ಐಪಿಎಲ್ನಲ್ಲಿ ಬುಧವಾರ ರೋಚಕ ಪಂದ್ಯ ನಡೆದಿದೆ. 129 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳ ದಾಳಿಗೆ ತತ್ತರಿಸಿತು. ಒಂದು ಹಂತದಲ್ಲಿ ಕೋಲ್ಕತ್ತಾ ಪಂದ್ಯವನ್ನು ನಿರಾಯಾಸವಾಗಿ ಗೆಲ್ಲುತ್ತದೆ ಎಂದು ಕಾಣುತ್ತಿತ್ತು. ಆದರೆ ನೈಟ್ ರೈಡರ್ಸ್ ಮಾಡಿದ ಆ ಒಂದು ಮಿಸ್ಟೆಕ್ ಎರಡು ಅಂಕವನ್ನು ಕಸಿದುಕೊಂಡಿತು.
ಪಂದ್ಯದ 19ನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಔಟ್ ಮಾಡುವ ಸುಲಭ ಅವಕಾಶವನ್ನು ಕೋಲ್ಕತ್ತಾ ಹೊಂದಿತ್ತು. ಆದರೆ ಈ ಅವಕಾಶವನ್ನು ಕೆಕೆಆರ್ ಕೈ ಚೆಲ್ಲಿತು. ದಿನೇಶ್ ಔಟಾಗಿದ್ದರೆ ಕೆಕೆಆರ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು. ವೆಂಕಟೇಶ್ ಅಯ್ಯರ್ ಎಸೆದ 19ನೇ ಓವರ್ ನ ಎರಡನೇ ಎಸೆತವನ್ನು ಆಫ್ ಸೈಡ್ ನತ್ತ ಆಡಿದರು. ನಾನ್ ಸ್ಟ್ರೈಕರ್ ನಲ್ಲಿದ್ದ ಹರ್ಷಲ್ ಪಟೇಲ್ ಓಡಲು ಆರಂಭಿಸಿ ಬಿಟ್ಟರು. ದಿನೇಶ್ ಕಾರ್ತಿಕ್ ಎರಡು ಹೆಜ್ಜೆ ಓಡಿ ನಿಂತರು. ಪರಿಣಾಮ ಇಬ್ಬರೂ ಬ್ಯಾಟ್ಸ್ಮನ್ಗಳು ಒಂದೇ ತುದಿಯಲ್ಲಿ ನಿಂತರು. ಉಮೇಶ್ ಯಾದವ್ ಚೆಂಡನ್ನು ವಿಕೆಟ್ ಕೀಪರ್ ತುದಿಗೆ ಎಸೆದರು. ಇದರ ಬದಲು ಬೌಲರ್ ತುದಿಗೆ ಎಸೆಯಬೇಕಿತ್ತು. ಚೆಂಡು ಸ್ಪಂಗೆ ಬೀಳಲಿಲ್ಲ. ಹಿಂದೆ ಯಾವ ಆಟಗಾರ ಸಹ ಇರಲಿಲ್ಲ. ಪರಿಣಾಮ ದಿನೇಶ್ ಕಾರ್ತಿಕ್ ಆರಾಮವಾಗಿ ನಾನ್ ಸ್ಟ್ರೈಕರ್ ಎಂಡ್ ತಲುಪಿದರು.
ಈ ವೇಳೆ ಆರ್ಸಿಬಿ ಒಂದು ವಿಕೆಟ್ ಕಳೆದುಕೊಂಡಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ಇದೀಗ ಈ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಅವಕಾಶವನ್ನು ಬಳಸಿಕೊಂಡ ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕಾರ್ತಿಕ್ ಕೊನೆಯ ಓವರ್ನಲ್ಲಿ 200 ಸ್ಟ್ರೈಕ್ ರೇಟ್ನಲ್ಲಿ 7 ಎಸೆತಗಳಲ್ಲಿ 14 ರನ್ ಗಳಿಸಿದರು. ಇದೇ ಸಮಯದಲ್ಲಿ ಹರ್ಷಲ್ ಅವರ ಬ್ಯಾಟ್ನಿಂದ 6 ಎಸೆತಗಳಲ್ಲಿ 10 ರನ್ ಬಂದವು. ಅವರಿಬ್ಬರೂ RCBಗೆ ಋತುವಿನ ಮೊದಲ ಜಯದ ಮಾಲೆ ತೊಡಿಸಿದರು. ಈ ಗೆಲುವಿನಲ್ಲಿ ಕಾರ್ತಿಕ್ ಅವರ ಅದ್ಭುತ ಇನ್ನಿಂಗ್ಸ್ ಜತೆಗೆ ಕೋಲ್ಕತ್ತಾದ ಕಳಪೆ ಫೀಲ್ಡಿಂಗ್ ಎದ್ದು ಕಂಡಿತು.
129 ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಅತ್ಯಂತ ಕಳಪೆ ಆರಂಭವನ್ನು ಪಡೆಯಿತು. ಪವರ್ ಪ್ಲೇನಲ್ಲಿ ತಂಡವು 36 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಅನುಜ್ ರಾವತ್ (0), ನಾಯಕ ಫಾಫ್ ಡು ಪ್ಲೆಸಿಸ್ (5) ಮತ್ತು ವಿರಾಟ್ ಕೊಹ್ಲಿ (12) ರನ್ಗಳಿಗೆ ಔಟಾದರು, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಆಧಾರವಾದರು. ಮೊದಲ ಪಂದ್ಯದಲ್ಲಿ ಆರ್ಸಿಬಿ ಪಂಜಾಬ್ ವಿರುದ್ಧ 5 ವಿಕೆಟ್ಗಳ ಸೋಲನುಭವಿಸಿತ್ತು.