Neeraj Chopra – ಭಾರತದ ಶ್ರೇಷ್ಠ ಕ್ರೀಡಾಪಟುವೇ ? 86 ದಿನ, ಆರು ಪದಕ.. ಎರಡು ರಾಷ್ಟ್ರೀಯ ದಾಖಲೆ..
![Neeraj Chopra - ಭಾರತದ ಶ್ರೇಷ್ಠ ಕ್ರೀಡಾಪಟುವೇ ? 86 ದಿನ, ಆರು ಪದಕ.. ಎರಡು ರಾಷ್ಟ್ರೀಯ ದಾಖಲೆ.. 3 NEERAJ CHOPRA Diamond League series SPORTS KARNATAKA](http://sportskarnataka.com/wp-content/uploads/2022/09/NEERAJ-CHOPRA-300x199.png)
86 ದಿನ… ಆರು ಪದಕಗಳು.. ಎರಡು ರಾಷ್ಟ್ರೀಯ ದಾಖಲೆಗಳು. ಇದು ಭಾರತದ ಸೂಪರ್ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಅವರ ಮಹೋನ್ನತ ಸಾಧನೆಯಾಗಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡ ನಂತರ ನೀರಜ್ ಚೋಪ್ರಾ ತೊಡೆ ಸಂದು ನೋವಿಗೆ ತುತ್ತಾದ್ರು. ಹೀಗಾಗಿ ನೀರಜ್ ಚೋಪ್ರಾ ಅವರು ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಅನ್ನು ಮಿಸ್ ಮಾಡಿಕೊಂಡ್ರು.
ಆದ್ರೆ ಸುಮಾರು ಒಂದು ತಿಂಗಳ ವಿಶ್ರಾಂತಿಯ ಬಳಿಕ ನೀರಜ್ ಚೋಪ್ರಾ ಅವರು ಅದ್ಭುತವಾಗಿಯೇ ಕಮ್ ಬ್ಯಾಕ್ ಮಾಡಿದ್ದರು. ಡೈಮಂಡ್ ಲೀಗ್ ನಲ್ಲಿ ಮೊದಲು ಚಿನ್ನ ಗೆದ್ದ ನಂತರ ಮೊನ್ನೆ ಮೊನ್ನೆ ಝೂರಿಚ್ ನಲ್ಲಿ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಚಿನ್ನದ ಚಾಂಪಿಯನ್ ಆಗಿ ಹೊರಹೊಮ್ಮಿದ್ರು.
ಇದೀಗ ನೀರಜ್ ಚೋಪ್ರಾ ಅವರು ತನ್ನ ಫಿಟ್ ನೆಸ್ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೀರಜ್ ಚೋಪ್ರಾ ಅವರು ಗುಜರಾತ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೂ ಅಲಭ್ಯರಾಗಲಿದ್ದಾರೆ. ಈ ವಿಚಾರವನ್ನು ಸ್ವತಃ ನೀರಜ್ ಚೋಪ್ರಾ ಅವರೇ ಹೇಳಿದ್ದಾರೆ. \
ಹೌದು, ಅನುಭವದಿಂದ ನಾನು ಈಗ ಸಾಕಷ್ಟು ಕಲಿತಿದ್ದೇನೆ. ಸಾಮಾಜಿಕ ಬದ್ಧತೆಗಳು ಮತ್ತು ಕಮರ್ಷಿಯಲ್ ಒಪ್ಪಂದಗಳನ್ನು ಹೊಂದಾಣಿಕೆ ಮಾಡುವುದು ಕಷ್ಟವಾಗಿತ್ತು. ಜೊತೆಗೆ ಅಭ್ಯಾಸವನ್ನು ನಡೆಸಬೇಕು. ಆದ್ರೆ ಈ ಋತುವಿನಲ್ಲಿ ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲವನ್ನೂ ಸರಿಯಾಗಿ ಯೋಚನೆ ಮತ್ತು ಪ್ಲಾನ್ ಮಾಡಿಕೊಂಡು ನಿಭಾಯಿಸಲು ಸಾಧ್ಯವಾಗಿದೆ ಅಂತಾರೆ ನೀರಜ್ ಚೋಪ್ರಾ.
