ಕ್ರಿಕೆಟ್ ಆಟವೇ ಅಂತಹದ್ದು. ಈ ಆಟದಲ್ಲಿ ಆಟಗಾರರು ಮೈದಾನಕ್ಕೆ ಇಳಿದರೆ ಒಟ್ಟಾಗಿ ತಂಡದ ಗೆಲುವಿನಲ್ಲಿ ಶ್ರಮಿಸುತ್ತಾರೆ. ಹಿಂದಿನ ದ್ವೇಷವನ್ನು ಮರೆತು, ತಂಡಕ್ಕಾಗಿ ಆಡುತ್ತಾರೆ. ಇನ್ನು ವಿರೋಧಿ ಆಟಗಾರರು ಒಂದೇ ತಂಡದಲ್ಲಿದ್ದರೂ ಸಹ ದ್ವೇಷ ಕಡಿಮೆ ಆಗಿ, ಪ್ರೀತಿ ಚಿಗುರುತ್ತದೆ. ಇದಕ್ಕೆ ಸೋಮವಾರ ನಡೆದ ಪಂದ್ಯವೇ ಉತ್ತಮ ಉದಾಹರಣೆ.
ಐಪಿಎಲ್ 2022 ರಲ್ಲಿ ಸೋಮವಾರ ಲಖನೌ ಮತ್ತು ಗುಜರಾತ್ ನಡುವಿನ ಪಂದ್ಯದ ವೇಳೆ ಇಂತಹ ಪ್ರಸಂಗ ನಡೆದಿದೆ. ಕ್ರಿಕೆಟ್ ಜಗತ್ತಿನ ವಿರೋಧಿಗಳಾದ ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಒಟ್ಟಿಗೆ ಆಡಿ ತಂಡದ ಗೆಲುವಿನಲ್ಲಿ ತಮ್ಮ ಕಾಣಿಕೆ ನೀಡಿದ್ದಾರೆ. ಶುಭಮನ್ ಗಿಲ್ ಅವರ ಕ್ಯಾಚ್ ಅನ್ನು ದೀಪಕ್ ಹಿಡಿದಾಗ, ಕೃನಾಲ್ ಅವರತ್ತ ಓಡಿ ಬಂದು ಅಪ್ಪಿಕೊಂಡರು. ಲಖನೌ ಇನ್ನಿಂಗ್ಸ್ ವೇಳೆಯೂ ದೀಪಕ್ ಪೆವಿಲಿಯನ್ಗೆ ಹಿಂತಿರುಗುತ್ತಿದ್ದಾಗ, ಕೃನಾಲ್ ಅವರಿಗೆ ಕೈಕುಲುಕಿದರು.
ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ದೇಶೀಯ ಕ್ರಿಕೆಟ್ನಲ್ಲಿ ಬರೋಡ ಪರ ಆಡುತ್ತಾರೆ. ಕಳೆದ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ಉತ್ತರಾಖಂಡ ವಿರುದ್ಧ ಪಂದ್ಯ ನಡೆಯಬೇಕಿತ್ತು. ಆ ಸಮಯದಲ್ಲಿ ತಂಡದ ಉಪನಾಯಕ ದೀಪಕ್ ಮತ್ತು ನಾಯಕ ಕೃನಾಲ್ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದರು. ಜಗಳ ಎಷ್ಟು ಬೆಳೆದಿತ್ತು ಎಂದರೆ ದೀಪಕ್ ಅಭ್ಯಾಸ ಬಿಟ್ಟು ಮನೆಗೆ ಹೋಗಿದ್ದರು. ಇದಾದ ಬಳಿಕ ಬರೋಡಾ ಕ್ರಿಕೆಟ್ ಸಂಸ್ಥೆಗೂ (ಬಿಸಿಎ) ದೂರು ನೀಡಿದ್ದರು. ಎಲ್ಲದರಲ್ಲೂ ಕೃನಾಲ್ ತನ್ನನ್ನು ನಿಂದಿಸುತ್ತಿದ್ದ ಎಂದು ಹೇಳಿದ್ದರು. ತಂಡ ಕ್ಯಾಚಿಂಗ್ ಅಭ್ಯಾಸ ಮಾಡಬೇಕೋ ಅಥವಾ ಬ್ಯಾಟಿಂಗ್ ಮಾಡಬೇಕೋ ಎಂಬ ಬಗ್ಗೆ ಇಬ್ಬರ ನಡುವೆ ಜಟಾಪಟಿ ನಡೆದಿತ್ತು.
ಈ ವೇಳೆ ದೀಪಕ್ ಮಾತನಾಡಿ, ‘ನೆಟ್ಸ್ ನಂತರ ಬ್ಯಾಟಿಂಗ್ ಅಭ್ಯಾಸ ಮಾಡಲು ಹೋದಾಗ, ಕೃನಾಲ್ ಕ್ಯಾಚಿಂಗ್ ಅಭ್ಯಾಸ ಮಾಡಲು ನನಗೆ ಹೇಳಿದರು. ನಾನು ಕೋಚ್ನಿಂದ ಬ್ಯಾಟಿಂಗ್ ಅಭ್ಯಾಸಕ್ಕೆ ಅನುಮೋದನೆ ಪಡೆದಿದ್ದೇನೆ ಎಂದು ತಿಳಿಸಿದೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು” ಎಂದು ತಿಳಿಸಿದ್ದರು.
ದೀಪಕ್ ಪ್ರಕಾರ, ನೀವು ಬರೋಡಕ್ಕೆ ಹೇಗೆ ಆಡುತ್ತೀರಿ ಎಂದು ನಾನು ನೋಡುತ್ತೇನೆ ಎಂದು ಕೃನಾಲ್ ಹೇಳಿದ್ದರು? ನಾನು ಹೋಟೆಲ್ಗೆ ಹೋದಾಗ ತಂಡದಲ್ಲಿ ನನ್ನ ಹೆಸರಿರಲಿಲ್ಲ, ಆದ್ದರಿಂದ ನಾನು ಮನೆಗೆ ಹೋದೆ. ಇದಾದ ಬಳಿಕ ದೀಪಕ್ ಕೂಡ ಬರೋಡ ತಂಡವನ್ನು ತೊರೆದಿದ್ದರು. ಅದೇ ಸಮಯದಲ್ಲಿ, ಕೃನಾಲ್ ಪಾಂಡ್ಯ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು.
ಇದೀಗ ಐಪಿಎಲ್ನಲ್ಲಿ ಇಬ್ಬರೂ ಆಟಗಾರರು ಒಂದೇ ತಂಡದ ಪರ ಆಡುತ್ತಿದ್ದು, ಇಬ್ಬರ ನಡುವೆ ಉತ್ತಮ ಸ್ನೇಹವೂ ಬೆಳೆದಿದೆ. ದೀಪಕ್ ಅವರನ್ನು ಲಖನೌ 5 ಕೋಟಿ 75 ಲಕ್ಷಕ್ಕೆ ಖರೀದಿಸಿದೆ. ಇದೇ ತಂಡವು 8 ಕೋಟಿ 25 ಲಕ್ಷಕ್ಕೆ ಕೃನಾಲ್ ಪಾಂಡ್ಯ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.