಿರ್ಧಾರವನ್ನು ಸಮರ್ಥಿಸಿಕೊಂಡ ರವೀಂದ್ರ ಜಡೇಜಾ, ಇನಿಂಗ್ಸ್ ಡಿಕ್ಲೇರ್ ಮಾಡುವಂತೆ ನಾನು ಸಂದೇಶ ಕಳುಹಿಸಿದ್ದೆ ಎಂದು ಹೇಳಿದ್ದಾರೆ.
“ನಾನು 200 ರನ್ ಪೂರೈಸಿದ ನಂತರ ಇನ್ನಿಂಗ್ಸ್ ಡಿಕ್ಲೇರ್ ಮಾಡುವಂತೆ ಕುಲದೀಪ್ ಮೂಲಕ ರೋಹಿತ್ ಸಂದೇಶ ಕಳುಹಿಸಿದ್ದರು, ಆದರೆ 200 ರನ್ ಗಳಿಸುವ ಸಲಹೆಯನ್ನು ನಾನು ವಿರೋಧಿಸಿದೆ, ಶ್ರೀಲಂಕಾ ಬ್ಯಾಟ್ಸ್ ಮನ್ ಗಳು ದಣಿದಿದ್ದಾರೆ. ಚಹಾ ವಿರಾಮದವರೆಗೆ ಅವರಿಗೆ ಬಿಡುವು ನೀಡುವುದು ಬೇಡ. ಸಿಕ್ಕ ಅವಕಾಶದಲ್ಲಿ ವಿಕೆಟ್ ಬೇಟೆ ನಡೆಸಬಹುದು ಎಂದು ಜಡೇಜಾ ತಿಳಿಸಿದ್ದಾರೆ.