![Neeraj Chopra - ಭಾರತದ ಶ್ರೇಷ್ಠ ಕ್ರೀಡಾಪಟುವೇ ? 86 ದಿನ, ಆರು ಪದಕ.. ಎರಡು ರಾಷ್ಟ್ರೀಯ ದಾಖಲೆ.. 4 NEERAJ CHOPRA Diamond League series SPORTS KARNATAKA](http://sportskarnataka.com/wp-content/uploads/2022/09/NEERAJ-CHOPRA-1-300x199.png)
ಫಿಟ್ ನೆಸ್ ಕಾಯ್ದುಕೊಳ್ಳುವುದು ನನ್ನ ಮುಖ್ಯ ಗುರಿಯಾಗಿದೆ. ಹಾಗೇ ತಾಂತ್ರಿಕತೆಗೂ ಒತ್ತು ನೀಡಬೇಕು. ಈ ವರ್ಷ ನಾನು ತಾಂತ್ರಿಕವಾಗಿ ಸಾಕಷ್ಟು ಸುಧಾರಿಸಿಕೊಂಡಿದ್ದೇನೆ. ಮುಖ್ಯವಾಗಿ ಜಾವೇಲಿನ ಎಸೆತ ತಾಂತ್ರಿಕ ಸ್ಪರ್ಧೆ. ಸತತವಾಗಿ 80 ಮೀಟರ್ ಗಿಂತ ಹೆಚ್ಚು ದೂರ ಎಸೆಯುತ್ತಿದ್ದೇನೆ. ಆದ್ರೆ 90ರ ಗಡಿ ದಾಟಿಲ್ಲ. ಹಾಗಂತ ನನಗೆ ನಿರಾಸೆಯಾಗಿಲ್ಲ. ಒಂದು ವೇಳೆ 90ಗ ಗಡಿ ತಲುಪಿಯೂ ಗೆಲ್ಲದಿದ್ರೂ ನನಗೆ ಬೇಸರವಿಲ್ಲ. ಯಾಕಂದ್ರೆ ಆಯಾ ದಿನ, ಪರಿಸ್ಥಿತಿ ಹೇಗಿರುತ್ತೋ ಆ ರೀತಿಯ ಪ್ರದರ್ಶನ ಬರುತ್ತೆ. ಯಾವಾಗ 90ರ ಗಡಿ ದಾಟಬೇಕೋ ಅವತ್ತು ದಾಟುತ್ತೆ ಎಂದು ಆತ್ಮವಿಶ್ವಾಸದಿಂದ ಹೇಳ್ತಾರೆ ನೀರಜ್ ಚೋಪ್ರಾ.
ಹಾಗೇ ಇಂದಿನ ದಿನಗಳಲ್ಲಿ ವಿಶ್ವ ಅಥ್ಲೆಟಿಕ್ಸ್ ಭಾರತದ ಅಥ್ಲೀಟ್ ಗಳನ್ನು ಗಮನಿಸುತ್ತಿದೆ. ಮಹತ್ವದ ಟೂರ್ನಿಗಳಲ್ಲಿ ಭಾರತದ ಅಥ್ಲೀಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಆಸೆ. ಹಾಗೇ ಪ್ರತಿ ಬಾರಿ ಸ್ಪರ್ಧೆ ಮಾಡುವಾಗಲೂ ಚಿನ್ನವನ್ನೇ ಗೆಲ್ಲಬೇಕು ಎಂಬ ನಿರೀಕ್ಷೆಯನ್ನಿಟ್ಟುಕೊಳ್ಳುತ್ತಾರೆ. ಇದು ಸರಿಯಲ್ಲ. ಯಾಕಂದ್ರೆ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸಾಕಷ್ಟು ಸ್ಪರ್ಧೆಗಳಿರುತ್ತವೆ. ಒತ್ತಡಗಳಿರುತ್ತವೆ. ಇದನ್ನು ಅರ್ಥಮಡಿಕೊಳ್ಳಬೇಕು. ನಾನು ವಿಶ್ವ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಾಗ ಚಿನ್ನ ಯಾಕೆ ಗೆದ್ದಿಲ್ಲ ಎಂದು ಅನೇಕರು ಕೇಳಿದ್ದರು. ಇದು ಸರಿಯಾದ ಮನೋಭಾವನೆಯಲ್ಲ. ನಾವು ಪದಕದ ಬಣ್ಣದ ಹಿಂದೆ ಹೋಗಬಾರದು. ನಮ್ಮ ಕ್ರೀಡಾಪಟುಗಳನ್ನು ನಾವು ಬೆಂಬಲಿಸಬೇಕು ಎನ್ನುವ ನೀರಜ್ ಚೋಪ್ರಾ, ಭಾರತದ ಶ್ರೇಷ್ಠ ಕ್ರೀಡಾಪಟು ನೀರಜ್ ಚೋಪ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ.. ತೀರ್ಪು ನೀಡುವುದು ಜನರಿಗೆ ಬಿಟ್ಟ ವಿಚಾರ.