ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮಧ್ಯಪ್ರದೇಶ ಫೈನಲ್ ತಲುಪಿದೆ. ಸೆಮಿಫೈನಲ್ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು 174 ರನ್ ಗಳಿಂದ ಹೀನಾಯವಾಗಿ ಸೋಲಿಸಿ ಎಂ.ಪಿ ರಣಜಿ ಟ್ರೋಫಿಯ ಫೈನಲ್ ಪ್ರವೇಶಿಸಿದೆ.
ನಾಲ್ಕನೇ ದಿನ ಮಧ್ಯಪ್ರದೇಶದ ಫೈನಲ್ ಪ್ರವೇಶ ಬಹುತೇಕ ಖಚಿತವಾಗಿತ್ತು. ಐದನೇ ದಿನ ಕುಮಾರ ಕಾರ್ತಿಕೇಯ ಮತ್ತು ಮತ್ತು ಸಂಗಡಿಗರ ಸ್ಪಿನ್ ದಾಳಿ ಮುಂದೆ ಪಶ್ಚಿಮಬಂಗಾಳದ ಬ್ಯಾಟ್ಸ್ ಮನ್ ಗಳು ಪವಿಲಿಯನ್ ಪರೇಡ್ ನಡೆಸಿದರು. ಪಶ್ಚಿಮ ಬಂಗಾಳ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 175 ರನ್ ಗಳಿಗೆ ಆಲೌಟ್ ಆಯಿತು.
ದಿನದ ಆರಂಭದಲ್ಲಿ ಅನುಸ್ತುಪ್ ಮಜುಂದಾರ್ ವಿಕೆಟ್ ಒಪ್ಪಿಸಿದರು. ನಾಯಕ ಅಭಿಮನ್ಯು ಈಶ್ವರನ್ 78ರನ್ ಗಳಿಸಿ ಔಟಾದರು. ಕೊನೆಯಲ್ಲಿ ಶಹಬಾಜ್ ಆಹ್ಮದ್ 22 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಕಾಣಿಕೆ ಬರಲಿಲ್ಲ. ಹೀಗಾಗಿ ಪಶ್ಚಿಮಬಂಗಾಳ ಹೀನಾಯ ಸೋಲಿಗೆ ಶರಣಾಯಿತು. ಸ್ಪಿನ್ ಬಲೆ ಹೆಣೆದ ಕುಮಾರ್ ಕಾರ್ತಿಕೇಯ 67 ರನ್ ಗಳಿಗೆ ಐದು ವಿಕೆಟ್ ಪಡೆದು ಮಿಂಚಿದರು. ಗೌರವ್ ಯಾದವ್ 19ರನ್ ಗಳಿಗೆ 3 ವಿಕೆಟ್ ಪಡೆದರೆ, ಸರಂಶ ಜೈನ್ 69 ರನ್ ಗಳಿಗೆ ಎರಡು ವಿಕೆಟ್ ಪಡೆದರು.
ಮಧ್ಯಪ್ರದೇಶ ಮೊದಲ ಇನಿಂಗ್ಸ್ನಲ್ಲಿ 341 ರನ್ ಗಳಿಸಿದರೆ ಬೆಂಗಾಲ್ 273 ರನ್ಗಳಿಗೆ ಆಲೌಟ್ ಆಗಿತ್ತು. ಮಧ್ಯಪ್ರದೇಶ 2ನೇ ಇನ್ನಿಂಗ್ಸ್ನಲ್ಲಿ 281 ರನ್ ಗಳಿಸಿದರೆ, ಬೆಂಗಾಲ್ 175 ರನ್ ಗಳಿಗೆ ಆಲೌಟ್ ಆಗಿತ್ತು. ಫೈನಲ್ ಪ್ರವೇಶಿಸಿದ ಮಧ್ಯಪ್ರದೇಶ ಅಂತಿಮ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.